ಮೋದಿ ಕೆಲವರಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ
ಪ್ರಧಾನಿ ಮೋದಿ ಅವರು ಕೆಲವರಿಗಾಗಿ ಮಾತ್ರ ಕೆಲಸಮಾಡುತ್ತಿದ್ದಾರೆ, ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.
ನವದೆಹಲಿ, ನವೆಂಬರ್, 21: ಪ್ರಧಾನಿ ಮೋದಿ ಅವರು ಕೆಲವರಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಬಡವರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ನಿತ್ಯ ಖರ್ಚುಗಳಿಗಾಗಿ ಕ್ಯೂನಲ್ಲಿ ನಿಂತಿರುವವರ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು.[ಸ್ವಲ್ಪ ದಿನ ಸಹಿಸಿಕೊಳ್ಳಿ: ಪ್ರಧಾನಿ ನರೇಂದ್ರ ಮೋದಿ ಮನವಿ]
"ನಾನೇ ಸ್ವತಃ ಎಟಿಎಂ ಕೇಂದ್ರಗಳ ಬಳಿ ಹೋಗಿ ಪರಿಶೀಲನೆ ನಡೆಸಿದೆ. ಜನ ತಾವು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ನನ್ನ ಬಳಿ ಹೇಳಿಕೊಂಡರು" ಎಂದು ಅವರು ಸಂಸತ್ ಭವನದ ಹೊರಗೆ ಮಾಧ್ಯಮಗಳಿಗೆ ತಿಳಿಸಿದರು.
"ಕೆಲವು ಮಂದಿ ಗುಟ್ಟಾಗಿ, ಬ್ಯಾಂಕ್ ಹಿಂಬಾಗಿಲಿನ ಮೂಲಕ ತಮ್ಮ ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಮ್ಮಂತಹ ಬಡವರು, ರೈತರು, ಸಾಮಾನ್ಯ ಜನರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ" ಎಂದು ಜನ ಹೇಳುತ್ತಿರುವುದಾಗಿ" ಅವರು ತಿಳಿಸಿದರು.[ನೋಟು ನಿಷೇಧ ಪರಿಣಾಮ ಮಣಿಪುರದಲ್ಲಿ ದಿನಪತ್ರಿಕೆಗಳು ಬಂದ್]
ಶ್ರೀಮಂತರು ಹಿಂಬಾಗಿಲನ ಮೂಲಕ ಯಾವುದೇ ತೊಂದರೆಯಿಲ್ಲದಂತೆ ತಮ್ಮ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯರು ಮಾತ್ರ ಕ್ಯೂಲೈನ್ ನಲ್ಲಿ ನಿಂತು ಪರಿತಪಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೂ ಮುನ್ನ ರಾಹುಲ್ ಗಾಂಧಿ ಅವರು ಹಲವು ಎಟಿಎಂ ಕೇಂದ್ರಗಳ ಬಳಿ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದರು.
ನೋಟು ನಿಷೇಧದ ನಂತರ ಸ್ವರ್ಣಯುಗ ಆರಂಭವಾಗುತ್ತದೆ ಎಂದು ಮೋದಿ ಹೇಳುತ್ತಿದ್ದಾರೆ. ಸ್ವರ್ಣಯುಗ ಯಾರಿಗಾಗಿ ಆರಂಭವಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ನೋಟು ನಿಷೇಧ ಕ್ರಮದಿಂದ 15ರಿಂದ 20 ಮಂದಿ ಮೋದಿ ಬೆಂಬಲಿಗರು ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಸಾಮಾನ್ಯ ಜನರು ಮಾತ್ರ ಕ್ಯೂನಲ್ಲಿ ನಿಂತು ಸಮಯ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈ ಕುರಿತು ಪ್ರತಿಪಕ್ಷಗಳೊಂದಿಗೆ ಅವರೇಕೆ ಚರ್ಚೆ ಮಾಡಲು ಸಿದ್ಧರಿಲ್ಲ. ನಾವು ಈ ಕುರಿತು ಚರ್ಚೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಅವರಿಗೆ ಸಂಸತ್ ಗೆ ಬರುವ ಜರೂರಿಯಾದರೂ ಏನು? ಅವರು ಮಂತ್ರಿಗಳೊಂದಿಗೂ ಮಾತನಾಡುವುದಿಲ್ಲ. ಅಧಿಕಾರಿಗಳೊಂದಿಗೂ ಮಾತನಾಡುವುದಿಲ್ಲ ಅವರಿಗೆ ತೋಚಿದಂತೆ ಅವರು ಮಾಡುತ್ತಿದ್ದಾರೆ" ಎಂದು ರಾಹುಲ್ ಆರೋಪಿಸಿದರು.