ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ, ಸೇನಾ ಮುಖ್ಯಸ್ಥರಿಂದ ಗೌರವ ಸಲ್ಲಿಕೆ
ನವದೆಹಲಿ, ಫೆಬ್ರವರಿ 15: ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಮಂಗಳವಾರ ಹುತಾತ್ಮರಾದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಬುಧವಾರ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಪಿನ್ ರಾವತ್ ಅವರು ಘಟನೆ ಬಗ್ಗೆ ವಿವರಗಳನ್ನು ಪ್ರಧಾನಿಗೆ ವಿವರಿಸಿದರು.
ಎನ್ ಕೌಂಟರ್ ವೇಳೆ ಸ್ಥಳೀಯರು ಉಗ್ರರಿಗೆ ನೀಡಿದ ಬೆಂಬಲದ ಬಗ್ಗೆ ಸೇನಾ ಮುಖ್ಯಸ್ಥರು ಆತಂಕ ವ್ಯಕ್ತಪಡಿಸಿದರು. "ನಮ್ಮ ಕಾರ್ಯಾಚರಣೆ ವೇಳೆ ಅಡೆತಡೆ ಮಾಡಿದವರು ಮತ್ತು ಬೆಂಬಲ ನೀಡುವವರನ್ನು ಉಗ್ರರ ಕೆಲಸಗಾರರು ಎಂದು ನೋಡಲಾಗುತ್ತದೆ" ಎಂದು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ವೇಳೆ ಹೇಳಿದರು.[ಜಮ್ಮು ಕಾಶ್ಮೀರ ಬಂಡಿಪೋರಾ ಎನ್ಕೌಂಟರ್, 3 ಸೈನಿಕರು ಹುತಾತ್ಮ]
ಒಂದು ವೇಳೆ ಸ್ಥಳೀಯರು ಐಎಸ್ ಐಎಸ್ ಹಾಗೂ ಪಾಕಿಸ್ತಾನದ ಬಾವುಟ ತೋರಿಸಿ ಭಯಪಡಿಸಲು ಪ್ರಯತ್ನಿಸುವುದನ್ನು ಮುಂದುವರಿಸಲು ಯತ್ನಿಸಿದರೆ ಅಂಥವರನ್ನು ರಾಷ್ಟ್ರ ವಿರೋಧಿಗಳು ಎಂದು ಪರಿಗಣಿಸಬೇಕಾಗುತ್ತದೆ. ಮತ್ತು ಅಂಥವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.[ಉಗ್ರರು ಒಳನುಳಲು ತೋಡಿದ್ದ 20 ಅಡಿ ಸುರಂಗ ಪತ್ತೆ ಹಚ್ಚಿದ ಬಿಎಸ್ ಎಫ್]
ಬಂಡಿಪೋರ್ ನ ಹಂದ್ವಾರದಲ್ಲಿ ಮಂಗಳವಾರ ಮೇಜರ್ ಸತೀಶ್ ದಹಿಯಾ ಸೇರಿದಂತೆ ನಾಲ್ವರು ಸೈನಿಕರು ಹುತಾತ್ಮರಾಗಿದ್ದರು. ಇಬ್ಬರು ಉಗ್ರರ ಹತ ಮಾಡಲಾಗಿತ್ತು. ಇನ್ನು ಎನ್ ಕೌಂಟರ್ ವೇಳೆ ಒಬ್ಬ ನಾಗರಿಕ, ಆರು ಯೋಧರು ಹಾಗೂ ಸಿಆರ್ ಪಿಎಫ್ ಅಧಿಕಾರಿ ಗಾಯಗೊಂಡಿದ್ದರು.