'ವಿಶ್ವ ಸಂಸ್ಕೃತಿ ಉತ್ಸವ'ಕ್ಕೆ ಕ್ಷಣಗಣನೆ, ತಾಲೀಮು ಭಾರೀ ಜೋರು
ನವದೆಹಲಿ,ಮಾರ್ಚ್,11: ಆರ್ಟ್ ಆಫ್ ಲೀವಿಂಗ್ ಸಂಸ್ಥೆ ವತಿಯಿಂದ ನವದೆಹಲಿಯ ಯಮುನಾ ನದಿ ತೀರದಲ್ಲಿ ಇಂದಿನಿಂದ ಮಾರ್ಚ್ 13ರವರೆಗೆ ನಡೆಯುತ್ತಿರುವ 'ವಿಶ್ವ ಸಾಂಸ್ಕೃತಿಕ ಉತ್ಸವ'ಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಈ ಉತ್ಸವಕ್ಕೆ ನಾಡಿನ ಹಲವಾರು ಗಣ್ಯರು, ರಾಜಕೀಯ ಮುಖಂಡರು, ಲಕ್ಷಾಂತರ ಜನ ಸಾಗರವೇ ಹರಿದು ಬರುವುದರಿಂದ ಕಾರ್ಯಕ್ರಮದಲ್ಲಿ ಯಾವುದೇ ಕುಂದು ಕೊರತೆ ಎದುರಾಗದಂತೆ ವಿಶ್ವ ಸಾಂಸ್ಕೃತಿಕ ಉತ್ಸವ ಸಿದ್ಧತಾ ಸಮಿತಿ ಎಚ್ಚರ ವಹಿಸುತ್ತಿದೆ.[ವಿಶ್ವ ಸಾಂಸ್ಕೃತಿಕ ಉತ್ಸವ]
ಈ ವಿಜೃಂಭಣೆ ಉತ್ಸವಕ್ಕೆ ನಾಡಿನ ಹಲವಾರು ಕಲಾತಂಡಗಳಿಗೆ ಆಹ್ವಾನ ನೀಡಲಾಗಿದೆ. ಈ ಎಲ್ಲಾ ಕಲಾ ತಂಡಗಳು ತಮ್ಮ ಪ್ರದೇಶದ ಸಾಂಸ್ಕೃತಿಕ ವೈಭವದ ಮೂಲಕ ಮಿಂಚಲಿದ್ದಾರೆ, ಪ್ರತಿಯೊಂದು ನೃತ್ಯ ತಂಡಗಳು ಈಗಾಗಲೇ ತಾಲೀಮಿನಲ್ಲಿ ತೊಡಗಿದ್ದು, ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಕಾತುರರಾಗಿದ್ದಾರೆ.[ದಂಡ ಕಟ್ಟಲು ನಕಾರ, ಜೈಲಿಗೆ ಹೋಗಲು ಸಿದ್ಧ: ಶ್ರೀಶ್ರೀ ರವಿಶಂಕರ್]
ಬನ್ನಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ನಡೆಯುತ್ತಿರುವ ಸಿದ್ಧತೆಗಳನ್ನು ನೋಡಿಕೊಂಡು ಬರೋಣ. [ಚಿತ್ರಗಳು: ಪಿಟಿಐ]
ರಕ್ಷಣಾತ್ಮಕ ಕಾರ್ಯದಲ್ಲಿ ಪೊಲೀಸರು
ಲಕ್ಷಾಂತರ ಮಂದಿ ಆಗಮಿಸುವ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗಣ್ಯರ ಸಮಾಗಮದಲ್ಲಿ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಲು ಪೊಲೀಸರು ಈಗಾಗಲೇ ರಕ್ಷಣಾತ್ಮಕ ಕಾರ್ಯದಲ್ಲಿ ತೊಡಗಿದ್ದಾರೆ.[ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ 'ವಿಶ್ವ ಸಂಸ್ಕೃತಿ ಉತ್ಸವ']
ಮುಖ್ಯದ್ವಾರದಲ್ಲಿ ನಿಲ್ಲಲಿರುವ ಗಜ
ವಿಶ್ವ ಸಾಂಸ್ಕೃತಿಕ ಉತ್ಸವ ನಡೆಯುವ ಇಡೀ ಆವರಣ ಕಳೆಗಟ್ಟಲೆಂಬ ಕಾರಣದಿಂದ ವೇದಿಕೆಯಿಂದ ಹಿಡಿದು, ಮುಖ್ಯದ್ವಾರದವರೆಗೂ ಗಜಗೊಂಬೆಗಳು, ಹೂ ಹೀಗೆ ನಾನಾ ವಸ್ತುಗಳಿಂದ ಸಿಂಗಾರಗೊಳಿಸಲಾಗುತ್ತಿದೆ.
ಮಕ್ಕಳ ನೃತ್ಯ ನೋಡುವ ಬನ್ನಿ
ಮಕ್ಕಳ ನೃತ್ಯ ತಂಡವೂ ವಿಶ್ವ ಸಾಂಸ್ಕೃತಿಕ ಸಂಭ್ರಮದಲ್ಲಿ ಮಿಂಚಲು ಸಜ್ಜಾಗಿದೆ. ನಾಡಿನ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಲು ಹುಮ್ಮಸಿನಲ್ಲಿರುವ ಮಕ್ಕಳು ತಾಲೀಮಿನಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಕಲಾವಿದರ ತಾಲೀಮು
ತಮ್ಮ ಪ್ರದೇಶದ ವೇಷಭೂಷಣ, ಕಲೆಯನ್ನು ಗಣ್ಯರ ಎದುರಿಗೆ ಪ್ರದರ್ಶಿಸಿ ಭೇಷ್ ಎನಿಸಿಕೊಳ್ಳಲು ಡೊಳ್ಳು ಕಲಾತಂಡವೂ ಈಗಾಗಲೇ ಭಾರೀ ಭರ್ಜರಿಯಾಗಿಯೇ ತಯಾರಾಗುತ್ತಿದೆ.
ಶ್ವಾನದಳದಿಂದ ಸ್ಥಳದ ಪರಿಶೀಲನೆ
ಒಂದೇ ಸೂರಿನಡಿಯಲ್ಲಿ ಲಕ್ಷಾಂತರ ಮಂದಿ ಸೇರುವುದರಿಂದ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಸಮಾರಂಭದ ಇಡೀ ಸ್ಥಳವನ್ನು ಪರಿಶೀಲಿಸುವತ್ತ ಶ್ವಾನದಳ ತೊಡಗಿರುವುದು.