ಕೊನೆಗೂ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಪಾಕಿಸ್ತಾನದ ಕಂದ
ನವದೆಹಲಿ, ಜೂನ್ 13: ವಿದೇಶದಲ್ಲಿರುವ ಭಾರತೀಯರಿಗಷ್ಟೇ ಅಲ್ಲದೆ, ಭಾರತದಿಂದ ಸಹಾಯ ಬೇಡುವ ವಿದೇಶಿಯರಿಗೂ ಮುಕ್ತವಾಗಿ ನೆರವು ನೀಡುತ್ತಿರುವ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕವೇ ಹಲವಾರು ಸಮಸ್ಯೆಗಳಿಗೆ ಶುಭಾಂತ್ಯ ಹಾಡಿದ್ದಾರೆ.
ಪಾಕಿಸ್ತಾನದ ಮಗುವಿನ ಚಿಕಿತ್ಸೆಗೆ ವೀಸಾ ಕೊಡಿಸಿದ ಸಚಿವೆ ಸುಷ್ಮಾ
ಇದೀಗ ಸುಷ್ಮಾ ಸ್ವರಾಜ್ ಶತ್ರು ರಾಷ್ಟ್ರ ಪಾಕಿಸ್ತಾನದ ಪುಟ್ಟ ಕಂದಮ್ಮನಿಗೆ ಇದೇ ರೀತಿ ಸಹಾಯ ಹಸ್ತ ಚಾಚುವ ಮೂಲಕ ರಾಜತಾಂತ್ರಿಕ ವ್ಯವಹಾರಗಳೇ ಬೇರೆ, ಮಾನವೀಯತೆಯೇ ಬೇರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪಾಕಿಸ್ತಾನದ, ನಾಲ್ಕು ತಿಂಗಳ ಕಂದಮ್ಮ ರೋಹಾನ್ ಹುಟ್ಟುತ್ತಲೇ ಮಾರಣಾಂತಿಕ ಕಾಯಿಲೆಯೊಂದಕ್ಕೆ ಗುರಿಯಾಗಿದ್ದ. ಹಾಲ್ಗಲ್ಲದ ನಗುವಿನ ಮೂಲಕ ಇಡಿ ಮನೆಯಲ್ಲೂ ಸಂಭ್ರಮ ಬಿತ್ತಬೇಕಿದ್ದ ಮಗು, ಅಮ್ಮನ ಮಡಿಲಲ್ಲಿ ಮಲಗಿದ್ದಕ್ಕಿಂತ ಹುಟ್ಟಿದಾಗಿನಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದೇ ಹೆಚ್ಚು!
ಪಾಕಿಸ್ತಾನದಿಂದ ಭಾರತಕ್ಕೆ ಉಜ್ಮಾಳನ್ನು ಕರೆತಂದ ರೋಚಕ ಕತೆ
ಮಗುವಿನ ಹೃದಯದಲ್ಲಾಗಿದ್ದ ರಂಧ್ರದಿಂದಾಗಿ ಉಸಿರಾಟದ ಸಮಸ್ಯೆ ಆರಂಭವಾಗಿತ್ತು. ಅದಕ್ಕೆ ತಕ್ಷಣವೇ ಚಿಕಿತ್ಸೆಯಾಗದಿದ್ದರೆ ಮಗು ಬದುಕುಳಿಯುವುದು ಕಷ್ಟ ಎಂಬ ವೈದ್ಯರ ಮಾತು ಕೇಳಿ ತಂದೆ-ತಾಯಿಗೆ ಉಮ್ಮಳಿಸಿತ್ತು ದುಃಖ. ಚಿಕಿತ್ಸೆಗೆ ಹಣವಿಲ್ಲ ಅನ್ನೋದಲ್ಲ ಅವರ ಸಮಸ್ಯೆ, ಬದಲಾಗಿ ಪಾಕಿಸ್ತಾನದಲ್ಲಿ ಇಂಥ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಆಸ್ಪತ್ರೆಗಳೇ ಇಲ್ಲ!
No. The child will not suffer. Pls contact Indian High Commission in Pakistan. We will give the medical visa. pic.twitter.com/4ADWkFV6Ht https://t.co/OLVO3OiYMB
— Sushma Swaraj (@SushmaSwaraj) May 31, 2017
ದಂಪತಿಗಳಿಗೆ ತಕ್ಷಣಕ್ಕೆ ನೆನಪಿಗೆ ಬಂದಿದ್ದು ಭಾರತ! ನೆರೆಯ ಭಾರತ ಮಾತ್ರವೇ ತಮ್ಮ ಸಹಾಯಕ್ಕೆ ಬಂದೀತು ಎಂಬ ಧೈರ್ಯದಿಂದ ಪ್ರಯತ್ನ ಆರಂಭವಾಯಿತು. ಟ್ವಿಟ್ಟರ್ ಮೂಲಕವೇ ಹಲವರಿಗೆ ಸಹಾಯ ಮಾಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಗ್ಗೆ ತಿಳಿದಿದ್ದ ದಂಪತಿ ಸುಷ್ಮಾ ಅವರಿಗೆ ನೇರವಾಗಿ ಟ್ವೀಟ್ ಮಾಡಿದ್ದರು.
ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ
ರಾಜತಾಂತ್ರಿಕ ವೈಷಮ್ಯವನ್ನೆಲ್ಲ ಮರೆತು, ಮಾನವೀಯತೆಯ ನೆಲೆಯಲ್ಲಿ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ನೆರವಿನ ಭರವಸೆ ನೀಡಿದರು. ಭಾರತಕ್ಕೆ ಚಿಕಿತ್ಸೆಗೆಂದು ಬರುವುದಕ್ಕೆ ದಂಪತಿಗಳಿಗೆ ಅಗತ್ಯವಿದ್ದ ಮೆಡಿಕಲ್ ವೀಸಾವನ್ನೂ ಕೊಡಿಸುವುದಾಗ ಸುಷ್ಮಾ ಸ್ವರಾಜ್ ಅಭಯ ನೀಡಿದ್ದರು. ನಂತರ ನಾಲ್ಕು ತಿಂಗಳ ವೈದ್ಯಕೀಯ ವೀಸಾವನ್ನು ಅವರಿಗೆ ಕೊಡಿಸಿದ್ದರು.
ಈ ಎಲ್ಲ ಬೆಳವಣಿಗೆಯ ನಂತರ ನಿನ್ನೆ (ಜೂನ್ 12) ನಾಲ್ಕು ತಿಂಗಳ ರೋಹಾನ್ ತನ್ನ ತಂದೆ-ತಾಯಿಯರೊಂದಿಗೆ ನವದೆಹಲಿಯ ಜೆಪಿ ಆಸ್ಪತ್ರೆಗೆ ಬಂದಿಳಿದಿದ್ದಾನೆ. ಅವನಿಗೆ ಸೂಕ್ತ ಚಿಕಿತ್ಸೆ ನೀಡಿ, ಹೊಸ ಬದುಕು ನೀಡುವುದಾಗಿ ಜೆಪಿ ಆಸ್ಪತ್ರೆಯ ವೈದ್ಯರು ಭರವಸೆ ನೀಡಿದ್ದಾರೆ.