ಭಾರತಕ್ಕೆ ಬುದ್ಧಿ ಹೇಳಿ: ದೊಡ್ಡಣ್ಣನಿಗೆ ಗೋಗರೆದ ಪಾಕ್
ನವದೆಹಲಿ, ನ. 22: ಈಗಾಗಲೇ ವಿಶ್ವಸಂಸ್ಥೆ ಎದುರು ಕಾಶ್ಮೀರ ವಿಷಯ ಒಯ್ದು ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಇನ್ನೂ ಬುದ್ಧಿ ಕಲಿತಿಲ್ಲ. ಬುದ್ಧಿ ಕಲಿಯುವ ಲಕ್ಷಣಗಳೂ ಗೋಚರಿಸುತ್ತಿಲ್ಲ. [ಪಾಕಿಸ್ತಾನದ ಮನವಿ ಕಸದ ಬುಟ್ಟಿಗೆ]
ಹೊಸ ವಿಷಯ ಎಂದರೆ ನರೇಂದ್ರ ಮೋದಿ ನೇತೃತ್ವದ ಭಾರತಕ್ಕೆ ನೀವು ಬುದ್ಧಿ ಹೇಳಬೇಕೆಂದು ಅಮೆರಿಕ ಅಧ್ಯಕ್ಷ ಒಬಾಮಾ ಎದುರು ಗೋಗರೆಯಲು ಆರಂಭಿಸಿದ್ದಾರೆ. ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಕುರಿತು ಪಾಕಿಸ್ತಾನಕ್ಕೆ ತಿಳಿಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದೂರವಾಣಿ ಕರೆ ಮಾಡಿದ್ದಾಗ ನವಾಜ್ ಶರೀಫ್ ಈ ಕೋರಿಕೆ ಸಲ್ಲಿಸಿದ್ದಾರೆ. [ಗಣರಾಜ್ಯೋತ್ಸವಕ್ಕೆ ಬನ್ನಿ: ಒಬಾಮಾಗೆ ಆಹ್ವಾನ]
ಕಾಶ್ಮೀರ ವಿಷಯದಲ್ಲಿ ಭಾರತಕ್ಕೆ ಬುದ್ಧಿ ಹೇಳಿ. ಇದರಿಂದ ಉಭಯ ದೇಶಗಳಿಗೆ ಒಳ್ಳೆಯದಾಗುತ್ತದೆ ಹಾಗೂ ಏಶಿಯಾ ಆರ್ಥಿಕತೆಯೂ ಉತ್ತಮಗೊಳ್ಳುತ್ತದೆ ಎಂದು ತಿಳಿಸಬೇಕೆಂದು ಅವರು ಕೋರಿದ್ದಾರೆ.
ಪಾಕ್ಗೆ ಬರಲು ಮತ್ತೆ ಮನವಿ: ಇದೇ ಸಂದರ್ಭದಲ್ಲಿ ಈ ಹಿಂದೆ ಪಾಕಿಸ್ತಾನಕ್ಕೆ ಬರುವಂತೆ ಒಬಾಮಾಗೆ ನೀಡಿದ್ದ ಆಹ್ವಾನವನ್ನು ನವಾಜ್ ಶರೀಫ್ ನೆನಪಿಸಿದ್ದಾರೆ. ಅಮೆರಿಕ ಅಧ್ಯಕ್ಷರು ಬರುವುದನ್ನು ಪಾಕಿಸ್ತಾನೀಯರು ಎದುರು ನೋಡುತ್ತಿದ್ದಾರೆಂದು ಶರೀಫ್ ಹೇಳಿಕೊಂಡಿದ್ದಾರೆ. [ಅಮೆರಿಕದಲ್ಲಿ ಮೋದಿಗೆ ಅದ್ದೂರಿ ಸ್ವಾಗತ]
ಇದಕ್ಕೆ ಉತ್ತರಿಸಿದ ಒಬಾಮಾ, ಪಾಕಿಸ್ತಾನದಲ್ಲಿ ಪರಿಸ್ಥಿತಿ ತಣ್ಣಗಾಗುತ್ತಿದ್ದಂತೆ ಆಗಮಿಸುವುದಾಗಿ ತಿಳಿಸಿದ್ದಾರೆ ಎಂದು ಪಾಕಿಸ್ತಾನ ಸರ್ಕಾರದ ಮೂಲಗಳು ತಿಳಿಸಿವೆ. [ಅಮೆರಿಕದಲ್ಲಿ ಮೋದಿ ಸಾರ್ವಜನಿಕ ಸಭೆ]
ಮೂಲಭೂತವಾದಿಗಳ ಹಾವಳಿಯಿಂದ ಉರಿಯುತ್ತಿರುವ ಪಾಕಿಸ್ತಾನದಲ್ಲಿ ಪರಿಸ್ಥಿತಿ ತಣ್ಣಗಾಗುವುದು ಕಷ್ಟ ಸಾಧ್ಯ. ಆದ್ದರಿಂದ ಒಬಾಮಾ ಪಾಕಿಸ್ತಾನಕ್ಕೆ ಹೋಗುವುದೂ ಅನುಮಾನ ಎಂದು ರಾಜಕೀಯ ತಜ್ಞರು ವ್ಯಂಗ್ಯವಾಡಿದ್ದಾರೆ.