ನಿರ್ಭಯ ದೆಹಲಿ ಗ್ಯಾಂಗ್ ರೇಪ್ ಅಪರಾಧಿಗಳಿಗೆ ಡಬಲ್ ಶಿಕ್ಷೆ
ನವದೆಹಲಿ, ಸೆ, 03 : ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಪಟ್ಟ ನಾಲ್ಕು ಮಂದಿ ಅಪರಾಧಿಗಳು ಎಸಗಿದ್ದ ಮತ್ತೊಂದು ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಜೈಲುವಾಸ ವಿಧಿಸಿದೆ.
ವಿನಯ್ ಶರ್ಮ, ಅಕ್ಷಯ್ ಠಾಕೂರ್, ಮುಖೇಶ್ ಮತ್ತು ಪವನ್ ಗುಪ್ತಾ ಈ ನಾಲ್ವರು ಅತ್ಯಾಚಾರ ಪ್ರಕರಣದ ಜೊತೆ ದರೋಡೆ ಮತ್ತು ಅಪಹರಣ ಪ್ರಕರಣ ಎದುರಿಸುತ್ತಿದ್ದರು. ಅದು ಸಾಬೀತಾಗಿದ್ದು, ಈ ನಾಲ್ವರು ದುಷ್ಕರ್ಮಿಗಳಿಗೆ ನ್ಯಾಯಾಲಯ ಬುಧವಾರ 10 ವರ್ಷ ಸೆರೆವಾಸ ಪ್ರಕಟಿಸಿದೆ.[ಅತ್ಯಾಚಾರಿ ಪರ ಲಾಯರ್ ಹುಚ್ಚುಚ್ಚು ಹೇಳಿಕೆಗಳು!]
ಈ ಮೊದಲೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಿತೇಶ್ ಸಿಂಗ್ ಆಗಸ್ಟ್ 27ರ ತೀರ್ಪಿನಲ್ಲಿ ಈ ನಾಲ್ವರನ್ನು ಅಪರಾಧಿಗಳು ಎಂದು ಘೋಷಿಸಿದ್ದರು. ಇವರಿಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೆಹಲಿ ಹೈಕೋರ್ಟ್ ಗಲ್ಲು ಶಿಕ್ಷೆ ಪ್ರಕಟಿಸಿತ್ತು. ಇದೀಗ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಏನಿದು ಪ್ರಕರಣ :
2012ರ ಡಿಸೆಂಬರ್ 16 ರಂದು 23 ವರ್ಷ ವಯಸ್ಸಿನ ಫಿಜಿಯೋಥೆರಪಿಸ್ಟ್ ವಿದ್ಯಾರ್ಥಿನಿ ಮೇಲೆ ಆರು ಜನರಿಂದ ಅತ್ಯಾಚಾರ ನಡೆದಿದ್ದು, ಆಕೆ ಚಿಕಿತ್ಸೆಗೆ ಸ್ಪಂದಿಸದೆ ಸಿಂಗಾಪುರದ ಎಲಿಜಬೆತ್ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ಸಾವನ್ನಪ್ಪಿದ್ದಳು. ಅತ್ಯಾಚಾರ ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದವು.[ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾ. ಯೋಗೇಶ್ ಹೇಳಿದ್ದೇನು?]
ಈ ಆರು ಮಂದಿ ಅಪರಾಧಿಗಳು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗುವ ಮುನ್ನ ರಾಮ್ ಆಧಾರ್ ಎಂಬ ಬಡಗಿಯ ಮೇಲೆ ದಾಳಿ ನಡೆಸಿ ಆತನಿಂದ 1,500 ನಗದು ಹಾಗೂ ಮೊಬೈಲ್ ನ್ನು ಅಪಹರಿಸಿದ್ದರು.
ಬಳಿಕ ಬಡಗಿ ರಾಮ್ ಆಧಾರ್ ನೀಡಿದ ದೂರನ್ನು ಪರಿಶೀಲಿಸಿದ ದೆಹಲಿ ಪೊಲೀಸರು 2013ರ ಮಾರ್ಚ್ 15ರಂದು ದರೋಡೆ ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.