ಅಹಿಂದ ಕೋಪ : ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ?
ನವದೆಹಲಿ, ಜ. 28: ಮೇಕ್ ಇನ್ ಇಂಡಿಯಾ, ಇಂಧನ ಬೆಲೆ ಇಳಿಕೆ ಇನ್ನಿತರ ಕಾರಣಗಳಿಂದ ಮಧ್ಯಮ ವರ್ಗದವರು ಹಾಗೂ ಶ್ರೀಮಂತರ ಕಣ್ಮಣಿಯಾಗಿ ನರೇಂದ್ರ ಮೋದಿ ಜನಪ್ರಿಯರಾಗುತ್ತಿದ್ದಾರೆ. ಆದರೆ, ಮುಸ್ಲಿಮರು, ದಲಿತರು ಹಾಗೂ ಹಿಂದುಳಿತ ವರ್ಗಗಳ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗೆಂದು ಹೇಳುತ್ತಿದೆ ನವದೆಹಲಿಯಲ್ಲಿ ಎಪಿಬಿ ನ್ಯೂಸ್-ನೀಲ್ಸೆನ್ ನಡೆಸಿದ ಸಮೀಕ್ಷೆ ವರದಿ.
ನವದೆಹಲಿಯ 70 ವಿಧಾನಸಭೆ ಕ್ಷೇತ್ರಗಳಲ್ಲಿ ಜ. 24 ಹಾಗೂ 25ರಂದು ನಡೆಸಿರುವ ಸಮೀಕ್ಷೆಯ ವರದಿ ಪ್ರಕಾರ ನವದೆಹಲಿ ಮತದಾರರು ಮತ್ತೆ ಕೇಜ್ರಿವಾಲ್ ನೇತೃತ್ವದ ಆಪ್ನತ್ತ ವಾಲಿದ್ದಾರೆ. ಅಲ್ಲದೆ, ಆಪ್ ಪ್ರಭಾವ ಹಿಂದಿಗಿಂತ ಇನ್ನಷ್ಟು ಹೆಚ್ಚುತ್ತಿದೆ. ಸಮೀಕ್ಷೆಯ ವರದಿ ಪ್ರಕಾರ ನವದೆಹಲಿಯಲ್ಲಿ ಗೆಲ್ಲುವ ಪಕ್ಷಗಳ ಬಲಾಬಲ ಹೀಗಿರಲಿದೆ. [ಗುಪ್ತಚರ ವರದಿ : ದೆಹಲಿಯಲ್ಲಿ ಆಪ್ ಧೂಳಿಪಟ]
- ಆಮ್ ಆದ್ಮಿ - ಶೇ. 50
- ಬಿಜೆಪಿ - ಶೇ. 41
- ಕಾಂಗ್ರೆಸ್ - ಶೇ. 9
ಸಮೀಕ್ಷೆಗಾಗಿ ಸಂದರ್ಶಿಸಿದ 2,262 ಜನರಲ್ಲಿ ಶೇ. 50 ರಷ್ಟು ಜನ ಆಪ್ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಇನ್ನು ಬಿಜೆಪಿ ಶೇ. 45ರಿಂದ 41ಕ್ಕೆ ಇಳಿದಿದೆ. ಕಾಂಗ್ರೆಸ್ ಶೇ. 8ರಿಂದ 9ಕ್ಕೇರಿದೆ. ಇತರರು ಶೇ. 1ರಷ್ಟು ಮತ ಗಳಿಸಲಿದ್ದಾರೆ. ಇದೇ ತಿಂಗಳ 2ನೇ ವಾರದಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಈ ಶೇ. 46ರಷ್ಟು ಜನ ಆಮ್ ಆದ್ಮಿಯತ್ತ ವಾಲಿದ್ದರು. [ಕಿರಣ್ ಬೇಡಿ ಕುರಿತ ಕುತೂಹಲಕಾರಿ ವಿಷಯ]
ಕೇಜ್ರಿವಾಲ್ಗೆ ಸೆಡ್ಡು ಹೊಡೆಯಲು ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಘೋಷಣೆ ಮಾಡಿದ್ದ ಬಿಜೆಪಿ ತಂತ್ರ ಫಲಿಸುವುದಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಸಮೀಕ್ಷೆ ವರದಿ ಹೇಳುವಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ಸೂಕ್ತ ಅಭ್ಯರ್ಥಿ. [ಒನ್ಇಂಡಿಯಾ ಕನ್ನಡ ಸಮೀಕ್ಷೆ : ದೆಹಲಿಯಲ್ಲಿ ಬಿಜೆಪಿ ಸರ್ಕಾರ]
ಮೋದಿಗಾಗಿ ಬಿಜೆಪಿಗೆ ಮತ : ಬಿಜೆಪಿ ಪರ ಒಲವು ತೋರಿದವರು ನರೇಂದ್ರ ಮೋದಿ ಅವರಿಗಾಗಿ ಬಿಜೆಪಿಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಆದರೆ, ಇವರಲ್ಲಿ ಹೆಚ್ಚಿನವರು 25 ಸಾವಿರ ರು.ಗಳಿಗಿಂತ ಹೆಚ್ಚಿನ ಆದಾಯವುಳ್ಳವರು ಎಂಬುದು ಗಮನಾರ್ಹ ವಿಷಯ.
ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಬ್ಯೂರೋ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸಲಿದೆ ಎಂದು ವರದಿ ಬಂದಿತ್ತು. ಆದರೆ, ಈ ವರದಿ ಅದಕ್ಕೆ ವ್ಯತಿರಿಕ್ತವಾಗಿದೆ. ಏನೇ ಆದರೂ ಫೆಬ್ರವರಿ 7ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲವೂ ನಿರ್ಣಯವಾಗಲಿದ್ದು, ಫೆ. 10ರಂದು ನಡೆಯಿರುವ ರಿಸಲ್ಟ್ನಲ್ಲಿ ವಿಷಯ ಬಹಿರಂಗವಾಗಲಿದೆ.