ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಎನ್ ಡಿಟಿವಿ
ನವದೆಹಲಿ, ನವೆಂಬರ್ 07: ಎನ್ ಡಿಟಿವಿ ಹಿಂದಿ ಸುದ್ದಿವಾಹಿನಿ ವಿರುದ್ಧ ಒಂದು ದಿನದ ನಿಷೇಧದ ಆದೇಶ ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಎನ್ ಡಿಟಿವಿ ತಿರುಗಿ ನಿಂತಿದೆ. ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದೆ.
ಸೂಕ್ಷ್ಮ ಹಾಗೂ ಪ್ರಚೋದನಕಾರಿ ಅಂಶಗಳುಳ್ಳ ಸುದ್ದಿಯನ್ನು ಪ್ರಸಾರ ಮಾಡಿರುವ ಹಿನ್ನಲೆಯಲ್ಲಿ ಬುಧವಾರದಂದು ಎನ್ ಡಿಟಿವಿ ಹಿಂದಿ ವಾಹಿನಿ ಒಂದು ದಿನದ ಮಟ್ಟಿಗೆ ಪ್ರಸಾರ ಸ್ಥಗಿತಗೊಳಿಸುವ ಶಿಕ್ಷೆಯನ್ನು ಕೇಂದ್ರ ಸರ್ಕಾರ ವಿಧಿಸಿದೆ. [ಎನ್ ಡಿಟಿವಿಗೆ 24 ಗಂಟೆ ಶಿಕ್ಷೆ: ನಿರ್ಧಾರಕ್ಕೆ ವ್ಯಾಪಕ ಖಂಡನೆ]
ಪಠಾಣ್ ಕೋಟ್ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಯುದ್ಧ ವಿಮಾನ, ಮಾರ್ಟರ್, ಹೆಲಿಕಾಪ್ಟರ್, ಇಂಧನ ಟ್ಯಾಂಕ್ ಇತ್ಯಾದಿಗಳ ವಿವರಗಳನ್ನು ಎನ್ ಡಿಟಿವಿ ಪ್ರಸಾರ ಮಾಡಿತ್ತು. [NDTV ಮೇಲೆ ಕೇಂದ್ರ ಸರಕಾರದ 'ಸರ್ಜಿಕಲ್ ಸ್ಟ್ರೈಕ್': ಒಂದು ದಿನ ಬ್ಯಾನ್!]
ಜನವರಿ ತಿಂಗಳಿನಲ್ಲಿ ನಡೆದ ಪಠಾಣ್ ಕೋಟ್ ವಿಮಾನ ನಿಲ್ದಾಣ ಬಳಿಯ ದಾಳಿಯ ಬಗ್ಗೆ ಎನ್ ಡಿಟಿವಿ ಇಂಡಿಯಾದ ಹಿಂದಿ ವಾಹಿನಿ ಪ್ರಸಾರ ಮಾಡಿದ್ದ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಆದರೆ, ಇದೇ ಸುದ್ದಿಯನ್ನು ಎಲ್ಲಾ ವಾಹಿನಿಗಳು ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ಪ್ರಸಾರ ಮಾಡಿರುವಾಗ ಎನ್ ಡಿಟಿವಿಗೆ ಮಾತ್ರ ಶಿಕ್ಷೆ ಏಕೆ ಎಂದು ಎನ್ ಡಿಟಿವಿ ಪ್ರಶ್ನಿಸಿದೆ. 1970ರ ತುರ್ತು ಪರಿಸ್ಥಿತಿ ಸಂದರ್ಭದ ನಂತರ ಇದೇ ಮೊದಲ ಬಾರಿಗೆ ಇಂಥದ್ದೊಂದು ಆದೇಶವನ್ನು ಎದುರಿಸಬೇಕಾಗಿದೆ ಎಂದು ದೇಶದ ಹಲವಾರು ಪತ್ರಕರ್ತರು, ಸಂಪಾದಕರು, ಪ್ರೆಸ್ ಕೌನ್ಸಿಲ್ ಗಳು ಕೇಂದ್ರ ಸರ್ಕಾರದ ಆದೇಶವನ್ನು ಖಂಡಿಸಿವೆ.
ಆದರೆ, ನಿಷೇಧ ಹೇರಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು, ದೇಶದ ಸುರಕ್ಷತೆ, ಭದ್ರತಾ ಹಿತದೃಷ್ಟಿಯಿಂದ ಇಂಥ ನಿರ್ಣಯ ಅನಿವಾರ್ಯ ಎಂದಿದ್ದಾರೆ.