ದೇಸಿ ಗೋ ತಳಿಗಳ ರಕ್ಷಣೆಗೆ 'ಗೋಕುಲ ಕಾಮಧೇನು'
ನವದೆಹಲಿ, ಆಗಸ್ಟ್, 28 : ನಮ್ಮ ನಾಡಿನಲ್ಲಿ ಗೋವುಗಳಿಗೆ ವಿಶೇಷ ಸ್ಥಾನ. ಆದರೆ ದಿನಗಳೆದಂತೆ ದೇಶದಾದ್ಯಂತ ದೇಸಿ ತಳಿ ಗೋವುಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ. ಇವುಗಳ ಉಳಿವಿಗಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ.
ದೇಸಿ ಗೋವುಗಳ ರಕ್ಷಣೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಗೋಕುಲ ಕಾಮಧೇನು ಎಂಬ ನೂತನ ಯೋಜನೆ ಆರಂಭಿಸಲು ನಿರ್ಧರಿಸಿದ್ದು, ಈ ಯೋಜನೆ ಮೂಲಕ ದೇಸಿ ತಳಿ ಗೋವುಗಳ ಸಂರಕ್ಷಣೆಗೆ ಮುಂದಾಗಿದೆ.[ಮಾನವನಿಗೆ ಹೃದಯ ಕವಾಟ : ಕಾಮಧೇನುವೇ ನಿನಗೆ ಸಾಟಿಯಿಲ್ಲ]
ಭಾರತದಲ್ಲಿ ಈಗಾಗಲೇ ಸುಮಾರು 34 ವಿದಧ ದೇಸಿ ಗೋ ತಳಿಗಳನ್ನು ರಕ್ಷಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮುಂದಿನ 10 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವತ್ತಾ ಚಿಂತನೆ ನಡೆದಿದೆ.
ಈ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಬರೋಬ್ಬರಿ 500 ಕೋಟಿ ರೂ ಅನುದಾನ ನಿಗದಿ ಪಡಿಸಿದೆ. ಈ ದೇಸಿ ಗೋವು ತಳಿಗಳಲ್ಲಿ ಥಾರ್ ಪಾರ್ಕರ್ ಗಿರ್, ಕಾಂಕರೇಜ್, ರಾಠಿ, ಸಾಹಿವಾಲ್ ಹಾಗೂ ಬದ್ರಿ ಎಂಬ ತಳಿಗಳ ಸಂರಕ್ಷಣೆಗೆ ಕೇಂದ್ರ ಒತ್ತು ನೀಡಿದೆ.
ಆರಂಭದಲ್ಲಿ ಮಧ್ಯ ಪ್ರದೇಶ ಹಾಗೂ ಆಂಧ್ರ ಪ್ರದೇಶದಲ್ಲಿ ಕಾಮಧೇನು ಕೇಂದ್ರಗಳು ಸ್ಥಾಪನೆಗೊಳ್ಳಲಿದ್ದು, ಇಲ್ಲಿ ದೇಸಿ ತಳಿಯ ಗೋವುಗಳ ಪಾಲನೆ ನಡೆಯಲಿದೆ. ಬಳಿಕ ವಿವಿಧ ರಾಜ್ಯಗಳಿಗೆ ಈ ಕೇಂದ್ರಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.