ಸೋಲಿನ ಕಹಿಯುಂಡು, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಅಜಯ್
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು, ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಅಜಯ್ ಮಾಕೇನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನವೆದೆಹಲಿ, ಏಪ್ರಿಲ್ 26: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು, ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಅಜಯ್ ಮಾಕೇನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಎಲ್ಲೆಡೆ ಜಯಭೇರಿ ಬಾರಿಸಿದ್ದಾರೆ, ಎಎಪಿ ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಈ ಹಿನ್ನೆಲೆಯಲ್ಲಿ ಅಜಯ್ ಮಾಕೇನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
Take responsibility for defeat and I am going to resign as Delhi Congress President: Ajay Maken #MCDelections2017 pic.twitter.com/mNzEiCq5CU
— ANI (@ANI_news) April 26, 2017
ಮುಂದಿನ ಒಂದು ವರ್ಷಗಳ ಕಾಲ ಯಾವುದೇ ಉನ್ನತ ಹುದ್ದೆಯ ಜವಾಬ್ದಾರಿವಹಿಸಿಕೊಳ್ಳುವುದಿಲ್ಲ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವುದಾಗಿ ಹೇಳಿದ್ದಾರೆ.
ದೆಹಲಿ ಕ್ಷೇತ್ರದಿಂದ ಮೂರು ಬಾರಿ 1993,1998,2003ರಲ್ಲಿ ಅಸೆಂಬ್ಲಿಗೆ ಆಯ್ಕೆಯಾಗಿದ್ದರು. 1999ರಲ್ಲಿ ದೆಹಲಿ ಸಿಎಂ ಶೀಲಾ ದೀಕ್ಷಿತ್ ಅವರಿಗೆ ಸಂಸದೀಯ ಕಾರ್ಯದರ್ಶಿಯಾಗಿದ್ದರು.
ಸಾರಿಗೆ ಹಾಗೂ ಇಂಧನ ಸಚಿವರಾಗಿದ್ದಾಗ ಸಿಎನ್ ಜಿ ಅನುಷ್ಠಾನಗೊಳಿಸಿ, ಖಾಸಗೀಕರಣ, ದೆಹಲಿಯ ವಿದ್ಯುತ್ ಪೂರೈಕೆಗೆ ಹೊಸ ಮಾರ್ಗ ತೋರಿಸಿದರು. 39 ವರ್ಷಕ್ಕೆ ಅಸೆಂಬ್ಲಿ ಸ್ಪೀಕರ್ ಆಗಿದ್ದವರು.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ವಕೀಲೆ ಮೀನಾಕ್ಷಿ ಲೇಖಿ ಅವರಿಂದ ಸೋಲು ಕಂಡ ಮಾಕೇನ್ ಮುಂದೆ ಒಳ್ಳೆ ದಿನಗಳನ್ನು ಕಾಣಲಿಲ್ಲ. 2015ರಲ್ಲಿ ದೆಹಲಿಯಲ್ಲಿ ಎಎಪಿ ಅಧಿಪತ್ಯ ಆರಂಭಗೊಳ್ಳುತ್ತಿದ್ದಂತೆ ರಾಜೀನಾಮೆ ನೀಡಿದ್ದರು. ಈಗ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ.