ಕೇಜ್ರಿವಾಲ್ ಅಧಿಕಾರದಾಸೆಯಿಂದ ದೆಹಲಿಯಲ್ಲಿ ಸೋಲು: ಅಣ್ಣಾ ಹಜಾರೆ
ದೆಹಲಿ ನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಅಧಿಕಾರದಾಸೆ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ
ನವದೆಹಲಿ, ಏಪ್ರಿಲ್ 26: ದೆಹಲಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸೋಲಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕಾರದಾಸೆ ಕಾರಣ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ. ಬುಧವಾರ ನಡೆದ ಮತಎಣಿಕೆಯಲ್ಲಿ ಮೂರೂ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಸತತವಾಗಿ ಮೂರನೇ ಸಲ ಗೆದ್ದಿದೆ.
"ದೆಹಲಿಯನ್ನು ಮಾದರಿಯಾಗಿ ರೂಪಿಸಿ, ಅದನ್ನು ದೇಶದ ಇತರ ಕಡೆಗಳಲ್ಲಿ ಅನುಸರಿಸುವಂತಾಗಲಿ ಅಂತಲೇ ಜನರು ಅರವಿಂದ್ ಕೇಜ್ರಿವಾಲ್ ಗೆ ಅವಕಾಶ ನೀಡಿದರು. ಆದರೆ ಅಧಿಕಾರ ಬಹಳ ಕೆಟ್ಟದ್ದು. ಒಂದು ಸಲ ಕುರ್ಚಿ ಮೇಲೆ ಕೂತರೆ ಅಲೋಚನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡು ಬಿಡ್ತಾರೆ" ಎಂದು ಹಜಾರೆ ಹೇಳಿದ್ದಾರೆ.[ಸೋಲಿನ ನಂತರ ಬಿಜೆಪಿಯನ್ನು ಅಭಿನಂದಿಸಿದ ಕೇಜ್ರಿವಾಲ್]
ದೆಹಲಿಗೋಸ್ಕರ ಕೆಲಸ ಮಾಡುವುದನ್ನು ಬಿಟ್ಟು ಆತ ಪಂಜಾಬ್ ಮತ್ತು ಗೋವಾದಲ್ಲಿ ಅಧಿಕಾರ ಹಿಡಿಯಲು ಯೋಚಿಸಿದರು. ಅಷ್ಟು ಆತುರ ಅಗತ್ಯವಿರಲಿಲ್ಲ. ಆತನ ಮನಸ್ಸಿನಲ್ಲಿ ಅಧಿಕಾರ ಹಿಡಿಯುವ ಆಲೋಚನೆ ಇದೆಯೇ ಹೊರತು ಸಮಾಜ ಅಥವಾ ದೇಶದ ಬಗ್ಗೆ ಕಾಳಜಿ ಇಲ್ಲ ಎಂಬುದು ಜನರಿಗೆ ಗೊತ್ತಾಯ್ತು" ಎಂದು ಅವರು ಹೇಳಿದ್ದಾರೆ.[ಬಿಜೆಪಿ ಸುನಾಮಿಗೆ ಚದುರಿತು ಕೇಜ್ರಿವಾಲ್ ಕ್ರೇಜ್ !]
ಇವಿಎಂ ಯಂತ್ರದ ಬಗ್ಗೆ ಕೇಜ್ರಿವಾಲ್ ಮಾಡಿದ ಆರೋಪವನ್ನು ಕೂಡ ಹಜಾರೆ ಅಲ್ಲಗಳೆದಿದ್ದು, "ಆಮ್ ಆದ್ಮಿ ಪಕ್ಷದ ನಾಯಕರ ಮಾತು ಹಾಗೂ ಕೃತಿಯಲ್ಲಿರುವ ವ್ಯತ್ಯಾಸವನ್ನು ಗಮನಿಸಿದ ಜನರಿಗೆ ವಿಶ್ವಾಸವೇ ಹೋಯಿತು. ಹೇಳಿದಂತೆ ಪಕ್ಷ ನಡೆದುಕೊಳ್ಳಲಿಲ್ಲ. ಈಗ ಆ ಪಕ್ಷದ ಮುಖಂಡರು ಸೋಲಿನ ವಿಮರ್ಶೆ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಏನು ಪ್ರಯೋಜನ?" ಎಂದು ಅವರು ಪ್ರಶ್ನಿಸಿದ್ದಾರೆ.