ವೈಯಕ್ತಿಕ ಮಾಹಿತಿಯ ಖಾಸಗಿತನ ಬೆಂಬಲಿಸಿದ ಕರ್ನಾಟಕ
ನಾಗರಿಕರ ಮಾಹಿತಿಯ ಖಾಸಗಿತನದ ಹಕ್ಕನ್ನು ಬೆಂಬಲಿಸಿದ ಕರ್ನಾಟಕ. ಸುಪ್ರೀಂ ಕೋರ್ಟ್ ನಲ್ಲಿ ತನ್ನ ಅನಿಸಿಕೆಯನ್ನು ಮಂಡಿಸಿದ ಕರ್ನಾಟಕ ಸರ್ಕಾರ.
ಬೆಂಗಳೂರು, ಜುಲೈ 26: ಕರ್ನಾಟಕ ಸೇರಿದಂತೆ 3 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ನಾಗರಿಕರ ಮಾಹಿತಿಯನ್ನು ಖಾಸಗಿ ಹಕ್ಕೆಂದು ಪ್ರತಿಪಾದಿಸುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಬೆಂಬಲಿಸಿವೆ.
ಕರ್ನಾಟಕ, ಪಂಜಾಬ್, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಹಾಗೂ ಪುದುಚ್ಚೇರಿ (ಕೇಂದ್ರಾಡಳಿತ ಪ್ರದೇಶ) ಸರ್ಕಾರಗಳು ವ್ಯಕ್ತಿಯ ಮಾಹಿತಿಯನ್ನು ಖಾಸಗಿ ಮಾಹಿತಿಯೆಂದು ಪರಿಗಣಿಸಬೇಕು ಹಾಗೂ ಪ್ರತಿಯೊಬ್ಬ ವ್ಯಕ್ತಿಗೆ ತನಗೆ ಸಂಬಂಧಪಟ್ಟ ಮಾಹಿತಿಯ ಖಾಸಗಿತನ ಕಾಪಾಡಿಕೊಳ್ಳುವುದನ್ನು ಸಾಂವಿಧಾನಿಕ ಹಕ್ಕು ಎಂಬ ಸ್ಥಾನಮಾನ ನೀಡಬೇಕು ಎಂಬ ವಾದವನ್ನು ಬೆಂಬಲಿಸಿವೆ.
ಈ ರಾಜ್ಯಗಳ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ವ್ಯಕ್ತಿಗೆ ಸಂಬಂಧಪಟ್ಟ ಮಾಹಿತಿಗಳು ಸೋರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಕೆಲವು ಷರತ್ತುಗಳೊಂದಿಗೆ ಅದನ್ನು ಸಂವಿಧಾನಬದ್ಧ ಹಕ್ಕನ್ನಾಗಿಸಬೇಕೆಂದು ನ್ಯಾಯಾಲಯವನ್ನು ಕೋರಿದರು.
ಸರ್ಕಾರದ ಬಹುತೇಕ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿರುವ ಹಿನ್ನೆಲೆಯಲ್ಲಿ ನಾಗರಿಕರ ಮಾಹಿತಿಯು ಸೋರಿಕೆಯಾಗುವ ಆತಂಕ ಸೃಷ್ಟಿಯಾಗಿದೆ.
ಹಾಗಾಗಿ, ಆಧಾರ್ ಮಾಹಿತಿಯನ್ನು ಗೌಪ್ಯವಾಗಿಡಬೇಕೇ , ಬೇಡವೇ ಎಂಬುದನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಖೆಹರ್ ನೇತೃತ್ವದಲ್ಲಿ ಜುಲೈ 18ರಂದು ಸಾಂವಿಧಾನಿಕ ಪೀಠವನ್ನು ರಚಿಸಲಾಗಿದೆ. ಈ ಪೀಠವು, ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಂದ ಈ ಬಗ್ಗೆ ಅಭಿಪ್ರಾಯಗಳನ್ನು ಕಲೆಹಾಕುವ ಕೆಲಸಕ್ಕೆ ಕೈ ಹಾಕಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ತನ್ನ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಮಂಡಿಸಿದೆ.