ಶಶಿಕಲಾ ಭವಿಷ್ಯ ನಿರ್ಧರಿಸುವ ಸುಪ್ರೀಂ ತೀರ್ಪು ಮಂಗಳವಾರ ಬೆಳಗ್ಗೆ 10.30ಕ್ಕೆ
ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಮಂಗಳವಾರ ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ. ಶಶಿಕಲಾ ನಟರಾಜನ್ ಪಾಲಿಗೆ ಫೆಬ್ರವರಿ 14ರ ಮಂಗಳವಾರ ತುಂಬ ಮಹತ್ವದ್ದಾಗಿದೆ. ಸುಪ್ರೀಂ ತೀರ್ಪು ಏನು ಬರಲಿದೆ ಎಂಬುದರ ಮೇಲೆ ರಾಜಕೀಯ ಪರಿಣತರ ಕಣ್ಣು ನೆಟ್ಟಿದೆ
ನವದೆಹಲಿ, ಫೆಬ್ರವರಿ 13: ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕಟಿಸಲಿದೆ. ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಹಾಗೂ ಅಮಿತಾವ್ ರಾಯ್ ಅವರನ್ನು ಒಳಗೊಂಡ ಪೀಠವು ಮಂಗಳವಾರ (ಫೆಬ್ರವರಿ 14) ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಜೂನ್ 2016ರಲ್ಲಿ ತೀರ್ಪು ಕಾಯ್ದಿರಿಸಿ, ಆದೇಶ ಹೊರಡಿಸಲಾಗಿತ್ತು. ಈ ಪ್ರಕರಣದಲ್ಲಿ ತೀರ್ಪು ಬಾಕಿಯಿದೆ ಎಂಬುದನ್ನು ಕರ್ನಾಟಕವು ಮತ್ತೊಮ್ಮೆ ನೆನಪಿಸಿತ್ತು. ಕರ್ನಾಟಕದ ಪರವಾಗಿ ವಾದ ಮಂಡಿಸಿದ ವಕೀಲ ದುಷ್ಯಂತ್ ದಾವೆ ಆದೇಶದ ಬಗ್ಗೆ ಕೇಳಿದಾಗ, ಕೋರ್ಟ್ ಒಳಗೆ ಹೋಗಲಾರದಷ್ಟು ಜನಸಂದಣಿ ಇತ್ತು.[ವಿಧಾನಸಭೆಯಲ್ಲಿ ಚಿನ್ನಮ್ಮ-ಒಪಿಎಸ್ ಏಕಕಾಲಕ್ಕೆ ಸಂಖ್ಯಾ ಬಲ ಪ್ರದರ್ಶನ]
ಆದೇಶ ಹೊರಡಿಸಿದಾಗ ನಿಮಗೆ ಗೊತ್ತಾಗುತ್ತದೆ ಎಂದು ದಾವೆ ಅವರಿಗೆ ಕೋರ್ಟ್ ತಿಳಿಸಿತ್ತು. ಕಳೆದ ಸೋಮವಾರ ಒಂದು ವಾರದೊಳಗೆ ತೀರ್ಪು ನೀಡುವುದಾಗಿ ಕೋರ್ಟ್ ತಿಳಿಸಿತ್ತು. ಅಂದಹಾಗೆ ಜಯಾ ಅಕ್ರಮ ಆಸ್ತಿ ಪ್ರಕರಣದ ವಿಚಾರಣೆ ಕರ್ನಾಟಕದಲ್ಲಿ ನಡೆದಿತ್ತು.
ಅದರೆ, ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಿರ್ದಿಷ್ಟ ದಿನಾಂಕ ತಿಳಿಸಿರಲಿಲ್ಲ. ಅದೂ ಅಲ್ಲದೆ ಸೋಮವಾರ (ಫೆಬ್ರವರಿ 13) ಪೀಠದ ನ್ಯಾಯಮೂರ್ತಿಗಳ ಪೈಕಿ ಒಬ್ಬರಾದ ಅಮಿತಾವ್ ರಾಯ್ ಹಾಜರಿರಲಿಲ್ಲ. ಮೂಲಗಳ ಪ್ರಕಾರ, ಮಂಗಳವಾರ ತೀರ್ಪು ಪ್ರಕಟವಾಗುವ ಎಲ್ಲ ಸಾಧ್ಯತೆಗಳಿವೆ. ಮಾರನೇ ದಿನದ ಪ್ರಕರಣಗಳ ಪಟ್ಟಿಯನ್ನು ಸಂಜೆ 6.30ಕ್ಕೆ ಸುಪ್ರೀಂ ಕೋರ್ಟ್ ಅಪ್ ಲೋಡ್ ಮಾಡುತ್ತದೆ.[ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]
ಅದು ಕೂಡ ಈ ಅಂಶವನ್ನು ಸ್ಪಷ್ಟಪಡಿಸಿದೆ. ಈ ಪ್ರಕರಣದ ತೀರ್ಪು ಶಶಿಕಲಾ ನಟರಾಜನ್ ಅವರಿಗೆ ಅತಿ ಮುಖ್ಯವಾದದ್ದು. ಕರ್ನಾಟಕ ಹೈ ಕೋರ್ಟ್ ನಲ್ಲಿ ಜಯಲಲಿತಾ, ಶಶಿಕಲಾ ಸೇರಿದಂತೆ ಇನ್ನಿಬ್ಬರು ಖುಲಾಸೆಯಾಗಿದ್ದರು. ಆ ನಂತರ ಕರ್ನಾಟಕದಿಂದ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.