ಕೆಂಪುಕೋಟೆ ಮೇಲೆ ಮೋಡಿ ಮಾಡಿದ ಮೋದಿ
ನವದೆಹಲಿ, ಆ.15 : ನವದೆಹಲಿಯ ಐತಿಹಾಸಿಕ ಕೆಂಪುಕೋಟೆ ಮೇಲೆ ದೇಶದ 14ನೇ ಪ್ರಧಾನಿ ನರೇಂದ್ರ ಮೋದಿ ಅವರು 68ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಶುಕ್ರವಾರ ಧ್ವಜಾರೋಹಣ ಮಾಡಿದರು. ಅಭೂತಪೂರ್ವ ಭದ್ರತೆಯ ನಡುವೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನತೆಗೆ ಸ್ವತಂತ್ರ ದಿನೋತ್ಸವದ ಶುಭಾಶಯ ಕೋರಿದರು. ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ನಾನು ಈ ದೇಶದ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸೇವಕ ಈ ಸೇವಕನಿಂದ ದೇಶದ ಜನತೆಗೆ ಶುಭಾಶಯ" ಎಂದರು. [ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ]
ಶುಕ್ರವಾರ ಬೆಳಗ್ಗೆ ಮೊದಲು ರಾಜ್ಘಾಟ್ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಮಹಾತ್ಮಾ ಗಾಂಧಿಜೀಯವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ನಂತರ ಕೆಂಪುಕೋಟೆಗೆ ಆಗಮಿಸಿದ ಅವರು, ಧ್ವಜಾರೋಹಣ ನೆರವೇರಿಸಿದರು. ಚಿತ್ರಗಳಲ್ಲಿ ನೋಡಿ ಕೆಂಪುಕೋಟೆ ಮೇಲೆ ಮೋದಿ ಮೋಡಿ [ಪಿಟಿಐ ಚಿತ್ರಗಳು]
ಕೆಂಪುಕೋಟೆ ಮೇಲೆ ಧ್ವಜಾರೋಹಣ
ದೇಶದ 14ನೇ ಪ್ರಧಾನಿ ನರೇಂದ್ರ ಮೋದಿ ಅವರು 68ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಶುಕ್ರವಾರ ಐತಿಹಾಸಿಕ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದರು.
ಪ್ರಧಾನ ಸೇವಕನಿಂದ ಶುಭಾಶಯ
ಹಿಂದಿಯಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ "ನಾನು ಈ ದೇಶದ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸೇವಕ ಈ ಸೇವಕನಿಂದ ದೇಶದ ಜನತೆಗೆ ಶುಭಾಶಯ" ಎಂದು ಮಾತು ಆರಂಭಿಸಿದರು.
ನಿಮಗಾಗಿ ದುಡಿಯುತ್ತೇನೆ
ತಮ್ಮ ಭಾಷಣದಲ್ಲಿ ಸ್ವಚ್ಛತೆ, ಡಿಜಿಟಲ್ ಕ್ರಾಂತಿ, ಬಡತನ ನಿರ್ಮೂಲನೆ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ದೇಶದ ಅಭಿವೃದ್ಧಿಗಾಗಿ ಪ್ರತಿ ಕ್ಷಣವೂ ದುಡಿಯುತ್ತೇನೆ ಎಂದು ದೇಶದ ಜನರಿಗೆ ಭರವಸೆ ನೀಡಿದರು.
ಆಮದು ಕಡಿಮೆ ಮಾಡೋಣ
ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ದೇಶದ ಆಮದು ಕಡಿಮೆಯಾಗಬೇಕು. ನಮ್ಮ ದೇಶ ಇತರ ದೇಶಗಳಿಗೆ ವಸ್ತುಗಳನ್ನು ರಫ್ತು ಮಾಡುವಂತಾಗಬೇಕು ಎಂದು ಕರೆ ನೀಡಿದರು.
ಯುವಕರಿಗಾಗಿ ಯೋಜನೆ ರೂಪಿಸಿ
ಭಾರತದಲ್ಲಿರುವ ಯುವಕರು ಪ್ರತಿಭಾನ್ವಿತರು. ಆದರೆ, ನಮ್ಮ ದೇಶಕ್ಕೆ ಅವರಿಂದ ಹೆಚ್ಚಿನ ಉಪಯೋಗವಾಗುತ್ತಿಲ್ಲ. ಇಂತಹ ಯುವಕರ ಪ್ರಯೋಜನ ಪಡೆಯಲು ನಾವು ಯೋಜನೆ ರೂಪಿಸಬೇಕಿದೆ ಎಂದರು.
ಸಮಾರಂಭ ವೀಕ್ಷಿಸಿದ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದಂಪತಿ ಕೆಂಪುಕೋಟೆಯ ಮೇಲೆ ನಡೆದ ಧ್ವಜಾರೋಹಣ ಸಮಾರಂಭ ವೀಕ್ಷಿಸಲು ಆಗಮಿಸಿದ್ದರು.
ಸರಿಯಾದ ಸಮಯಕ್ಕೆ ಬಂದೆ
ಧ್ವಜಾರೋಹಣ ಮಾಡಲು ಕೆಂಪುಕೋಟೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಕೈ ಗಡಿಯಾರವನ್ನು ನೋಡಿಕೊಂಡರು.
ಪ್ರಧಾನಿಗೆ ಗೌರವವಂದನೆ
ಧ್ವಜಾರೋಹಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ಷಣಾ ಪಡೆಗಳು ಗೌರವವಂದನೆ ಸಲ್ಲಿಸಿದವು.
ಮಕ್ಕಳಿಂದ ಸ್ವಾಗತ
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಕ್ಕಳ ಕೈಕುಲುಕಿದರು.
ಜನರತ್ತ ಕೈ ಬೀಸಿದ ಮೋದಿ
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿ ಜನರತ್ತ ತಮ್ಮ ಎಂದಿನ ಶೈಲಿಯಲ್ಲಿ ಕೈಬೀಸಿದರು.
ಸಮಾರಂಭಕ್ಕೆ ಆಗಮಿಸಿದ ಅಡ್ವಾಣಿ
ಸ್ವಾತಂತ್ರೋತ್ಸವ ಸಮಾರಂಭಕ್ಕೆ ಆಗಮಿಸಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಸಚಿವರು ನಮಸ್ಕರಿಸಿದರು.
ಪ್ರವಾಸೋದ್ಯಮಕ್ಕೆ ಆದ್ಯತೆ ನೀಡೋಣ
ದೇಶದಲ್ಲಿ ಬಡತನ ನಿರ್ಮೂಲನೆ ಆಗಬೇಕು ಎಂದು ಹೇಳಿದ ಮೋದಿ ಅದಕ್ಕಾಗಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಭೂತಪೂರ್ವ ಭದ್ರತೆ
ಉಗ್ರ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಕೆಂಪುಕೋಟೆಗೆ ಬಿಗಿಭದ್ರತೆ ಒದಗಿಸಲಾಗಿತ್ತು. ಪೊಲೀಸರು ಮತ್ತು ವಿವಿಧ ರಕ್ಷಣಾ ಪಡೆಗಳ ಸರ್ಪಗಾವಲಿನ ನಡುವೆ ಮೋದಿ ಭಾಷಣ ಮಾಡಿದರು.
ಕೆಂಪುಕೋಟೆ ಮೇಲೆ ಹಾರಾಡಿದ ರಾಷ್ಟ್ರಧ್ವಜ
ಕೆಂಪುಕೋಟೆ ಮೇಲೆ ಹಾರಾಡಿದ ರಾಷ್ಟ್ರಧ್ವಜ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.
ಎಲ್ಲರಿಗೂ ವಂದನೆ
ಭಾಷಣ ಮುಗಿಸಿದ ಮೋದಿ ಎಲ್ಲರಿಗೂ ವಂದನೆ ಸಲ್ಲಿಸಿದರು.