ದೆಹಲಿಯಲ್ಲಿ ಎಎಪಿಯಿಂದ ಅಧಿಕಾರ ದುರುಪಯೋಗ: ವರದಿಯಲ್ಲಿ ಏನಿದೆ?
ದೆಹಲಿಯ ಹಿಂದಿನ ಲೆಫ್ಟಿನೆಂಟ್ ಗವರ್ನರ್ ನೇಮಿಸಿದ್ದ ಶುಂಗುಲು ಸಮಿತಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರದ ಹಲವು ನಿರ್ಧಾರದ ವಿರುದ್ಧವಾಗಿ ವರದಿ ನೀಡಿದೆ. ದೆಹಲಿ ಸರಕಾರದಲ್ಲಿ ಅಧಿಕಾರ ದುರುಪಯೋಗವಾಗಿದೆ ಎಂದು ತಿಳಿಸಿದೆ
ನವದೆಹಲಿ, ಏಪ್ರಿಲ್ 6: ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ದೆಹಲಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಶುಂಗುಲು ಸಮಿತಿ ವರದಿ ನೀಡಿದೆ. ಮೂವರು ಸದಸ್ಯರ ಸಮಿತಿಯನ್ನು ದೆಹಲಿಯ ಹಿಂದಿನ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ರಚಸಿದ್ದರು. ಈ ಸಮಿತಿಯು ಕೇಜ್ರಿವಾಲ್ ಸರಕಾರದ ಕೆಲವು ತೀರ್ಮಾನಗಳನ್ನು ಟೀಕಿಸಿದ್ದು, ಅದರಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿಗಾಗಿ ಭೂಮಿ ಮಂಜೂರು ಮಾಡಿರುವುದೂ ಸೇರಿದೆ.
ಸಚಿವ ಸತ್ಯೇಂದ್ರ ಜೈನ್ ಅವರ ಮಗಳನ್ನು ದೆಹಲಿ ಆರೋಗ್ಯ ಯೋಜನೆಯ ಯೋಜನಾ ನಿರ್ದೇಶಕಿಯಾಗಿ ನೇಮಕ ಮಾಡಿದ್ದನ್ನೂ ಸಮಿತಿ ಪ್ರಶ್ನಿಸಿದೆ. ನೂರು ಪುಟಗಳ ವರದಿಯನ್ನು ಸಮಿತಿಯು ಸಿದ್ಧಪಡಿಸಿದೆ. 2015ರಲ್ಲಿ ಎಲ್ಲ ಇಲಾಖೆಗಳಿಗೆ ಕೇಜ್ರಿವಾಲ್ ನೀಡಿದ ಸೂಚನೆ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ ಪಡೆಯದೆಯೂ ತೀರ್ಮಾನಗಳನ್ನು ಕೈಗೊಳ್ಳಬಹುದು ಎಂದು ಆ ಆದೇಶದಲ್ಲಿ ಇತ್ತು.['ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ']
ಎಎಪಿ ಕಚೇರಿ ನಿರ್ಮಾಣಕ್ಕಾಗಿ ಭೂಮಿ ಮಂಜೂರು ಮಾಡಿದ್ದು ತಪ್ಪು ಹಾಗೂ ಕಾನೂನುಬಾಹಿರ ನಿರ್ಧಾರ ಎಂದು ಪರಿಗಣಿಸಬೇಕು. ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರಿಗೆ ಮನೆ ನೀಡಿದ್ದ ಬಗ್ಗೆ ಕೂಡ ಪ್ರಶ್ನಿಸಲಾಗಿದೆ. ಇದರ ಜತೆಗೆ ಕೆಲವು ಖಾಸಗಿ ವ್ಯಕ್ತಿಗಳನ್ನು ಸರಕಾರದ ಸಲಹೆಗಾರರಾಗಿ ನೇಮಿಸಿದ ಬಗ್ಗೆ ಕೂಡ ಉಲ್ಲೇಖ ಮಾಡಲಾಗಿದೆ. ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಲೆಫ್ಟಿನೆಂಟ್ ಜನರಲ್ ಒಪ್ಪಿಗೆ ಪಡೆಯದೆ ಕೆಲವರ ನೇಮಕ ಮಾಡಿದ್ದರು. ಆ ರೀತಿ ನೇಮಿಸಲು ಅಧಿಕಾರ ಇಲ್ಲ ಎಂದು ತಿಳಿಸಲಾಗಿದೆ.[ಜನತೆಯನ್ನು ವಂಚಿಸಿದ ಮೋದಿಗೆ ಶಿಕ್ಷೆಯಾಗಬೇಕು: ರಾಮ್]
ಭ್ರಷ್ಟಾಚಾರ ವಿರೋಧಿ ಶಾಖೆಗೆ ಅಧಿಕಾರಿಗಳ ನೇಮಕ ಮಾಡಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಅಧಿಕಾರಿಗಳ ನೇಮಕ-ವರ್ಗಾವಣೆ, ರಾಜ್ಯಪಾಲರ ಒಪ್ಪಿಗೆ ಪಡೆಯದೆ ಸಚಿವರ ವಿದೇಶ ಪ್ರವಾಸ ಮತ್ತು ವಕೀಲರ ನೇಮಕ ವಿಚಾರಗಳು ವರದಿಯಲ್ಲಿದೆ.