ಪ್ರಿಂಟಿಂಗ್ ಪ್ರೆಸ್ ನಿಂದ ನೇರ ಕಾಳಧನಿಕರ ಮನೆ ತಲುಪಿವೆ ಹೊಸ ನೋಟುಗಳು!
ನವದೆಹಲಿ, ಜನವರಿ 11: ಕೇಂದ್ರ ಸರಕಾರದ ಆಲೋಚನೆಗಳು ಅದ್ಭುತವಾಗಿರಬಹುದು. ಅದಕ್ಕಿಂತ ವಿಭಿನ್ನವಾಗಿ, ಹೊಸ ರೀತಿಯಲ್ಲಿ ಆಲೋಚಿಸುವ ಖದೀಮರು ಇರುತ್ತಾರೆ ಎಂಬುದನ್ನು ಸಾಬೀತುಪಡಿಸುವಂಥ ನಿದರ್ಶನ ಇಲ್ಲಿದೆ. ಹೊಸ ನೋಟುಗಳು ಮುದ್ರಣಾಲಯದಿಂದ ಬ್ಯಾಂಕ್ ಗಳನ್ನು ತಲುಪುವ ಮುಂಚೆಯೇ ಕೆಲವು ವ್ಯಕ್ತಿಗಳನ್ನು ತಲುಪಿದ್ದವು ಎಂಬ ಸಂಗತಿ ಬಯಲಾಗಿದೆ.
ಗುಪ್ತಚರ ಇಲಾಖೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡಾಗ ಆತನ ಬಳಿ ಕಂತೆ-ಕಂತೆ ಹೊಸ ನೋಟುಗಳು ಸಿಕ್ಕಿವೆ. ಆತನ ಹೆಸರು ಕೃಷ್ಣಕುಮಾರ್. ಡಿಸೆಂಬರ್ 15ರಂದೇ ವಶಕ್ಕೆ ಪಡೆದಿದ್ದು, ಆತನನ್ನು ಹಣ ಸಾಗಾಟಕ್ಕೆ ಬಳಸಿಕೊಳ್ಳುತ್ತಿದ್ದದ್ದು ತಿಳಿದುಬಂದಿದೆ.[ತೆರಿಗೆ ತಪ್ಪಿಸಿದ 3-4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ಜಮೆ]
ನೋಟು ಮುದ್ರಣವಾದದ್ದು ನೇರವಾಗಿ ಆಯಾ ವ್ಯಕ್ತಿಗಳಿಗೆ ತಲುಪುತ್ತಿದ್ದದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ನಾಸಿಕ್, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಲದ ಸಾಲ್ಬೋನಿಯಲ್ಲಿ ಮುದ್ರಣವಾದ ನೋಟುಗಳನ್ನು ಕಂತೆಕಂತೆ ಮಾಡಿ, ಕಳುಹಿಸಲಾಗಿದೆ. ಕೃಷ್ಣಕುಮಾರ್ ನನ್ನು ತಲುಪುವ ವೇಳೆಗೆ ನೋಟುಗಳು ಹಲವು ಕೈ ಬದಲಾಗಿವೆ.[ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!]
ಮುದ್ರಣವಾದ ಹೊಸ ನೋಟುಗಳು ಬ್ಯಾಂಕ್ ಅಥವಾ ಎಟಿಎಂ ತಲುಪಬೇಕು. ಆದರೆ ಎರಡು ಮುದ್ರಣಾಲಯಲ್ಲಿ 5.20 ಕೋಟಿ ನೋಟುಗಳನ್ನು ನವೆಂಬರ್ 8ರ ನಂತರ ಮುದ್ರಿಸಲಾಗಿದೆ. ಆ ಪೈಕಿ ಕೆಲ ಭಾಗ ಬ್ಯಾಂಕ್ ಗಳನ್ನು ತಲುಪೇ ಇಲ್ಲ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಒನ್ಇಂಡಿಯಾಗೆ ಮಾಹಿತಿ ನೀಡಿದ್ದಾರೆ.
ನೋಟು ಮುದ್ರಣವಾದ ಮೇಲೆ ರಿಸರ್ವ್ ಬ್ಯಾಂಕ್ ತಲುಪಿಸುವ ಮೊದಲು ಅದನ್ನು ಒಂದು ಸಾವಿರ ನೋಟುಗಳ ಕಟ್ಟು ಮಾಡಲಾಗುತ್ತದೆ. ಅಲ್ಲಿಂದ ಇತರ ಬ್ಯಾಂಕ್ ಗಳಿಗೆ ಅವುಗಳನ್ನು ತಲುಪಿಸುವ ಮೊದಲು ನೂರರ ಕಟ್ಟಾಗಿ ಮಾಡಲಾಗುತ್ತದೆ. ಎಲ್ಲ ಕಟ್ಟುಗಳ ಮೇಲೆ ಸರಕಾರದ ಸೀಲು ಹಾಕಲಾಗುತ್ತದೆ. ಅಂಥ ಒಂದು ಕಟ್ಟು ಕೃಷ್ಣ ಕುಮಾರ್ ಬಳಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[500, 1000 ರು. ನೋಟು ನಿಷೇಧ ಸರ್ಕಾರದ್ದು, ಆರ್ ಬಿಐನದ್ದಲ್ಲ!]
ಈ ಹಗರಣದಲ್ಲಿ ಬ್ಯಾಂಕ್ ಗಳ ಪಾತ್ರ ಇತ್ತೆ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಆಯ್ದ ಕೆಲವರಿಗೆ ಹಾಗೆ ನೇರವಾಗಿ ಬ್ಯಾಂಕ್ ಗಳ ಹಣವನ್ನು ಬದಲಿಸಿಕೊಟ್ಟಿವೆಯಾ ಎಂಬ ಗುಮಾನಿ ಇದೆ. ಡಿಸೆಂಬರ್ ನಲ್ಲಿ ಸಿಬಿಐ ಇಬ್ಬರು ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಅ ಇಬ್ಬರು ಕೆಲವು ವ್ಯಕ್ತಿಗಳಿಗೆ ದೊಡ್ಡ ಮೊತ್ತದ ಹಣ ಬದಲಾವಣೆ ಮಾಡಲು ನೆರವಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.