ಭ್ರಷ್ಟಾಚಾರದಲ್ಲಿ ಸ್ವತಃ ಪ್ರಧಾನಿ ಭಾಗಿ, ನನ್ನ ಹತ್ರ ಸಾಕ್ಷ್ಯ ಇದೆ: ರಾಹುಲ್
ಈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಾಹುಲ್ ಗಾಂಧಿ ಮಾಡುತ್ತಿದ್ದ ಆರೋಪಕ್ಕೂ ಬುಧವಾರ ಮಾಡಿದ ಆರೋಪಕ್ಕೂ ವ್ಯತ್ಯಾಸವಿದೆ. ತಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂಬುದು ಅವರ ಸಮರ್ಥನೆ. ಹಾಗಿದ್ದರೆ ಬಿಜೆಪಿ ಮುಂದಿನ ಹಾದಿ ಏನು?
ನವದೆಹಲಿ, ಡಿಸೆಂಬರ್ 14: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟರು ಎಂದು ಸಾಬೀತುಪಡಿಸುವುದಕ್ಕೆ ನನ್ನ ಹತ್ತಿರ ಮಾಹಿತಿ ಇದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ಒಂದು ತಿಂಗಳಿಂದ ಸಂಸತ್ ನಲ್ಲಿ ಚರ್ಚೆಯಾಗಬೇಕು ಎಂದು ಪ್ರಯತ್ನಿಸ್ತಿದೀವಿ. ಆದರೆ ಸರಕಾರ ಚರ್ಚೆಯಲ್ಲಿ ಆಸಕ್ತಿ ತೋರಿಸ್ತಿಲ್ಲ ಎಂದಿದ್ದಾರೆ.
ಲೋಕಸಭೆಯಲ್ಲಿ ನಾನು ಮಾತನಾಡಿದರೆ ಕಷ್ಟ ಎಂಬ ಕಾರಣಕ್ಕೆ ಪ್ರಧಾನಿಗಳಿಗೆ ನನ್ನ ಬಗ್ಗೆ ಭಯ ಇದೆ. ಏಕೆಂದರೆ ಪ್ರಧಾನಿ ಬಗ್ಗೆ ನನ್ನ ಹತ್ತಿರ ಮಾಹಿತಿ ಇದೆ. ಅದು ಬಹಿರಂಗವಾದರೆ ಅವರ ಬಲೂನ್ ಒಡೆದುಹೋಗುತ್ತದೆ ಎಂದು ರಾಹುಲ್ ಗಾಂಧಿ ಪಾರ್ಲಿಮೆಂಟ್ ನ ಸೆಂಟ್ರಲ್ ಹಾಲ್ ನಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.[ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್]
ವಿರೋಧ ಪಕ್ಷಗಳೆಲ್ಲ ಸೇರಿ, ಬೇಷರತ್ ಆಗಿ ಲೋಕಸಭೆಯಲ್ಲಿ ಚರ್ಚೆ ನಡೆಸಲು ಸಿದ್ಧವಾಗಿವೆ. ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿವೆ. ಅಪನಗದೀಕರಣ ಎಂಬುದು ಬಡವರ ವಿರುದ್ಧದ ನಿರ್ಧಾರ. ಸಾರ್ವಜನಿಕ ಸಭೆ, ಸಮಾರಂಭ ಅಂತ ಪ್ರಧಾನಿ ಸಂಸತ್ ನಿಂದ ತಪ್ಪಿಸಿಕೊಳ್ಳೋದಿಕ್ಕೆ ಸಾಧ್ಯವಿಲ್ಲ ಎಂದರು.
ಅಪನಗದೀಕರಣದ ವಿಚಾರದ ಬಗ್ಗೆಯೇ ಗದ್ದಲ ಏರ್ಪಟ್ಟು ನಾಲ್ಕು ದಿನಗಳ ನಂತರ ಬುಧವಾರ ಮತ್ತೆ ಚಳಿಗಾಲದ ಅಧಿವೇಶನ ಆರಂಭವಾಯಿತು. ಆದರೆ ಬಿಜೆಪಿ ಮುಖಂಡರು ರಾಹುಲ್ ಗಾಂಧಿ ಆರೋಪವನ್ನು ಆಧಾರರಹಿತ ಎಂದಿದ್ದಾರೆ. ಬಿಜೆಪಿ ಮುಖಂಡ ಜಾಫರ್ ಇಸ್ಲಾಂ ಮಾಧ್ಯಮದವರ ಜತೆ ಮಾತನಾಡಿ, ರಾಹುಲ್ ಗಾಂಧಿ ಮತ್ತು ಅವರ ಆರೋಪಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಛೇಡಿಸಿದ್ದಾರೆ.[ಮೋದಿ ಕೆಲವರಿಗಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ]
ಯಾವುದೇ ಆಧಾರವಿಲ್ಲದೆ ವಿಚಾರಗಗಳನ್ನು ಹೇಳುವುದು ರಾಹುಲ್ ಹವ್ಯಾಸ. ಆ ಮೂಲಕ ಜನರ ಗಮನ ಸೆಳೆಯುವುದಕ್ಕೆ ಯತ್ನಿಸುತ್ತಾರೆ. ಅವರ ಮಾತು ಆಲೋಚನಾರಹಿತವಾದದ್ದು ಎಂದು ಇಸ್ಲಾಂ ಖಂಡಿಸಿದ್ದಾರೆ.