ರಾಷ್ಟ್ರಪತಿ ರೇಸ್: ದ್ರೌಪದಿ ಮುರ್ಮು VS ಗೋಪಾಲಕೃಷ್ಣ ಗಾಂಧಿ!?
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿಪಕ್ಷ ಒಕ್ಕೂಟ ಗಾಂಧಿಯವರ ಹೆಸರನ್ನು ಸೂಚಿಸಿದ್ದು ಮುರ್ಮು ಮತ್ತು ಗಾಂಧಿ ಮಧ್ಯೆ ರಾಷ್ಟ್ರಪತಿ ಸ್ಥಾನಕ್ಕಾಗಿ ಸ್ಪರ್ಧೆ ಏಳುವ ಸೂಚನೆ ಸಿಕ್ಕುತ್ತಿದೆ.
ನವದೆಹಲಿ, ಮೇ 06: ಜುಲೈ 25 ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಉತ್ತರಾಧಿಕಾರಿ ಎಂದು ದ್ರೌಪದಿ ಮುರ್ಮು ಹೆಸರು ಬಹುತೇಕ ಅಂತಿಮಗೊಳ್ಳುತ್ತಿರುವ ಹೊತ್ತಲ್ಲೇ ವಿಪಕ್ಷಗಳು ರಾಷ್ಟ್ರಪತಿ ಗಾದಿಗೆ ಹೊಸ ಹೆಸರನ್ನು ಸೂಚಿಸಿ ಬಾಂಬ್ ಸಿಡಿಸಿವೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿಯವರ ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ವಿಪಕ್ಷಗಳು ಸೂಚಿಸಿದ್ದು, ಎನ್ ಡಿಎ ಮೈತ್ರಿಕೋಟಕ್ಕೆ ಹೊಸ ತಲೆನೋವು ಆರಂಭವಾಗುವ ಸೂಚನೆ ದಟ್ಟವಾಗಿದೆ.[ಸಂಭಾವ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದಷ್ಟು]
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿಪಕ್ಷ ಒಕ್ಕೂಟ ಗಾಂಧಿಯವರ ಹೆಸರನ್ನು ಸೂಚಿಸಿದ್ದು ಮುರ್ಮು ಮತ್ತು ಗಾಂಧಿ ಮಧ್ಯೆ ರಾಷ್ಟ್ರಪತಿ ಸ್ಥಾನಕ್ಕಾಗಿ ಸ್ಪರ್ಧೆ ಏಳುವ ಸೂಚನೆ ಸಿಕ್ಕುತ್ತಿದೆ.[ಸುದ್ದಿಸ್ವಾರಸ್ಯ : ರಜನಿ ಭಾರತದ ಮುಂದಿನ ರಾಷ್ಟ್ರಪತಿ?]
ಬಿಜೆಪಿಯನ್ನು ಹೇಗಾದರೂ ಸೋಲಿಸಬೇಕೆಂಬ ಪಣತೊಟ್ಟಿರುವ ವಿಪಕ್ಷಗಳಿಗೆ ರಾಷ್ಟ್ರಪತಿ ಆಯ್ಕೆ ಹೊಸ ಬ್ರಹ್ಮಾಸ್ತ್ರವೆನ್ನಿಸಿದ್ದರೆ ಅಚ್ಚರಿಯೇನಿಲ್ಲ. ರಾಷ್ಟ್ರಪತಿ ಆಯ್ಕೆಗೆ ಸಂಬಂಧಸಿದಂತೆ ತಟಸ್ಥವಾಗಿಯೇ ಉಳಿದಿರುವ ಕೆಲವು ಪಕ್ಷಗಳ ನಿಲುವೂ ಅರ್ಥವಾಗದ ಕಾರಣ ಯಾವ ಪಕ್ಷ ಸೂಚಿಸಿದ, ಬೆಂಬಲಿಸಿದ ಅಭ್ಯರ್ಥಿ ರಾಷ್ಟ್ರಪತಿಯಾಗಬಹುದು ಎಂಬುದು ಕುತೂಹಲದ ಪ್ರಶ್ನೆಯಾಗಿಯೇ ಉಳಿದಿದೆ.[ರಾಷ್ಟ್ರಪತಿ ಹುದ್ದೆಗೆ ಹೊಸ ಹೆಸರು; ಮೋದಿ ಹೊಸ ತಂತ್ರಗಾರಿಕೆ?]
ಗೋಪಾಲ ಕೃಷ್ಣ ಗಾಂಧಿ ಯಾರು?
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹುಟ್ಟಿದ್ದು 1946, ಏಪ್ರಿಲ್ 22 ರಂದು. 2004 ರಿಂದ 2009ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ಇವರು ಮಾಜಿ ಐಎಎಸ್ ಅಧಿಕಾರಿಯಾಗಿ ರಾಷ್ಟ್ರಪತಿಗಳ ಆಪ್ತಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಶರದ್ ಯಾದವ್ ಹೆಸರೂ ಗುಸುಗುಸು!
ಹೇಗಾದರಾಗಲಿ, ತಾವು ಬೆಂಬಲಿಸುವ ಅಭ್ಯರ್ಥಿಯನ್ನೇ ರಾಷ್ಟ್ರಪತಿಯನ್ನಾಗಿ ಮಾಡಬೇಕೆಂಬ ಹಟ ವಿಪಕ್ಷಿಗಳಿಗಿದೆ. ಅದಕ್ಕೆಂದೇ ಒಬ್ಬ ಪ್ರಭಾವೀ ಅಭ್ಯರ್ಥಿಯ ಹುಡುಕಾಟದಲ್ಲಿ ವಿಪಕ್ಷಗಳು ತೊಡಗಿಕೊಂಡಿವೆ. ಈ ಸಂದರ್ಭದಲ್ಲಿ ಕಣ್ಣಿಗೆ ಬಿದ್ದವರು ಜೆಡಿಯು ನಾಯಕ ಶರದ್ ಯಾದವ್! ಇವರಿಗೆ ಕಾಂಗ್ರೆಸ್ ಸೇರಿದಂತೆ ಎಲ್ಲ ವಿಪಕ್ಷಗಳ ಬೆಂಬಲವೂ ಇದೆ ಎನ್ನಲಾಗುತ್ತಿದೆ.
ದ್ರೌಪದಿ ಮುರ್ಮುಗೆ ಬಂತೆ ಸಂಕಷ್ಟ?!
ಈಗಾಗಲೇ ಬಿಜೆಪಿ ಬಹುತೇಕ ಖಚಿತ ಪಡಿಸಿರುವ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಆಯ್ಕೆಯ ಹಾದಿ ಸುಲಭವಂತೂ ಅಲ್ಲ ಎಂಬುದು ಈಗ ದೃಡವಾಗಿದೆ. ದ್ರೌಪದಿ ಮುರ್ಮು ಅಕಸ್ಮಾತ್ ರಾಷ್ಟ್ರಪತಿಯಾಗಿ ಆಯ್ಕೆಯಾದದ್ದೇ ಆದರೆ ಬುಡಕಟ್ಟು ಸಮುದಾಯದಿಂದ ಬಂದು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ತಟಸ್ಥ ಪಕ್ಷಗಳಿಗೆ ಎಲ್ಲಿಲ್ಲದ ಬೆಲೆ!
ನಮಗೂ ರಾಷ್ಟ್ರಪತಿ ಚುನಾವಣೆಗೂ ಸಂಬಂಧವೇ ಇಲ್ಲ ಎಂಬಂತೆ ತಟಸ್ಥವಾಗಿರುವ ಬಿಜು ಜನತಾ ದಳ, ಡಿಎಂಕೆ ಮತ್ತು ವೈಎಸ್ ಆರ್ ಕಾಂಗ್ರೆಸ್ ನಂಥ ಪಕ್ಷಗಳು ಇದೀಗ ರಾಷ್ಟ್ರಪತಿ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ. ಈ ಪಕ್ಷಗಳ ನಿಲುವಿನ ಮೇಲೆಯೇ ಮುಂದಿನ ರಾಷ್ಟ್ರಪತಿ ಯಾರಗಬಹುದೆಂಬ ಉತ್ತರವೂ ಅಡಕವಾಗಿದೆ ಎಂದರೆ ತಪ್ಪಾಗಲಾರದು.
ಇನ್ನೂ ಯಾರ್ಯಾರ ಹೆಸರು ಕೇಳಬೇಕೋ!
ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕಾರಾವಧಿ ಇದೇ ಜುಲೈ 25 ರಂದು ಮುಗಿಯಲಿದೆ ಎಂಬುದು ತಿಳಿಯುತ್ತಿದ್ದಂತೆಯೇ ಉತ್ತರಾಧಿಕಾರಿಯ ಹುಡುಕಾಟದಲ್ಲಿ ತೊಡಗಿದ ಪಕ್ಷಗಳಿಗೆ ಅದೆಷ್ಟು ಹೆಸರುಗಳು ಕಾಣಿಸಿದವೋ! ಜುಲೈ ವರೆಗೂ ಇನ್ನೆಷ್ಟು ಹೆಸರುಗಳು ಕೇಳಲಿವೆಯೋ! ಒಟ್ಟಿನಲ್ಲಿ ಸೂಕ್ತ ಅಭ್ಯರ್ಥಿಯೊಬ್ಬರು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದರೆ ಅಷ್ಟೇ ಸಾಕು ಎಂಬುದು ಜನರ ಅಭಿಪ್ರಾಯ.