ಸದಾನಂದರ ಕೊಡುಗೆ ಕೊನೆಗೂ ಜಾರಿ
ನವದೆಹಲಿ, ಜೂ 26 : ಪ್ರಯಾಣಿಕರು ಈಗಾಗಲೇ ಕಾಯ್ದಿರಿಸಿದ ರೈಲ್ವೆ ಟಿಕೆಟ್ ರದ್ದುಗೊಂಡಲ್ಲಿ ಎಸ್ಎಂಎಸ್ ಅಲರ್ಟ್ ಕಳುಹಿಸುವ ವ್ಯವಸ್ಥೆಯನ್ನು ಮಾಜಿ ರೈಲ್ವೆ ಸಚಿವ, ಹಾಲಿ ಕಾನೂನು ಸಚಿವ ಡಾ. ಡಿ. ವಿ ಸದಾನಂದ ಗೌಡ ಗುರುವಾರ ಜಾರಿಗೊಳಿಸಿದ್ದಾರೆ.
ಇನ್ನು ಮುಂದೆ ರೈಲ್ವೆ ಇಲಾಖೆಯು ಸಂಪೂರ್ಣ ಮೊಬೈಲ್ಮಯವಾಗಲಿದೆ. ಭಾರತದಾದ್ಯಂತ ರೈಲ್ವೆ ಇಲಾಖೆಯಲ್ಲೂ ಎಸ್ಎಂಎಸ್ ಸೇವೆಯನ್ನು ಜೂನ್ 21 ರಿಂದ ಅನುಷ್ಠಾನಗೊಳಿಸಿದೆ. ಪೈಲಟ್ ಯೋಜನೆಯ ಅಡಿಯಲ್ಲಿ ಪ್ರಯಾಣಿಕರಿಗೆ ರೈಲು ಹೊರಡುವ ನಿಲ್ದಾಣದ ಬಗೆಗಿನ ಮಾಹಿತಿಯನ್ನು ಎಸ್ಎಂಎಸ್ ಮೂಲಕ ತಿಳಿಸಲಾಗುವುದು. [ರೈಲ್ವೆ ಪ್ರಯಾಣಿಕರಿಗೆ ಎಸ್ಎಂಎಸ್ ಅಲರ್ಟ್]
ಟಿಕೆಟ್ ರದ್ದುಗೊಂಡಿರುವ ಮಾಹಿತಿಯನ್ನು ಮೊದಲೇ ಕಳುಹಿಸಲಾಗುತ್ತದೆ. ಇದರಿಂದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಉಪ ರೈಲ್ವೆ ನಿಲ್ದಾಣವನ್ನು ತಲುಪಲು ಪ್ರಯತ್ನಿಸಲಾಗುವುದು. ಆದರೆ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಅವಧಿಯಲ್ಲಿ ಮುಖ್ಯವಾಗಿ ತಮ್ಮ ಮೊಬೈಲ್ ನಂಬರ್ನ್ನು ನಮೂದಿಸಬೇಕಾಗಿದೆ ಎಂದು ರೈಲ್ಚೆ ಸಚಿವ ವಕ್ತಾರ ಅನಿಲ್ ಕುಮಾರ್ ಐಎಎನ್ಎಸ್ ಗೆ ತಿಳಿಸಿದ್ದಾರೆ.
ತುರಂತ್, ಶತಾಬ್ದಿ ಮತ್ತು ರಾಜಧಾನಿ ಎಕ್ಸ್ಪ್ರೆಸ್ಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಎಸ್ಎಂಎಸ್ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ಈ ವ್ಯವಸ್ಥೆಯನ್ನು ಜಾರಿಗೆ ತಂದು ಪ್ರಯಾಣಿಕರ ಒತ್ತಡ ಕಡಿಮೆ ಮಾಡಿದ್ದಾರೆ.