ಮೋದಿ ಸರಕಾರದ ಮೇಲೆ ಕಾಂಗ್ರೆಸ್ ಹದ್ದಿನ ಕಣ್ಣು
ನವದೆಹಲಿ, ನ. 6: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಹಾಗೂ ಜಾರಿಗೆ ತರಲು ರಚಿಸುವ ನಿಯಮಾವಳಿಗಳ ಮೇಲೆ ಹದ್ದಿನ ಕಣ್ಣಿಡಲು ನಾಲ್ವರು ಸದಸ್ಯರ ಹೊಸ ತಂಡ ರಚಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.
ಈ ತಂಡ ನೀಡುವ ವರದಿ ಆಧಾರದ ಮೇಲೆ ಬಿಜೆಪಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪಕ್ಷವನ್ನು ಸನ್ನದ್ಧಗೊಳಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿಯೂ ರಚಿಸಲ್ಪಟ್ಟಿದ್ದ ಈ ತಂಡ 12 ಸದಸ್ಯರನ್ನು ಹೊಂದಿದ್ದರೂ ನಿಷ್ಕ್ರಿಯವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಸದಸ್ಯರನ್ನು ನೇಮಿಸಲಾಗಿದೆ.
ರಾಜೀವ ಗೌಡ, ಸಂದೀಪ್ ದೀಕ್ಷಿತ್, ರಣದೀಪ್ ಸರ್ಜೇವಾಲಾ ಹಾಗೂ ಸಂಜಯ್ ನಿರುಪಮ್ ಈ ನೂತನ ತಂಡದ ಸದಸ್ಯರು. ರಾಜೀವ ಗೌಡ ಅವರು ಪಬ್ಲಿಕ್ ಪಾಲಿಸಿ ಹಾಗೂ ಮ್ಯಾನೇಜ್ ಮೆಂಟ್ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಕೀಯ ರಂಗದಲ್ಲಿ ವಿವಾದ ರಹಿತ, ನಿಸ್ಪಕ್ಷಪಾತಿ, ಬುದ್ಧಿವಂತ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಅರಿತವರು ಎಂದು ಹೆಸರಾಗಿದ್ದಾರೆ. ಇದರಿಂದ ತಂಡಕ್ಕೆ ಸಾಕಷ್ಟು ಬಲ ಬಂದಂದಾಗಿದೆ.
'Research and Coordination Committee (ಸಂಶೋಧನೆ ಹಾಗೂ ಸಮನ್ವಯ ಸಮಿತಿ)' ಎಂದು ಕರೆಯಲಾಗುವ ಈ ತಂಡ ಕೇಂದ್ರ ಸರ್ಕಾರ ಕೈಗೊಳ್ಳುವ ಕ್ರಮಗಳ ಉತ್ತಮ ಮತ್ತು ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲಲಿದೆ. ಲೋಕಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತ ಮೇಲೆ ಪಕ್ಷದ ಬಲವೃದ್ಧಿಗಾಗಿ ಕೈಗೊಂಡ ಪ್ರಥಮ ಕ್ರಮ ಇದಾಗಿದೆ.
ಒಳ ವಿಷಯ ಹೊರಗೆಳಿತೇವೆ: ಈ ಕುರಿತು ಪ್ರತಿಕ್ರಿಯೆ ನೀಡಿರುವ ತಂಡದ ಸದಸ್ಯ ಸಂಜಯ್ ನಿರುಪಮ್, "ನಾವು ಸರ್ಕಾರದ ಮೇಲೆ ಕಣ್ಣಿಡಲಿದ್ದೇವೆ. ಸರ್ಕಾರದ ನೀತಿಗಳನ್ನು ಅಧ್ಯಯನ ಮಾಡಿ, ಆಂತರಿಕ ವಿಷಯಗಳು ಹಾಗೂ ಜಾರಿ ಕ್ರಮಗಳನ್ನು ಬಯಲಿಗೆಳೆಯುತ್ತೇವೆ" ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ವಾಗ್ದಾಳಿ: ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಮೋದಿ ಸರ್ಕಾರದ ಯೋಜನೆಗಳ ಕುರಿತು ವಾಕ್ದಾಳಿ ಆರಂಭಿಸಿದೆ. ಯುಪಿಎ ಸರ್ಕಾರದ ಯೋಜನೆಗಳು ಹಾಗೂ ನೀತಿಗಳನ್ನೇ ಬಿಜೆಪಿ ಸರ್ಕಾರ ಹೊಸ ಹೆಸರಿನಲ್ಲಿ ಜಾರಿಗೆ ತರುತ್ತಿದೆ. ಸ್ವಚ್ಛ ಭಾರತ ಅಭಿಯಾನ ಹಾಗೂ ಜನ ಧನ ಯೋಜನೆ ಕೂಡ ಯುಪಿಎ ಸರ್ಕಾರದ್ದು ಎಂದು ಟೀಕಿಸಿದೆ.