ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ: ಪ್ರಧಾನಿಗೆ ಮೊರೆ
ನವದೆಹಲಿ, ಡಿ. 16: ಕರ್ನಾಟಕ ಸರ್ಕಾರವು ರಾಜ್ಯದ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಒಪ್ಪಿಗೆ ನೀಡಬೇಕೆಂದು ಇಟ್ಟಿರುವ ಕೋರಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಪಡೆಯಲು ಕೇಂದ್ರದ ಆಹಾರ ಸಚಿವಾಲಯ ನಿರ್ಧರಿಸಿದೆ.
ಕರ್ನಾಟಕದಲ್ಲಿ ಮೆಕ್ಕೆಜೋಳದ ಬೆಳೆಯು ಕ್ವಿಂಟಲ್ಗೆ 1,300 ರೂ.ಗಿಂತ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರ ರಕ್ಷಣೆಗಾಗಿ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರುವುದು ಮಾತ್ರ ಪರಿಹಾರ ಎಂದು ಕರ್ನಾಟಕ ಸರ್ಕಾರ ವಾದಿಸಿದೆ.
ನಿಯಮದ ಪ್ರಕಾರ ಅವಕಾಶವಿಲ್ಲ: ಪರಿಷ್ಕೃತ ನಿಯಮದ ಪ್ರಕಾರ ಮೆಕ್ಕೆಜೋಳದಂತಹ ಧಾನ್ಯಗಳನ್ನು ಸಾರ್ವಜನಿಕ ವಿತರಣೆ ಪದ್ಧತಿ (ಪಿಡಿಎಸ್) ಗಾಗಿ ಮಾತ್ರ ಬೆಂಬಲ ಬೆಲೆಯಲ್ಲಿ ಖರೀದಿಸಬಹುದು. ಆದರೆ, ಕರ್ನಾಟಕದಲ್ಲಿ ಪ್ರಸ್ತುತ ಸಾರ್ವಜನಿಕ ವಿತರಣೆಯ ಅಗತ್ಯವಿಲ್ಲ.
ಕಳೆದ ವರ್ಷ ಕೂಡ ಸಾರ್ವಜನಿಕ ವಿತರಣೆ ಅಗತ್ಯ ಕಂಡುಬರದಿದ್ದರೂ 7.20 ಲಕ್ಷ ಟನ್ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಕರ್ನಾಟಕ ಸರ್ಕಾರ ಖರೀದಿಸಿತ್ತು. ಆದರೆ 92,670 ಟನ್ ಮೆಕ್ಕೆಜೋಳ ಮಾತ್ರ ಸಾರ್ವಜನಿಕವಾಗಿ ವಿತರಣೆಗೊಂಡಿತ್ತು. ಹೊಸ ಆಹಾರ ಕಾನೂನು ಪ್ರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿದ ಮೆಕ್ಕೆಜೋಳವನ್ನು ಕೆಜಿಗೆ ಒಂದು ರೂ.ನಂತೆ ಪೂರೈಸಲಾಗುತ್ತದೆ.
"ಈ ಗೊಂದಲದ ಹಿನ್ನೆಲೆಯಲ್ಲಿ ನಾವು ಪ್ರಧಾನ ಮಂತ್ರಿಗಳಲ್ಲಿ ಸಲಹೆ ಕೇಳಿದ್ದೇವೆ" ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿತ್ತ ಸಚಿವಾಲಯ ಆಕ್ಷೇಪ: ಆದರೆ, ಕರ್ನಾಟಕದ ಪ್ರಸ್ತಾವನೆಗೆ ಕೇಂದ್ರದ ವಿತ್ತ ಸಚಿವಾಲಯವು ಆಕ್ಷೇಪ ವ್ಯಕ್ತಪಡಿಸಿದೆ. ಆರ್ಥಿಕ ದೂರದೃಷ್ಟಿ ಇಟ್ಟುಕೊಂಡು ನಿರ್ಧಾರ ಪಡೆಯಬೇಕೆಂದು ಕೇಂದ್ರ ಆಹಾರ ಸಚಿವಾಲಯಕ್ಕೆ ಸೂಚಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಭೇಟಿಯಾಗಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಕ್ಕೆಜೋಳ ಬೆಳೆಗಾರರ ಹಿತ ಕಾಪಾಡುವಲ್ಲಿ ಧನಾತ್ಮಕ ಹೆಜ್ಜೆ ಇಡಬೇಕು. ಪ್ರಸಕ್ತ ವರ್ಷ ರಾಜ್ಯದಲ್ಲಿ ಸಾರ್ವಜನಿಕ ವಿತರಣೆ ಅಗತ್ಯವಿಲ್ಲದಿದ್ದರೂ ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ ಖರೀದಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು.