ವಿಶ್ವ ತಾಯ್ನುಡಿ ದಿನ ಇತರ ಭಾಷೆಯ ದನಿಯೂ ಕೇಳಲಿ
ಭಾರತೀಯರೆಲ್ಲರೂ ಸಮಾನರು ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದ್ದರೂ ಇದೇ ಮಾತನ್ನು ಭಾರತದ ಭಾಷೆಗಳ ವಿಷಯಗಳಲ್ಲಿ ಹೇಳಲು ಆಗದು. ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದಿ ಭಾಷೆಯ ಬೆನ್ನಿಗೆ ನಿಂತ ಕೇಂದ್ರ ಸರ್ಕಾರದ ಕ್ರಮದಿಂದಾಗಿ ಹಂತ ಹಂತವಾಗಿ ಭಾರತದ ಹಲವಾರು ಹಿಂದಿಯೇತರ ಭಾಷೆಗಳು ತಮ್ಮ ನೆಲೆಯನ್ನು ಕಳೆದುಕೊಂಡು, ತಮ್ಮ ಬಳಕೆಯ ವ್ಯಾಪ್ತಿಯನ್ನು ಕುಗ್ಗಿಸಿಕೊಳ್ಳುತ್ತ ಸಾಗಿವೆ. ಅವುಗಳ ಜಾಗವನ್ನು ಹಿಂದಿ ಆಕ್ರಮಿಸುತ್ತ ಬಂದಿದೆ.
ಮನರಂಜನೆ, ಗ್ರಾಹಕ ಸೇವೆ, ನಾಗರೀಕ ಸೇವೆ, ಸುರಕ್ಷತೆ, ಶಿಕ್ಷಣ ಹೀಗೆ ಎಲ್ಲ ಕ್ಷೇತ್ರದಲ್ಲೂ ಇಂದು ಹಿಂದಿ ಭಾಷೆಯ ಯಜಮಾನಿಕೆ ಹಬ್ಬಿದ್ದು, ಹಿಂದೀಗಿಂತಲೂ ಹಳೆಯ ಮತ್ತು ಶ್ರೀಮಂತವಾದ ಭಾರತದ ಇತರೆ ಭಾಷೆಗಳು ತಮ್ಮ ನೆಲದಲ್ಲೇ ಅನಾಥವಾಗುವ ಸ್ಥಿತಿಯುಂಟಾಗುತ್ತಿದೆ.
ಇದರ ವಿರುದ್ಧ ಹಿಂದೆ ಅಲ್ಲಲ್ಲಿ ಚದುರಿದಂತೆ ಎದ್ದಿದ್ದ ಪ್ರತಿರೋಧ ಈಗ ಸಾಕಷ್ಟು ವ್ಯವಸ್ಥಿತವಾಗಿ ರೂಪುಗೊಳ್ಳುತ್ತಿದೆ. ತಮಿಳರು, ಬೆಂಗಾಲಿಗಳು, ಪಂಜಾಬಿಗಳು, ಕನ್ನಡಿಗರು, ಮಲೆಯಾಳಿಗಳು, ಮರಾಠಿಗರು ಹೀಗೆ ಹಲವು ಭಾಷಿಕರು ನ್ಯಾಯಸಮ್ಮತವಾಗಿ ತಮ್ಮ ಭಾಷೆಗೆ ದಕ್ಕಬೇಕಿರುವ ಹಕ್ಕುಗಳಿಗಾಗಿ, ಹಿಂದಿ/ಇಂಗ್ಲಿಷಿಗೆ ಇರುವ ಸ್ಥಾನಮಾನಕ್ಕೆ ಸಮಾನವಾದ ಸ್ಥಾನಮಾನಕ್ಕಾಗಿ ದನಿ ಎತ್ತುವ ಬೆಳವಣಿಗೆ ಕಳೆದ ಹತ್ತು ವರ್ಷಗಳಿಂದ ವ್ಯಾಪಕಗೊಳ್ಳುತ್ತಿದೆ. [ವಿಮಾನ ಸಿಬ್ಬಂದಿ ಕನ್ನಡದಲ್ಲೂ ಘೋಷಣೆ ಮಾಡಲಿ!]
ಕಳೆದ ವರ್ಷ ಆಗಸ್ಟ್ 15 ಮತ್ತು ಈ ವರ್ಷದ ಜನವರಿ 26ರಂದು ಎರಡು ಬಾರಿ ಟ್ವಿಟ್ಟರಿನಲ್ಲಿ ಹಿಂದಿ ಹೇರಿಕೆಗೆ ತಡೆಯೊಡ್ಡಿ, ಭಾರತದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡುವಂತೆ ಆಗ್ರಹಿಸುವ ಅಭಿಯಾನಕ್ಕೆ ದೊಡ್ಡ ಮಟ್ಟದ ಸ್ಪಂದನೆ ಕಂಡು ಬಂದಿತ್ತು. ಅದು ಭಾರತದ ಮಟ್ಟದಲ್ಲಿ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗುವ ಮೂಲಕ ಮೂಲೆಗುಂಪಾಗಿದ್ದ ನಮ್ಮ ಭಾಷೆಗಳ ದನಿ ಮತ್ತೆ ಕೇಳಿ ಬರುವಂತಾಗಿದೆ.
ಚೆನ್ನೈನಲ್ಲಿ ಕಳೆದ ಸೆಪ್ಟೆಂಬರಿನಲ್ಲಿ ನಡೆದ ಭಾಷಾ ಸಮ್ಮೇಳನದಲ್ಲಿ ತಮಿಳು, ಮಲಯಳಂ, ಮರಾಠಿ, ಕನ್ನಡ (Kannada), ಬೆಂಗಾಲಿ ಮತ್ತು ಪಂಜಾಬಿ ಭಾಷಿಕರು ಒಂದೆಡೆ ಸೇರಿ "ಚೆನ್ನೈ ಭಾಷಾ ಹಕ್ಕುಗಳ ಘೋಷಣೆ"ಯನ್ನು ಹೊರ ತಂದಿದ್ದರು. ಈ ಘೋಷಣೆಯಲ್ಲಿ ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳಿಗೂ ಕೇಂದ್ರ ಆಡಳಿತ ಭಾಷೆಯ ಸ್ಥಾನಮಾನಕ್ಕೆ ಆಗ್ರಹಿಸಲಾಗಿತ್ತು. ಅಲ್ಲದೇ ಎಂಟನೆಯ ಪರಿಚ್ಛೇದಕ್ಕೆ ಸೇರಲು ಪ್ರಯತ್ನಿಸುತ್ತಿರುವ ತುಳು, ರಾಜಸ್ಥಾನಿ ಮುಂತಾದ ಭಾಷೆಗಳ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿತ್ತು. ಇದರೊಂದಿಗೆ ಭಾರತದ ಭಾಷೆಗಳಲ್ಲಿ ಶಿಕ್ಷಣ, ಚಿಕ್ಕಪುಟ್ಟ ಭಾಷೆಗಳಿಗೆ ಸಂವಿಧಾನಿಕ ರಕ್ಷಣೆ ಮುಂತಾದ ಬೇಡಿಕೆಗಳಿಗೂ ಸಹಮತ ವ್ಯಕ್ತವಾಗಿತ್ತು. [ಮೂಲ ಅಮೆರಿಕಾ ಜನಾಂಗದ ಭಾಷೆಯಲ್ಲಿ ಕನ್ನಡದ ಪ್ರಭಾವ]
ಈಗ ಮುಂದುವರೆದು ಇದೇ ಫೆಬ್ರವರಿ 21ರಂದು ನಡೆಯುವ ವಿಶ್ವ ತಾಯ್ನುಡಿ ದಿನವನ್ನು ದೆಹಲಿಯಲ್ಲಿ ಆಚರಿಸುವ ನಿರ್ಧಾರವನ್ನು ಸೆಂಟರ್ ಫಾರ್ ಲ್ಯಾಂಗ್ವೇಜ್ ಈಕ್ವಾಲಿಟಿ ಅಂಡ್ ರೈಟ್ಸ್ (ಕ್ಲಿಯರ್) ಸಂಸ್ಥೆ ಕೈಗೊಂಡಿದೆ. ಅಂದು ದೆಹಲಿಯ ಪ್ರೆಸ್ ಕ್ಲಬ್ ಆವರಣದಲ್ಲಿ "ಡೆಲಿ ಡಿಮಾಂಡ್ಸ್" ಹೆಸರಿನ ಭಾಷಾ ಹಕ್ಕುಗಳ ಬೇಡಿಕೆಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತದ ಇಪ್ಪತ್ತಕ್ಕೂ ಹೆಚ್ಚು ಭಾಷೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದಿಂದ ತುಳು, ಕೊಂಕಣಿ ಮತ್ತು ಕನ್ನಡ ಭಾಷೆಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ ಜಂತರ್ ಮಂತರಿನಲ್ಲಿ ಸಂಜೆ 5ಕ್ಕೆ ಭಾಷಿಕ ಹಕ್ಕುಗಳ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಭಾರತೀಯರ ಸ್ಮರಣೆಯಲ್ಲಿ ಮೊಂಬತ್ತಿ ಬೆಳಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಎರಡೂ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಫೇಸ್ ಬುಕ್ಕಿನ ಈ ಕೊಂಡಿಯಲ್ಲಿ ಹೆಚ್ಚಿನ ವಿವರಗಳನ್ನು ಪಡೆಯಬಹುದು. [ಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿ]