EC ಗೆ ಲಂಚ ನೀಡಿದ ಆರೋಪ: ದೆಹಲಿಯಲ್ಲಿ ದಿನಕರನ್ ವಿಚಾರಣೆ
ಚುನಾವಣಾ ಆಯೋಗಕ್ಕೆ ಲಂಚ ನೀಡಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್ ಅವರನ್ನು ಇಂದು ದೆಹಲಿ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.
ನವದೆಹಲಿ, ಏಪ್ರಿಲ್ 22: ಚುನಾವಣಾ ಆಯೋಗಕ್ಕೆ ಲಂಚ ನೀಡಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿರುವ ಟಿಟಿವಿ ದಿನಕರನ್ ಅವರನ್ನು ಇಂದು (ಏಪ್ರಿಲ್ 22) ದೆಹಲಿ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.
ಇಂದು ವಿಚಾರಣೆ ಎದುರಿಸಲಿರುವ ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್ ಚೆನ್ನೈನಿಂದ ದೆಹಲಿಗೆ ತೆರಳಿದ್ದು, ತಮ್ಮ ಕೃತ್ಯವನ್ನು ಹೇಗೆ ಸಮರ್ಥಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.[ಎಐಎಡಿಎಂಕೆ ಪಕ್ಷದಿಂದ ಟಿಟಿವಿ ದಿನಕರನ್ ಔಟ್]
ಜಯಲಲಿತಾ ನಿಧನದಿಂದ ತೆರವಾಗಿದ್ದ ಚೆನ್ನೈನ ಆರ್.ಕೆ. ನಗರ ಉಪ ಚುನಾವಣೆ ಏ. 12ರಂದು ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಎಐಎಡಿಎಂಕೆ ಪಕ್ಷದ ಲಾಂಛನವಾದ ಎರಡು ಎಲೆಗಳ ಚಿಹ್ನೆಯನ್ನು ದಿನಕರನ್- ಶಶಿಕಲಾ ಬಣಕ್ಕೆ ಸೇರಿದವರು ತಮ್ಮ ಬಣದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು.
ಇದಕ್ಕಾಗಿ ದಿನಕರನ್ ಅವರು ಮಧ್ಯವರ್ತಿಯ ಮೂಲಕ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದ್ದರಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.