ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಬಿ.ಆರ್.ಅಂಬೇಡ್ಕರ್ ಮೊಮ್ಮಗ?
ನವದೆಹಲಿ, ಜೂನ್ 20: ರಾಮ್ ನಾಥ್ ಕೋವಿಂದ್ ತನ್ನ ರಾಷ್ಟ್ರಪತಿ ಅಭ್ಯರ್ಥಿ ಎಂದು ಎನ್ ಡಿಎ ನಿನ್ನೆ (ಜೂನ್ 19) ಘೋಷಿಸುತ್ತಿದ್ದಂತೆಯೇ ಒಮ್ಮೆ ಇಡೀ ದೇಶದ ಜನತೆಗೂ ಅಚ್ಚರಿಯಾಗಿದ್ದು ಸತ್ಯ. ಯಾಕಂದ್ರೆ ಕೋವಿಂದ್ ಯಾರೂ ನಿರೀಕ್ಷಿಸದ ಹೆಸರು. ದಲಿತ ಅಭ್ಯರ್ಥಿಯಾಗಿರುವುದರಿಂದ ಅವರನ್ನು ವಿಪಕ್ಷಗಳೂ ಬೆಂಬಲಿಸುತ್ತವೆ ಎಂಬ ಭಾವನೆ ಅವರ ಆಯ್ಕೆಯಲ್ಲಿ ಅಡಗಿದ್ದಿರಬಹುದು. ಆದರೆ ಇದೀಗ ವಿಪಕ್ಷಗಳು ತಾವೂ ಮತ್ತೊಬ್ಬ ದಲಿತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಗೆ ಅಚ್ಚರಿ ನೀಡಬಹುದು!
ದಲಿತ ವಿರೋಧಿ ಪಟ್ಟಕಟ್ಟಿಕೊಳ್ಳಲು ವಿರೋಧಿಗಳು ಸಿದ್ಧವೆ?
ಸಂವಿಧಾನ ಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ. ಹಾಗೆಯೇ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಸಹ ದಲಿತ ಅಭ್ಯರ್ಥಿಯಾಗಿರುವುದರಿಂದ ಅವರನ್ನೂ ಪರಿಗಣಿಸಿದರೆ ಅಚ್ಚರಿಯೇನಿಲ್ಲ.
ಬಿಜೆಪಿ ಘೋಷಿಸಿರುವ ಅಭ್ಯರ್ಥಿಯ ಕುರಿತು ತಮ್ಮ ಒಪ್ಪಿಗೆಯಿಲ್ಲ, ತಾವು ಬೇರೆಯದೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ಈಗಾಗಲೇ ವಿಪಕ್ಷಗಳು ಹೇಳಿವೆ. ಆದ್ದರಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆ ಅವಿರೋಧ ಆಯ್ಕೆಯಾಗದೆ, ಜುಲೈ 17 ರಂದು ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಜು.20 ರಂದು ಹೊರಬೀಳುವ ಫಲಿತಾಂಶದಲ್ಲಿ ದೇಶದ ಪ್ರಥಮ ಪ್ರಜೆಯ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ತಿಳಿಯಲಿದೆ.