ಯಮುನಾ ನದಿ ವಿವಾದ: ಆರ್ಟ್ ಆಫ್ ಲಿವಿಂಗ್ ಮೇಲೆ ಕೋಟ್ಯಂತರ ದಂಡ
ನವದೆಹಲಿ, ಜೂನ್ 06: ಯಮುನಾ ನದಿ ತೀರದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಆಯೋಜಿಸಿದ್ದ ವಿಶ್ವ ಸಂಸ್ಕೃತಿ ಸಮ್ಮೇಳನ ವಿವಾದಕ್ಕೆ ಕಾರಣವಾಗಿದ್ದು, ಎಲ್ಲರಿಗೂ ತಿಳಿದಿರಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ 4.75 ಕೋಟಿ ರು ಗಳನ್ನು ರವಿಶಂಕರ್ ಗುರೂಜಿ ಅವರ ಆಶ್ರಮದವರು ನಾಳೆಯೊಳಗೆ ಪಾವತಿಸಬೇಕಿದೆ.
ಬ್ಯಾಂಕ್ ಗ್ಯಾರಂಟಿಗೆ ಆರ್ಟ್ ಆಫ್ ಲಿವಿಂಗ್ ಹೆಚ್ಚಿನ ಕಾಲಾವಕಾಶ ಕೇಳಿ ಅರ್ಜಿ ಸಲ್ಲಿಸಿತ್ತು. ಆದರೆ, ಹಸಿರು ನ್ಯಾಯ ಪೀಠ ಅರ್ಜಿಯನ್ನು ತಿರಸ್ಕರಿಸಿ, ಮತ್ತು ದಂಡ ಪಾವತಿಸಲು ಸೂಚನೆ ನೀಡಿತ್ತು. [ಏನಿದು? ರವಿಶಂಕರ್ ಗುರೂಜಿ ಯಮುನಾ ನದಿ ತೀರ ವಿವಾದ]
ವಿಶ್ವ ಸಂಸ್ಕೃತಿ ಸಮ್ಮೇಳನ ಆಯೋಜಿಸಲು ಯಮುನಾ ನದಿ ತೀರದಲ್ಲಿ ದೊಡ್ದ ವೇದಿಕೆ ನಿರ್ಮಿಸಲಾಗಿತ್ತು ಜತೆಗೆ ನೆಲವನ್ನು ಸಮತಟ್ಟು ಮಾಡಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಇದರಿಂದಾಗಿ ಯಮುನಾ ನದಿ ದಂಡೆಗೆ ಹಾನಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಸಿರು ನ್ಯಾಯ ಪೀಠವು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಪರಿಹಾರವಾಗಿ 5 ಕೋಟಿ ರೂ. ಪಾವತಿಸುವಂತೆ ಸೂಚಿಸಿತ್ತು. [ಎಒಎಲ್ ಗೆ 5 ಕೋಟಿ ರು ದಂಡ, ಉತ್ಸವಕ್ಕೆ ಗ್ರೀನ್ ಸಿಗ್ನಲ್]
ನದಿ ಪರಿಸರ ಹಾನಿಯಾಗಿರುವುದಕ್ಕೆ ಪರಿಹಾರ ರೂಪವಾಗಿ 5 ಕೋಟಿ ರು ದಂಡ ಕಟ್ಟಲು ಎಒಎಲ್ ಗೆ ಸೂಚಿಸಲಾಗಿತ್ತು, ದಂಡ ಕಟ್ಟಲು ರವಿಶಂಕರ್ ಗುರೂಜಿ ನಿರಾಕರಿಸಿ, ಜೈಲಿಗೆ ಹೋಗಲು ಸಿದ್ಧ ಎಂದಿದ್ದರು.
ಯಮುನಾ ನದಿ ನೀರು ಹಾನಿಯಾಗಿರುವ ಕಾರಣ ಸುಮಾರು 100 ರಿಂದ 200 ಕೋಟಿ ರು ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಆದರೆ, ಪರಿಸರ ನಾಶ ಮಾಡಿದ ಕಾರಣಕ್ಕೆ ಆರ್ಟ್ ಆಫ್ ಲಿವಿಂಗ್ ಗೆ 5 ಕೋಟಿ ರು ದಂಡ ವಿಧಿಸಲಾಗಿದೆ. ಜೊತೆಗೆ ಯಮುನಾ ನದಿ ಪ್ರದೇಶದಲ್ಲಿ ಸಂಪೂರ್ಣವಾಗಿ ಜೀವ ವೈವಿಧ್ಯ ಉದ್ಯಾನ ನಿರ್ಮಿಸುವಂತೆ ಎಒಎಲ್ ಗೆ ಪ್ರಾಧಿಕಾರ ಸೂಚಿಸಿದೆ.
ವೇದಿಕೆ ನಿರ್ಮಿಸಲು 15.63 ಕೋಟಿ ರು ವೆಚ್ಚವಾಗಿದ್ದು, ಅಲಂಕಾರಕ್ಕಾಗಿ 10 ಕೋಟಿ ರು ಖರ್ಚು ಮಾಡಲಾಗಿತ್ತು. 172 ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಪದಾಧಿಕಾರಿಗಳು, ಸಂಸದರು ವಿಶ್ವ ಸಾಂಸ್ಕೃತಿಕ ಉತ್ಸವ 2016ದಲ್ಲಿ ಪಾಲ್ಗೊಂಡಿದ್ದರು.