ಕುಡಿಯಲು 20 ರುಪಾಯಿ ಕೊಡಲಿಲ್ಲ ಎಂದು ಅಣ್ಣನನ್ನೇ ಕೊಂದ
ದೆಹಲಿಯಲ್ಲಿ ನಡೆದ ಕೊಲೆ ಪ್ರಕರಣದ ವಿವರ ಇದು. ಕುಡಿಯಲು ಇಪ್ಪತ್ತು ರುಪಾಯಿ ಕೇಳಿದಾಗ ಕೊಡಲಿಲ್ಲ ಎಂಬ ಕಾರಣಕ್ಕೆ ತನ್ನ ಅಣ್ಣನನ್ನೇ ವ್ಯಕ್ತಿಯೊಬ್ಬ ಕೊಂದಿದ್ದಾನೆ. ಅತನನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ, ಫೆಬ್ರವರಿ 27: ಕುಡಿಯುವುದಕ್ಕೆ ಇಪ್ಪತ್ತು ರುಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಅಣ್ಣನನ್ನೇ ಇರಿದು ಕೊಂದ ಘಟನೆ ವಾಯವ್ಯ ದೆಹಲಿಯ ಸ್ವರೂಪ್ ನಗರ್ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ರಾತ್ರಿ ಆಸ್ಪತ್ರೆಯೊಂದರಿಂದ ಫೋನ್ ಕರೆ ಬಂತು. ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ತಿವಿಯಲಾಗಿದೆ ಎಂಬ ಮಾಹಿತಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಚೂರಿ ಇರಿತಗಳಿಂದ ಗಾಯಗಳಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರನ್ನು ಬಂಟಿ ಎಂದು ಗುರುತಿಸಲಾಗಿದೆ.[ವಾಷಿಂಗ್ ಮಷಿನ್ ನಲ್ಲಿ ಮುಳುಗಿ ಅವಳಿ ಹಸುಳೆ ದುರ್ಮರಣ]
ಆತನ ಸಹೋದರ ಪಂಕಜ್ ಎಂಬಾತನೇ ಚಾಕುವಿನಿಂದ ತಿವಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಕಜ್ ಮದ್ಯವ್ಯಸನಿಯಾಗಿದ್ದ. ಇದೇ ಕಾರಣಕ್ಕೆ ಬಂಟಿ ಅತನಿಗೆ ಛೀಮಾರಿ ಹಾಕುತ್ತಿದ್ದ. ಪಂಕಜ್ ಭಾನುವಾರ ಬಂಟಿಯನ್ನು ಇಪ್ಪತ್ತು ರುಪಾಯಿ ನೀಡುವಂತೆ ಕೇಳಿದ್ದಾನೆ. ಆದರೆ ಅದಕ್ಕೆ ಆತ ನಿರಾಕರಿಸಿದ್ದಾನೆ.[ಮದುವೆ ಮುರಿಯಲು ಈತ ಮಾಡಿದ್ದು ಎಂಥ ಮನೆಹಾಳು ಐಡಿಯಾ!]
ಈ ವೇಳೆ ಕೋಪಗೊಂಡ ಪಂಕಜ್, ಖಡ್ಡಾ ಕಾಲೋನಿಯಲ್ಲಿರುವ ಮನೆಯಲ್ಲಿ ಅಡುಗೆಗೆ ಬಳಸುವ ಚಾಕುವಿನಿಂದ ಇರಿದಿದ್ದಾನೆ. ಕುಡಿತಕ್ಕಾಗಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಆರೋಪಿ ಸಹ ಜೈಲು ಪಾಲಾಗಿದ್ದಾನೆ.