ನಿರ್ಭಯಾ ಮೇಲೆ ಎರಗಿದ್ದವನ ಮೇಲೆ ಕೈದಿಗಳಿಂದ ಹಲ್ಲೆ?
ನವದೆಹಲಿ, ಆಗಸ್ಟ್,21 : ದೆಹಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಾಲ್ವರಲ್ಲಿ ಒಬ್ಬನಾದ ವಿನಯ್ ಶರ್ಮ ನನ್ನ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ.
2012ರಲ್ಲಿ ನಡೆದ ದೆಹಲಿ ಗ್ಯಾಂಗ್ ರೇಪ್ ಹಾಗೂ ದರೋಡೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾದ ವಿನಯ್ ಶರ್ಮನನ್ನು ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಈತ ನ್ಯಾಯಾಧೀಶರಿಗೆ ಹಲ್ಲೆ ನಡೆದಿರುವುದರ ಬಗ್ಗೆ ತಿಳಿಸಿದ್ದಾನೆ.[ಭಾರತದ ಮಗಳು ವಿಡಿಯೋ ಯೂಟ್ಯೂಬಿನಲ್ಲಿ 'ಹಿಟ್']
ದರೋಡೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ್ ಶರ್ಮ ವಿಚಾರಣೆಗೆ ಒಳಪಡಿಸಿದಾಗ ಆತ 'ನನ್ನ ಮೇಲೆ ಸಹ ಕೈದಿಗಳಿಂದ ಹಲ್ಲೆ ನಡೆದಿದೆ. ಇದರಿಂದ ಎಡಗೈ ಹಾಗೂ ಎಡಗಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ನ್ಯಾಯಾದೀಶರ ಮುಂದೆ ಸಹ ಕೈದಿಗಳನ್ನು ದೂರಿದ್ದಾನೆ.
2012, ಡಿಸೆಂಬರ್ 16ರಂದು ಇಡೀ ದೇಶವನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ದೆಹಲಿ ಗ್ಯಾಂಗ್ ರೇಪ್ ಹಿನ್ನೆಲೆಯಲ್ಲಿ 6 ಜನರನ್ನು ಬಂಧಿಸಲಾಗಿತ್ತು. ಬಳಿಕ ಅಕ್ಷಯ್ ಟಾಕೂರ್, ವಿನಯ್ ಶರ್ಮ, ಪವನ್ ಗುಪ್ತಾ, ಮುಖೇಶ್ ಎನ್ನುವ ನಾಲ್ವರಿಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಗ್ಯಾಂಗ್ ರೇಪ್ ವೇಳೆ ದರೋಡೆ ನಡೆಸಿದ್ದ ವಿನಯ್ ಶರ್ಮನನ್ನು ರಾಮ್ ಆಧಾರ್ ಗುರುತಿಸಿದ್ದು, ದರೋಡೆ ಮಾಡಿರುವುದು ಸಾಬೀತಾಗಿದೆ. ಇದರ ಹಿನ್ನೆಲೆಯಲ್ಲಿ ವಿನಯ್ ಗೆ ಐಪಿಸಿ ಸೆಕ್ಷನ್ 395 ಮತ್ತು 365 ಅನ್ವಯ ಶಿಕ್ಷೆ ನೀಡಲಾಗಿದೆ.