ಲೋಕಪಾಲ್ ವಿಳಂಬ: ಕೇಂದ್ರ ಸರ್ಕಾರ ಧೋರಣೆಗೆ ಸುಪ್ರೀಂ ಕಿಡಿ
2013ರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಫಲವಾಗಿ, ಜನಲೋಕ್ ಪಾಲ್ ಮಸೂದೆಗೆ ಸಂಸತ್ತಿನ ಅಂಗೀಕಾರ ಸಿಕ್ಕಿದ್ದು, ಸಂಸತ್ತಿನ ಒಪ್ಪಿಗೆ ಸಿಕ್ಕು 3 ವರ್ಷಗಳೇ ಕಳೆದಿದ್ದರೂ, ಜಾರಿಯಾಗಿಲ್ಲ.
ನವದೆಹಲಿ, ಏಪ್ರಿಲ್ 27: ಜನಲೋಕಪಾಲ್ ವಿಧೇಯಕವನ್ನು ಜಾರಿಗೊಳಿಸದೇ ಇರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಮೋದಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದೆ.
2013ರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆ ಅವರ ಸತ್ಯಾಗ್ರಹದ ಫಲವಾಗಿ, ಜನಲೋಕ್ ಪಾಲ್ ಮಸೂದೆಗೆ ಸಂಸತ್ತಿನ ಅಂಗೀಕಾರ ಸಿಕ್ಕಿದೆ.
ಹೀಗೆ, ಸಂಸತ್ತಿನ ಒಪ್ಪಿಗೆ ಪಡೆದ ಮೂರು ವರ್ಷಗಳ ನಂತರವೂ ಮಸೂದೆ ಜಾರಿಗೊಳಿಸುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಖೇದಕರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಲೋಕಪಾಲ್ ಮಸೂದೆ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಾರಣ ಕೇಳಿತ್ತು.
ಇದಕ್ಕೆ ಉತ್ತರ ನೀಡಿದ್ದ ಕೇಂದ್ರ ಸರ್ಕಾರ, ಲೋಕಪಾಲರನ್ನು ಆಯ್ಕೆ ಮಾಡುವ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುವ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡಬೇಕಿರುವುದರಿಂದ ಇದು ವಿಳಂಬವಾಗುತ್ತಿದೆ ಎಂದು ಉತ್ತರಿಸಿತ್ತು.
ಈಗ, ಈ ಬಗ್ಗೆ ಆಕ್ಷೇಪವೆತ್ತಿರುವ ಸುಪ್ರೀಂ ಕೋರ್ಟ್, ಲೋಕಪಾಲ್ ಮಸೂದೆ ಜಾರಿಗೆ ಮೀನ ಎಣಿಸಲಾಗುತ್ತಿದ್ದು ಇದಕ್ಕೆ ಸರ್ಕಾರ ಕೊಡುವ ಯಾವುದೇ ಕಾರಣ ಸೂಕ್ತವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
2014ರ ಮಹಾ ಚುನಾವಣೆಯ ವೇಳೆ ಜನಲೋಕಪಾಲ್ ಮಸೂದೆ ಜಾರಿಗೆ ತರುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.