420 ಕೇಸಲ್ಲಿ ಅಂದರ್ ಆಗಿರುವ 'ಪವರ್ ಸ್ಟಾರ್' ಕಥೆ ಇಲ್ಲಿದೆ
ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ಪವರ್ ಸ್ಟಾರ್ ಶ್ರೀನಿವಾಸನ್ ನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಈ 'ಪವರ್ ಸ್ಟಾರ್' ನ 420 ಕಥೆ ಇಲ್ಲಿದೆ.
ಬೆಂಗಳೂರು, ಮಾರ್ಚ್ 10: ದೆಹಲಿಯ ಉದ್ಯಮಿಯೊಬ್ಬರಿಗೆ 1,000 ಕೋಟಿ ರು ಸಾಲ ಕೊಡಿಸುವುದಾಗಿ ನಂಬಿಸಿ 10 ಕೋಟಿ ರು ಲಪಟಾಯಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ಚಿತ್ರರಂಗ 'ಪವರ್ ಸ್ಟಾರ್' ರನ್ನು ಇತ್ತೀಚೆಗೆ ಬಂಧಿಸಿದ ಸುದ್ದಿ ತಿಳಿದಿರಬಹುದು. ಈತನ 420 ಕೆಲಸಗಳ ಸಂಪೂರ್ಣ ವಿವರ ಇಲ್ಲಿದೆ...
ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್ ಕುಮಾರ್ ಪವರ್ ಸ್ಟಾರ್ ಆಗಿದ್ದರೆ, ತೆಲುಗಿನಲ್ಲಿ ಪವನ್ ಕಲ್ಯಾಣ್ ಪವರ್ ಸ್ಟಾರ್ ಆಗಿದ್ದಾರೆ. ಆದರೆ, ತಮಿಳು ಚಿತ್ರರಂಗದಲ್ಲಿ ಹಾಸ್ಯಮಯ ನಟ ಹಾಗೂ ನಿರ್ದೇಶಕ ಶ್ರೀನಿವಾಸನ್ ಅವರು ತಮ್ಮ ಹೆಸರಿಗೆ 'ಪವರ್ ಸ್ಟಾರ್' ಹಾಕಿಕೊಂಡು ಜನಪ್ರಿಯತೆ ಗಳಿಸಿದ್ದಾರೆ.
ವೃತ್ತಿಯಿಂದ ವೈದ್ಯರಾಗಿರುವ ಶ್ರೀನಿವಾಸನ್ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಜತೆಜತೆಗೆ ಹಲವಾರು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ದೆಹಲಿ, ಚೆನ್ನೈ ಅಲ್ಲದೆ ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೆಹಲಿ ಮೂಲದ ಉದ್ಯಮಿಯಿಂದ 10 ಕೋಟಿ ರೂ. ಹಣ ಪಡೆದುಕೊಂಡು ಮೋಸ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ದೆಹಲಿಯ ಆರ್ಥಿಕ ಅವ್ಯವಹಾರಗಳ ವಿಭಾಗದ ಪೊಲೀಸರು ಚೆನ್ನೈನಲ್ಲಿ ಬಂಧಿಸಿದರು.
ದೆಹಲಿಗೆ ವಿಚಾರಣೆಗಾಗಿ ಕರೆತರಲು ಚೆನ್ನೈ ಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ ಎಂದು ಆರ್ಥಿಕ ಅಪರಾಧ ದಳದ ಜಂಟಿ ಆಯುಕ್ತ ಅರುಣ್ ಕಂಪಾನಿ ತಿಳಿಸಿದ್ದಾರೆ.
2013 ರಲ್ಲಿ ಒಮ್ಮೆ ಬಂಧನವಾಗಿದ್ದ ಶ್ರೀನಿವಾಸನ್ ನಂತರ ಜಾಮೀನಿನ ಮೇಲೆ ಹೊರಬಂದು, ಸಿನಿಮಾರಂಗದಲ್ಲಿ ಮತ್ತೊಮ್ಮೆ ತೊಡಗಿಕೊಂಡಿದ್ದರು.
ಕಮಿಷನ್ ದಂಧೆಯಲ್ಲಿ ಶ್ರೀನಿವಾಸನ್
1000 ಕೋಟಿ ರು ಲೋನ್ ಕೊಡಿಸುವುದಾಗಿ ದೆಹಲಿಯ ಉದ್ಯಮಿ ದಿಲೀಪ್ ಪಟಾನಿ ಎಂಬುವವರಿಂದ 10 ಕೋಟಿ ರು ಕಮಿಷನ್ ಪಡೆದುಕೊಂಡ ಶ್ರೀನಿವಾಸನ್ ನಾಪತ್ತೆಯಾಗಿದ್ದರು. ಈತನ ಬಗ್ಗೆ ತನಿಖೆ ನೆಡೆಸಿದ ದೆಹಲಿ ಪೊಲೀಸರಿಗೆ 2010ರ ವಂಚನೆ ಪ್ರಕರಣ, 2013ರಲ್ಲಿ ಬಂಧನ ಹಾಗೂ 2015ರಲ್ಲಿ ಘೋಷಿತ ಅಪರಾಧಿ ಪಟ್ಟ ಸಿಕ್ಕಿರುವುದು ತಿಳಿದು ಬಂದಿದೆ. ಚೆನ್ನೈ ಪೊಲೀಸರ ನೆರವಿನಿಂದ ಅನ್ನಾ ನಗರದಲ್ಲಿ ಶ್ರೀನಿವಾಸನ್ ಬಂಧಿಸಿ, ಬಾಡಿ ವಾರೆಂಟ್ ಮೇಲೆ ದೆಹಲಿಗೆ ಕರೆದೊಯ್ದಿದ್ದಾರೆ.
ತಿಹಾರ್ ಜೈಲು ಸೇರಿದ್ದ ಶ್ರೀನಿವಾಸನ್
2013ರಲ್ಲಿ ಬಂಧನಗೊಂಡು ತಿಹಾರ್ ಜೈಲು ಸೇರಿದ್ದ ಶ್ರೀನಿವಾಸನ್ ಅವರನ್ನು ಮತ್ತೊಮ್ಮೆ ತಿಹಾರ್ ಜೈಲಿನತ್ತ ದೆಹಲಿ ಪೊಲೀಸರು ಕರೆದೊಯ್ದಿದ್ದಾರೆ. ಈ ಹಿಂದೆ ಹಣ ಹಿಂತಿರುಗಿಸುವುದಾಗಿ ಕೋರ್ಟ್ ಮುಂದೆ ಹೇಳಿ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರು. ಆದರೆ, ಯಾರಿಗೂ ಯಾವುದೇ ಮೊತ್ತ ವಾಪಸ್ ಮಾಡಿಲ್ಲ.
ಪವರ್ ಸ್ಟಾರ್ ಶ್ರೀನಿವಾಸನ್
ವೃತ್ತಿಯಿಂದ ಆಕ್ಯುಪಂಕ್ಚರ್ ಡಾಕ್ಟರ್ ಆಗಿರುವ ಶ್ರೀನಿವಾಸನ್ ಅವರು ಸುಮಾರು 12 ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಗೋಲಿಸೋಡಾ, ತಲೈವಾನ್ ಸೇರಿದಂತೆ ಸ್ಟಾರ್ ನಟರಾದ ಆರ್ಯ, ಸೂರ್ಯ ನಟಿಸಿದ ಚಿತ್ರಗಳಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಕೆಲ ಚಿತ್ರಗಳಿಗೆ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದು, ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಶ್ರೀನಿವಾಸನ್ ಮೇಲೆ ವಿವಿಧ ಕೇಸ್
ದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ವಿವಿಧೆಡೆ 8 ವಂಚನೆ ಪ್ರಕರಣಗಳು ದಾಖಲಾಗಿದ್ದು, ತನಿಖೆ ಹಂತದಲ್ಲಿವೆ. ಬೆಂಗಳೂರಿನ ಉದ್ಯಮಿಗಳಾದ ಮಸ್ರೂರ್ ಆಲಂ ಹಾಗೂ ಸಜ್ಜಾದ್ ವಹಾದ್ ಸೋದರರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಬೆಂಗಳೂರಿನ ಪೊಲೀಸರಿಗೂ ಬೇಕಾಗಿದ್ದಾರೆ. 30 ಕೋಟಿ ರು ಲೋನ್ ಕೋಡಿಸುವುದಾಗಿ ನಂಬಿಸಿ 90 ಲಕ್ಷ ರು ಕಮಿಶನ್ ಪಡೆದುಕೊಂಡು ಶ್ರೀನಿವಾಸನ್ ವಂಚಿಸಿದ ಆರೋಪ ಹೊತ್ತಿದ್ದಾರೆ.