ಗೋ ಹತ್ಯೆ ನಿಷೇಧ: ಕೇರಳ ಸರ್ಕಾರದ ನಿಲುವು ಸಮರ್ಥಿಸಿದ ಸಿಎಂ ಸಿದ್ದರಾಮಯ್ಯ
ಗೋ ಹತ್ಯೆ ನಿಷೇಧ ಕಾಯ್ದೆ ಕುರಿತಂತೆ ಕೇರಳ ಸರ್ಕಾರ ತೆಗೆದುಕೊಂಡಿರುವ ನಿಲುವನ್ನು ಸಮರ್ಥಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ನವದೆಹಲಿ, ಮೇ 29: ಗೋ ಹತ್ಯೆ ನಿಷೇಧ ಕಾಯ್ದೆ ಕುರಿತಂತೆ ಕೇರಳ ಸರ್ಕಾರ ತೆಗೆದುಕೊಂಡಿರುವ ನಿಲುವನ್ನು ಸಮರ್ಥಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರ ವಿವಾದಿತ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಸಿದ್ಧ ಎಂದು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಘೋಷಿಸಿದೆ.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಕಾಯ್ದೆಯು ರಾಜ್ಯದಲ್ಲಿ ಈಗಾಗಲೆ ಜಾರಿಯಲ್ಲಿದೆ. ಈಗ ಕೇಂದ್ರ ಸರ್ಕಾರ ಹೊಸದಾಗಿ ಪರಿಷ್ಕರಿಸಿದೆ ಎನ್ನಲಾಗುತ್ತಿರುವ ಗೋಹತ್ಯೆ ನಿಷೇಧ ಕಾಯ್ದೆಯ ಆದೇಶವನ್ನು ಹಾಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಪ್ರಾದೇಶಿಕತೆಯ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ಹಕ್ಕು ಆಯಾ ರಾಜ್ಯಗಳಿಗಿದೆ. ಈ ನಿಟ್ಟಿನಲ್ಲಿ ನಾನು ಕೇರಳ ಸರ್ಕಾರದ ನಿಲುವನ್ನು ಬೆಂಬಲಿಸುತ್ತೇನೆ ಎಂದರು.
ಅಕ್ರಮವಾಗಿ ಪಶುಗಳ(ಹಸು,ಎಮ್ಮೆ, ಒಂಟೆ, ಎತ್ತು, ಇತ್ಯಾದಿ)ಮಾರಾಟವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿದ ನಿಯಮಾವಳಿಗಳ ವಿರುದ್ಧ ಕೇರಳದಲ್ಲಿ ಭಾರಿ ವಿರೋಧ, ಪ್ರತಿಭಟನೆ ವ್ಯಕ್ತವಾಗಿದೆ. ಕೇರಳದಲ್ಲಿನ ನಡು ರಸ್ತೆಯಲ್ಲಿ ನಡೆದ ಎತ್ತು ಕೊಂದು ಮಾಂಸ ತಿಂದ ಘಟನೆಯ ಪರ -ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ.
ಈ ನಡುವೆ ಕೇಂದ್ರ ಸರ್ಕಾರದ ಕಾನೂನು ಹೇರಿಕೆ ವಿರುದ್ಧ ತಿರುಗೇಟು ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು, 'ನಾವು ಏನು ತಿನ್ನಬೇಕು ಎಂಬುದನ್ನು ದೆಹಲಿ(ಬಿಜೆಪಿ) ಹಾಗೂ ನಾಗಪುರ್(ಆರೆಸ್ಸೆಸ್) ನಿಂದ ಕಲಿಯಬೇಕಾಗಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.