2020 ರ ಹೊತ್ತಿಗೂ ಗಂಗೆಗಿಲ್ಲವೇ ಸ್ವಚ್ಛತೆಯ ಭಾಗ್ಯ?!
ನವದೆಹಲಿ, ಆಗಸ್ಟ್ 11: ಹಿಂದುಗಳ ಪಾಲಿನ ಪವಿತ್ರ ನದಿ ಗಂಗೆಯನ್ನು ಮಾಲಿನ್ಯ ಮುಕ್ತಗೊಳಿಸುವುದಕ್ಕಾಗಿ ಭಾರತ ಸರ್ಕಾರವೇನೋ ಹಲವು ಯೋಜನೆಗಳನ್ನು ಕೈಗೊಂಡಿದೆ. ಆದರೂ ಗಂಗಾ ಶುದ್ಧೀಕರಣದ ಕೆಲಸ ಅಂದುಕೊಂಡಷ್ಟು ತ್ವರಿತವಾಗಿ ಸಾಗುತ್ತಿಲ್ಲ ಎಂದು ಸಂಸದೀಯ ಸಮಿತಿಯೊಂದು ದೂರಿದೆ.
ಹುಷಾರ್ ಗಂಗಾ ನದಿಯಲ್ಲಿ ತೊಟ್ಟು ಕಸ ಹಾಕಿದ್ರೆ ಬೀಳುತ್ತೆ ಭಾರೀ ದಂಡ!
ಗಂಗಾಶುದ್ಧೀಕರಣಕ್ಕಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಗಂಗೆಗೆ ಶುದ್ಧಿಯ ಭಾಗ್ಯ ಸಿಗುವುದು ಸುಲಭವಿಲ್ಲ! 2020 ರ ಹೊತ್ತಿಗೆ ಗಂಗೆಯನ್ನು ಸಂಪೂರ್ಣ ಶುದ್ಧಿಗೊಳಿಸುವುದಾಗ ಸರ್ಕಾರ ತಾನೇ ಹಾಕಿಕೊಂಡಿರುವ ಗುರಿಯನ್ನು ನಿಗದಿತ ಅವಧಿಯೊಳಗೆ ತಲುಪುವುದು ಸಾಧ್ಯವಿಲ್ಲದ ಮಾತು ಎಂದು ಸಮಿತಿ ಹೇಳಿದೆ.
ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಾಲಿನ್ಯಕ್ಕೊಳಗಾಗಿರುವ ಗಂಗೆಯನ್ನು 2020 ರೊಳಗೆ ಸ್ವಚ್ಛಗೊಳಿಸುವುದಕ್ಕಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಸ್ಥಾಯಿ ಸಮಿತಿಯು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಮತ್ತು ನದಿ ಅಭಿವೃದ್ಧಿ ಮತ್ತು ಶುದ್ಧೀಕರಣ ವಿಭಾಗವನ್ನು ಕೇಳಿತ್ತು.
ಹರಿದ್ವಾರ, ವಾರಾಣಸಿ, ಮಥುರಾಗಳಲ್ಲಿ ಈಗಾಗಲೇ ಶುದ್ಧೀಕರಣ ಭರದಿಂದ ಆಗುತ್ತಿದ್ದು, ಗಂಗಾ ಶುದ್ಧೀಕರಣಕ್ಕೆ ಕೆಲವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ(PPP)ದ ಕೆಲವು ಸಂಸ್ಥೆಗಳು ಮುಂದೆ ಬರಬೇಕಿದೆ ಸ್ಥಾಯಿ ಸಮಿತಿ ಅಪೇಕ್ಷಿಸಿದೆ.
2020 ಡಿಸೆಂಬರ್ ಹೊತ್ತಿಗೆ ಗಂಗೆಯನ್ನು ಸಂಪೂರ್ಣ ಶುದ್ಧಗೊಳಿಸಿ, ಮಾಲಿನ್ಯ ಮುಕ್ತಗೊಳಿಸುವ ಗುರಿಯನ್ನು ತಲುಪಬೇಕಾದರೆ ಶುದ್ಧೀಕರಣದ ಕೆಲಸ ಮತ್ತಷ್ಟು ತ್ವರಿತವಾಗಿ ಸಾಗಬೇಕಿದೆ ಎಂದು ಸಂಸದೀಯ ಸಮಿತಿ ಅಭಿಪ್ರಾಯಪಟ್ಟಿದೆ.