ಡಿ. 25ರಂದು ವಾಜಪೇಯಿಗೆ ಭಾರತ ರತ್ನ ಘೋಷಣೆ..?
ನವದೆಹಲಿ, ಡಿ. 18: ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅವರ ಜನ್ಮದಿನವಾದ ಡಿಸೆಂಬರ್ 25ರಂದು ಘೋಷಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಈ ಕುರಿತು ಸರ್ಕಾರದ ಮೂಲಗಳು ಸ್ಪಷ್ಟ ಮಾಹಿತಿ ನೀಡಿವೆ. ಹೀಗಾದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ರತ್ನ ಪಡೆಯಲಿರುವ ಪ್ರಥಮ ಕಾಂಗ್ರೆಸ್ಯೇತರ ಮಾಜಿ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. [ವಾಜಪೇಯಿ ಸೇರಿ ನಾಲ್ವರಿಗೆ ಭಾರತ ರತ್ನ]
ಮದನ ಮೋಹನ ಮಾಳವೀಯ ಅವರ ಜನ್ಮದಿನವೂ ಡಿಸೆಂಬರ್ 25ರಂದೇ ಇರುವ ಕಾರಣ ಅವರಿಗೂ ಭಾರತ ರತ್ನ ನೀಡಲು ಬಿಜೆಪಿ ನಾಯಕತ್ವ ಹಾಗೂ ನರೇಂದ್ರ ಮೋದಿ ಸರ್ಕಾರ ಒಲವು ಹೊಂದಿದೆ ಎನ್ನಲಾಗಿದೆ. ಆದರೆ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಿಂದಿನ ಗಣರಾಜ್ಯೋತ್ಸವಕ್ಕಿಂತ ಮೊದಲು ಮೃತಪಟ್ಟವರಿಗೆ ಭಾರತ ರತ್ನ ನೀಡುವುದು ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರದ ಯತ್ನಕ್ಕೆ ಹಿನ್ನಡೆಯಾಗಿದೆ. [ವಾಜಪೇಯಿಗೆ ಹುಟ್ಟುಹಬ್ಬದ ಗಿಫ್ಟ್]
ಆದರೆ, ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾಗಿದ್ದರೂ ತಮ್ಮನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಕರೆದುಕೊಂಡ, ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಕರಾದ ಮದನ ಮೋಹನ ಮಾಳವೀಯ ಮೇಲೆ ಬಿಜೆಪಿ ಸರ್ಕಾರ ಅತಿಯಾದ ಒಲವು ಹೊಂದಿದೆ. ಆದ್ದರಿಂದ ಮಾಳವೀಯ ಅವರಿಗೆ ಭಾರತ ರತ್ನ ನೀಡುವುದಕ್ಕಾಗಿ ಕಾನೂನಿಗೆ ತಿದ್ದುಪಡಿ ತರುವ ಯೋಚನೆಯೂ ಕೇಂದ್ರ ಸರ್ಕಾರಕ್ಕಿದೆ. [ಕ್ರಿಸ್ ಮಸ್ ರಜೆಗೆ ಕುತ್ತಿಲ್ಲ, ಪ್ರಬಂಧ ಸ್ಪರ್ಧೆ ಕಡ್ಡಾಯವಲ್ಲ]