ದೇಶಾದ್ಯಂತ ಊಬರ್ ಸೇವೆ ನಿಷೇಧಿಸಿ ಕೇಂದ್ರ ಆದೇಶ
ನವದೆಹಲಿ, ಡಿ. 11: ಊಬರ್ ಕ್ಯಾಬ್ ಡ್ರೈವರ್ ನಡೆಸಿದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿಯಂತೆ ದೇಶದೆಲ್ಲೆಡೆ ಊಬರ್ ಕ್ಯಾಬ್ ಸೇವೆ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರವೂ ಈ ಆದೇಶಕ್ಕೆ ಕೈಜೋಡಿಸಿದ್ದು, ರಾಜ್ಯದಲ್ಲಿ ನಿಷೇಧ ಜಾರಿಗೆ ತರುವುದಾಗಿ ತಿಳಿಸಿದೆ.
ಟ್ಯಾಕ್ಸಿ ಚಾಲಕರಿಂದ ನಡೆಯಬಹುದಾದ ಅತ್ಯಾಚಾರ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಅನಧಿಕೃತ ಕ್ಯಾಬ್ ಸೇವೆಗಳನ್ನು ನಿಷೇಧಿಸಿದೆ. ಅಲ್ಲದೆ, ಕ್ಯಾಬ್ ಸೇವೆದಾರರಿಗೆ ಇನ್ನಷ್ಟು ಬಿಗಿ ನಿಯಮಗಳನ್ನು ವಿಧಿಸಲಾಗಿದೆ. [ಊಬರ್ ಕಂಪನಿಯೇ ಹೊಣೆ]
ಮಹಾರಾಷ್ಟ್ರ ಸರ್ಕಾರ ವೆಬ್ ಆಧಾರಿತ ಎಲ್ಲ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿದೆ. ಹೈದರಾಬಾದ್ನಲ್ಲಿ ಕೂಡ ಊಬರ್ ಟ್ಯಾಕ್ಸಿ ಸೇವೆ ಪ್ರತಿಬಂಧಿಸಿ ತೆಲಂಗಾಣ ಸರ್ಕಾರ ಮಂಗಳವಾರ ಆದೇಶ ಹೊರಡಿಸಿತ್ತು. ಚಂಡೀಗಡ ಹಾಗೂ ಉತ್ತರ ಪ್ರದೇಶದಲ್ಲಿಯೂ ಊಬರ್ಗೆ ನಿಷೇಧ ಹೇರಲಾಗಿತ್ತು.
ಇನ್ಸ್ಟಾವಾಣಿ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಅತ್ಯಾಚಾರ ನಡೆಯಲು ಊಬರ್ ಕಂಪನಿಯ ಟ್ಯಾಕ್ಸಿ ಚಾಲಕನೇ ಹೊಣೆ ಎಂದು ಶೇ. 76ರಷ್ಟು ಜನರು ಆರೋಪಿಸಿದ್ದರು. [ಟ್ಯಾಕ್ಸಿ ಚಾಲಕರಿಗೆ ಸೂಚನೆಗಳು]
ಕಂಪನಿ ತಪ್ಪೊಪ್ಪಿಗೆ: ಅತ್ಯಾಚಾರ ಪ್ರಕರಣದಲ್ಲಿ ತನಿಖೆ ನಡೆಸಿದಾಗ ಊಬರ್ ಕಂಪನಿಯು ಟ್ಯಾಕ್ಸಿ ಚಾಲಕರ ನೇಮಕದ ಸಂದರ್ಭದಲ್ಲಿ ಪೂರ್ವಾಪರಗಳನ್ನು ವಿಚಾರಿಸುತ್ತಿರಲಿಲ್ಲ ಎಂಬುದು ಬೆಳಕಿಗೆ ಬಂದಿತ್ತು. ಇದನ್ನು ಟ್ಯಾಕ್ಸಿ ಕಂಪನಿ ಕೂಡ ಒಪ್ಪಿಕೊಂಡು ಕ್ಷಮೆ ಯಾಚಿಸಿತ್ತು. [ಊಬರ್ ಟ್ಯಾಕ್ಸಿ ಚಾಲಕನ ಬಂಧನ]
ಪರ-ವಿರೋಧ: ಓರ್ವ ಚಾಲಕ ಮಾಡಿದ ತಪ್ಪಿಗೆ ಇಡೀ ಟ್ಯಾಕ್ಸಿ ಸೇವೆಯನ್ನೇ ನಿಷೇಧಿಸುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಸಚಿವ ನಿತಿನ್ ಗಡ್ಕರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ಯಾಕ್ಸಿ ಸೇವೆಯನ್ನೇ ನಿಷೇಧಿಸುವ ಕ್ರಮವನ್ನು ಅನೇಕರು ಖಂಡಿಸಿದ್ದಾರೆ. ಆದರೆ ಎನ್ಡಿಎ ಸರ್ಕಾರದ ಕ್ರಮವನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.