ಸಿಬಿಐ ಕೋರ್ಟ್ ತೀರ್ಪು ರಾಜಕೀಯ ಪ್ರಭಾವಕ್ಕೆ ಸಾಕ್ಷಿ: ಕಾಂಗ್ರೆಸ್
ನವದೆಹಲಿ, ಅಕ್ಟೋಬರ್ 27: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕೋರ್ಟ್ ನಿಂದ ದೋಷಮುಕ್ತರಾಗಿರುವುದು 'ದಿಗ್ಭ್ರಮೆ' ಮೂಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ಝಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ನಮಗೆ ಅಚ್ಚರಿ, ದಿಗ್ಭ್ರಮೆ ಎಲ್ಲವೂ ಆಗಿದೆ. ಅಂಥ ಗಂಭೀರ ಆರೋಪಗಳು, ಅದಕ್ಕೆ ಪೂರಕವಾದ ರಾಶಿ ರಾಶಿ ಸಾಕ್ಷ್ಯಾಧಾರಗಳು ಒದಗಿಸಿದ್ದರೂ ಹೀಗಾಗಿದೆ. ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಸಿಬಿಐ ಮೋದಿ ಸರಕಾರದ ಅಡಿಯಲ್ಲಿ ಕನ್ವೀನಿಯೆಂಟ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಆದರೆ, ಎನ್ ಐಎ ನಮೋ ಇನ್ವೆಸ್ಟಿಗೇಷನ್ ಏಜೆನ್ಸಿ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.[ರೆಡ್ಡಿ ಡೈಲಾಗ್ ರಿಪೀಟ್, 'ಸತ್ಯಮೇವ ಜಯತೆ' ಎಂದ ಯಡಿಯೂರಪ್ಪ]
ತನ್ನದೇ ಜವಾಬ್ದಾರಿಯಾದ ತನಿಖೆ ನಡೆಸಿ, ಸಾಕ್ಷ್ಯಾಧಾರ ಒದಗಿಸುವ ಕೆಲಸದಲ್ಲಿ ಸಿಬಿಐ ಸಂಪೂರ್ಣ ವಿಫಲವಾಗುತ್ತಿದೆ. ರಾಜಕೀಯ ಪ್ರಭಾವ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದು ನಿದರ್ಶನ. ಯಡಿಯೂರಪ್ಪ ಅವರ ನಿಜವಾದ ಪರೀಕ್ಷೆ ಜನರ ಕೋರ್ಟ್ ನಲ್ಲಿ ಆಗುತ್ತದೆ. ಚುನಾವಣೆಯಲ್ಲಿ ಇದೇ ವಿಚಾರ ಪ್ರಾಮುಖ್ಯ ಪಡೆಯುತ್ತದೆ ಎಂದಿದ್ದಾರೆ.
ಯಡಿಯೂರಪ್ಪ ಅವರ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಆರೋಪಿಗಳ ಪರವಾಗಿದೆ. ಭ್ರಷ್ಟಾಚಾರವನ್ನು ಇಷ್ಟು ಬಹಿರಂಗವಾಗಿ ಮುಚ್ಚಿಹಾಕಿದ ಪ್ರಕರಣ ಇದ್ದರೆ ಅದು ಯಡಿಯೂರಪ್ಪನವರದೇ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಆರೋಪಿಸಿದ್ದಾರೆ. ಇನ್ನು ಕೋರ್ಟ್ ನಿರ್ಧಾರಕ್ಕೆ ಬಿಜೆಪಿ ಸಂತಸ ವ್ಯಕ್ತಪಡಿಸಿದೆ.[ಕಿಕ್ ಬ್ಯಾಕ್ ಕೇಸ್, ಯಡಿಯೂರಪ್ಪ ಹಾಗೂ ಫ್ಯಾಮಿಲಿ ನಿರಾಳ]
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ, ಎಲ್ಲ ಆರೋಪಗಳಿಂದ ಯಡಿಯೂರಪ್ಪ ಮುಕ್ತರಾಗಿರುವುದು ಸಂತೋಷವಾಗಿದೆ. ಅವರು ಮುಂಚೆಯೇ ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಹೇಳಿದ್ದರು. ಅದು ನಿಜವಾಗಿದೆ ಎಂದಿದ್ದಾರೆ.