ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠದಲ್ಲಿ ಕಾವೇರಿ ವಿಚಾರಣೆ
ನವದೆಹಲಿ, ಅಕ್ಟೋಬರ್ 18: ಕಾವೇರಿ ತಾಂತ್ರಿಕ ಸಮಿತಿ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಒಂದು ದಿನದ ನಂತರ ಈ ವಿಚಾರಣೆಯನ್ನು ಹೊಸ ಪೀಠ ಕೈಗೆತ್ತಿಕೊಳ್ಳಲಿದೆ. ಮೂರು ನ್ಯಾಯಮೂರ್ತಿಗಳನ್ನು ಒಳಗೊಂಡ ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತವ ರಾಯ್ ಮತ್ತು ಎ.ಎಮ್.ಖನ್ವಿಲ್ಕರ್ ಇದ್ದಾರೆ.
ಮೂರು ನ್ಯಾಯಮೂರ್ತಿಗಳ ಪೀಠದಲ್ಲಿ ವಿಚಾರಣೆ ನಡೆಯಬೇಕು ಎಂದು ಕರ್ನಾಟಕ ಹಾಗೂ ತಮಿಳುನಾಡಿನ ವಕೀಲರು ಮನವಿ ಮಾಡಿದ್ದರು. ಕಾವೇರಿ ವಿಚಾರವಾಗಿ ಇರುವ ಎಲ್ಲ ವಿವಾದಗಳ ವಿಚಾರಣೆಯನ್ನು ಈ ಪೀಠ ನಡೆಸಲಿದೆ. ಉನ್ನತ ತಾಂತ್ರಿಕ ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಗಣಿಸಲಿದೆ. ಜತೆಗೆ ಕಾವೇರಿ ಜಲ ನ್ಯಾಯಾಧೀಕರಣ ಅಂತಿಮ ತೀರ್ಪಿನ ವಿರುದ್ಧ ಸಲ್ಲಿಸಿರುವ ವಿಶೇಷ ಮೇಲ್ಮನವಿಯ ವಿಚಾರಣೆಯನ್ನೂ ನಡೆಸಲಿದೆ.[ಸುಪ್ರೀಂಕೋರ್ಟಿಗೆ ಸಲ್ಲಿಕೆಯಾದ ತಜ್ಞರ ವರದಿಯಲ್ಲಿ ಏನಿದೆ?]
ಅಕ್ಟೋಬರ್ 4ರಂದು ವಿಚಾರಣೆ ನಡೆಸಿದ್ದ ದೀಪಕ್ ಮಿಶ್ರಾ ಹಾಗೂ ಯು.ಯು.ಲಲಿತ್ ಒಳಗೊಂಡ ಪೀಠವು ವಿಶೇಷ ಮೇಲ್ಮನವಿಯ ವಿಚಾರಣೆಯನ್ನು ತ್ರಿಸದಸ್ಯ ಪೀಠವು ನಡೆಸಲಿದೆ ಎಂದು ತಿಳಿಸಿತ್ತು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಕೂಡ ಈ ಪೀಠವು ತೀರ್ಮಾನ ಕೈಗೊಳ್ಳಲಿದೆ ಎಂದು ಕರ್ನಾಟಕದ ವಕೀಲರು ತಿಳಿಸಿದ್ದರು.
ಅಟಾರ್ನಿ ಜನರಲ್ ಸಹ, ಕಾವೇರಿ ನಿರ್ವಹಣಾ ಮಂಡಳಿ ರಚನೆ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಫಿಡವಿಟ್ ಸಲ್ಲಿಸಿ, ಇಂಥ ವಿಚಾರಗಳು ಶಾಸಕಾಂಗದ ವ್ಯಾಪ್ತಿಗೆ ಬರುವುದರಿಂದ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು ಎಂದಿದ್ದರು. ಕರ್ನಾಟಕವೂ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.[ಕಾವೇರಿಗಾಗಿ ಪ್ರತಿಭಟನೆ 600 ಹೆಚ್ಚು ಮಂದಿ ಬಂಧನ]
ಸೋಮವಾರ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ ಉನ್ನತ ಮಟ್ಟದ ತಾಂತ್ರಿಕ ಸಮಿತಿ ವಿವರಿಸಿದ ಪ್ರಮುಖ ಅಂಶಗಳು ಹೀಗಿವೆ.
* ಸಮಿತಿಯ ವರದಿಯಂತೆ ಕಾವೇರಿ ಕೊಳ್ಳದ ವ್ಯಾಪ್ತಿಗೆ ಬರುವ 48 ತಾಲೂಕುಗಳ ಪೈಕಿ 42 ತಾಲೂಕುಗಳು ಬರಪೀಡಿತವಾಗಿವೆ.
* ತಮಿಳುನಾಡು ಹಾಗೂ ಕರ್ನಾಟಕದ ಕಬ್ಬು ಬೆಳೆಗಾರರಿಗೆ ನೀರು ಪೂರೈಕೆಯಾಗಿಲ್ಲ.
* ಕರ್ನಾಟಕದ ಮಂಡ್ಯ ಜಿಲ್ಲೆ ಅತ್ಯಂತ ಹಾನಿಗೊಳಗಾಗಿದೆ ಹಾಗೂ ಆನೇಕ ರೈತರ ಆತ್ಮಹತ್ಯೆಗೆ ಕಾರಣವಾಗಿದೆ.
* ಅಕ್ಟೋಬರ್ 13, 2016ರಂತೆ ಕರ್ನಾಟಕದ ಅಣೆಕಟ್ಟುಗಳ ಸಂಗ್ರಹ 22.90 ಟಿಎಂಸಿ ಅಡಿಯಾದರೆ, ಮೆಟ್ಟೂರು ಜಲಾಶಯದ ಸಂಗ್ರಹ 31.66 ಟಿಎಂಸಿ ಅಡಿಯಷ್ಟಿದೆ.
* ಬರ ಪರಿಸ್ಥಿತಿಯಿಂದ ಕಾವೇರಿ ನದಿಪಾತ್ರದ ಜನರಲ್ಲಿ ನಿರುದ್ಯೋಗ ಸಮಸ್ಯೆ ಕೂಡಾ ಕಾಡುತ್ತಿದೆ.
* ಅನಾವೃಷ್ಟಿ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳನ್ನು ಸರ್ಕಾರಗಳು ಕೂಡಲೇ ಪಾಲಿಸಬೇಕಿದೆ.
* ಉಭಯ ರಾಜ್ಯಗಳು ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದ್ದು, ಈ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.