ಖಾತೆ ಹಂಚಿಕೆಯಲ್ಲಿ ಭಾರೀ ಬದಲಾವಣೆ, ಸ್ಮೃತಿಗೆ ಶಾಕ್!
ನವದೆಹಲಿ, ಜುಲೈ 05 : ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಆ ಮಹತ್ವದ ಖಾತೆಯನ್ನು ಕಳೆದುಕೊಂಡಿದ್ದಾರೆ.
ಮಂಗಳವಾರ 19 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡ ಬಳಿಕ, ಖಾತೆ ಹಂಚಿಕೆಯಲ್ಲಿಯೂ ಭಾರೀ ಬದಲಾವಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ಮೃತಿ ಇರಾನಿ ಅವರ ಖಾತೆಯನ್ನು ಹೊಸದಾಗಿ ಸಂಪುಟ ಸೇರಿಕೊಂಡಿರುವ ಪ್ರಕಾಶ್ ಜಾವ್ಡೇಕರ್ ಅವರಿಗೆ ವಹಿಸಿದ್ದಾರೆ. [ಮೋದಿ ಸಂಪುಟ ಸೇರಿದ 19 ಸಚಿವರ ಸಂಕ್ಷಿಪ್ತ ಪರಿಚಯ]
ಸ್ಮೃತಿ ಇರಾನಿಯವರು ಮಾತ್ರವಲ್ಲ ಕನ್ನಡಿಗ ಡಿವಿ ಸದಾನಂದ ಗೌಡ ಅವರು ಸೇರಿದಂತೆ ಹಲವಾರು ಸಚಿವರ ಖಾತೆಗಳು ಅದಲು ಬದಲು ಮಾಡಲಾಗಿದೆ. ಸ್ಮೃತಿ ಇರಾನಿ ಅವರಿಗೆ ಜವಳಿ ಖಾತೆ ದೊರೆತಿದ್ದರೆ, ಸದಾನಂದ ಗೌಡ ಅವರು ಕಾನೂನು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅವರಿಗೆ ಅಷ್ಟೇನೂ ಮಹತ್ವವಲ್ಲದ ಸಾಂಖ್ಯಿಕ ಮತ್ತು ಯೋಜನೆ ಖಾತೆ ದೊರೆತಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರಿಗೆ ಸಂಸದೀಯ ವ್ಯವಹಾರ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಹಾಗೆಯೆ, ರವಿ ಶಂಕರ್ ಪ್ರಸಾದ್ ಅವರು ನಿರ್ವಹಿಸುತ್ತಿದ್ದ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ವೆಂಕಯ್ಯ ಅವರಿಗೆ ವಹಿಸಲಾಗಿದೆ.
ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಅನುಪ್ರಿಯಾ ಪಟೇಲ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಎಂಜೆ ಅಕ್ಬರ್ ಅವರಿಗೆ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಜವಾಬ್ದಾರಿಯನ್ನು ವಹಿಸಲಾಗಿದೆ.