ಬಿಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಅತೃಪ್ತರಿಂದ ದೂರು
ನವದೆಹಲಿ, ಜುಲೈ 03: ಕರ್ನಾಟಕ ಬಿಜೆಪಿ ಬಿಕ್ಕಟ್ಟು ಈಗ ಅಧಿಕೃತವಾಗಿ ದೆಹಲಿ ತಲುಪಿದೆ. ಕೆಎಸ್ ಈಶ್ವರಪ್ಪ ಅವರ ನೇತೃತ್ವದ ಅತೃಪ್ತ ಬಿಜೆಪಿ ನಾಯಕರ ದಂಡು ಈಗ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ದೂರಿನ ಪ್ರತಿಯನ್ನು ತೆಗೆದುಕೊಂಡು ಬಿಜೆಪಿ ಹೈಕಮಾಂಡ್ ನಾಯಕರ ಮನೆಗಳಿಗೆ ತೆರಳಲು ಭಾನುವಾರ ಬೆಳಗ್ಗೆ ಆರಂಭಿಸಿದ್ದಾರೆ. ಮೊದಲಿಗೆ ರಾಮ್ ಲಾಲ್ ಮನೆಗೆ ಪತ್ರ ನೀಡಲಾಗಿದೆ. ಮುಂದಿನ ಬದಲಾವಣೆ ತಿಳಿಸುತ್ತೇವೆ. ಅಪ್ಡೇಡ್ ಗಾಗಿ ಈ ಪುಟ ನೋಡುತ್ತಿರಿ
ದೆಹಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಅವರ ನಿವಾಸಕ್ಕೆ ಕರ್ನಾಟಕ ಬಿಜೆಪಿ ನಾಯಕರ ತಂಡ ಭಾನುವಾರ ಬೆಳಗ್ಗೆ ಭೇಟಿ ನೀಡಿದೆ.
ಅತೃಪ್ತರ ತಂಡದಲ್ಲಿ ಕೆಎಸ್ ಈಶ್ವರಪ್ಪ ಅವರಲ್ಲದೆ, ಸಿಟಿ ರವಿ, ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನಾ, ಪ್ರಹ್ಲಾದ್ ಜೋಶಿ, ಶಿವಯೋಗಿ ಸ್ವಾಮಿ ಮುಂತಾದವರಿದ್ದಾರೆ. ಹೀಗಾಗಿ, ಬಿಜೆಪಿ ಭಿನ್ನಮತದ ಚಟುವಟಿಕೆಯಲ್ಲಿ ಕೆ.ಎಸ್.ಈಶ್ವರಪ್ಪ ಏಕಾಂಗಿಯಾಗಿದ್ದಾರೆ ಎಂಬ ಮಾತು ಹುರಳಿಲ್ಲದ್ದಂತಾಗಿದೆ.
ಮುಂದೇನು?: ಈಶ್ವರಪ್ಪ ನೇತೃತ್ವದ ತಂಡ ಈಗ ಬಿಜೆಪಿಯ ಹಿರಿಯ ನಾಯಕರ ಮನೆಗಳ ಬಾಗಿಲು ಬಡಿಯುವುದರ ಜೊತೆಗೆ ಆರೆಸ್ಸೆಸ್ ನಾಯಕರ ಜೊತೆ ಬೈಠಕ್ ಕೂಡಾ ನಡೆಸಲಿದ್ದಾರೆ. ಪರಿಸ್ಥಿತಿ ಕೈ ಮೀರುವುದಕ್ಕೂ ಮುನ್ನ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಧ್ಯ ಪ್ರವೇಶ ಮಾಡಿ ಅತೃಪ್ತರನ್ನು ಸಮಾಧಾನ ಮಾಡಬೇಕಿದೆ. [ಶೋಭಾ ಕರಂದ್ಲಾಜೆ ನೋಡಿದ್ರೆ ಸಿಟಿ ರವಿ ಸಿಟ್ಟಾಗ್ತಾರೆ ಏಕೆ?]
ಇತ್ತ ಕರ್ನಾಟಕದಲ್ಲಿ ಭಿನ್ನಮತೀಯ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಶಿಸ್ತು ಪಾಲನಾ ಸಮಿತಿ ರಚಿಸಿದೆ. ಶಶಿಕಲಾ ಜೊಲ್ಲೆ, ಪಿಸಿ ಮೋಹನ್ ಮುಂತಾದವರು ಶಿಸ್ತು ಸಮಿತಿಯಲ್ಲಿದ್ದಾರೆ.