ಭಾರೀ ಹಣದೊಂದಿಗೆ ಪರಾರಿಯಾಗಿದ್ದ ಠಕ್ಕ ಶುಕ್ಲಾ ಸಿಕ್ಕ
ನವದೆಹಲಿ, ನ 27: ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಪ್ರದೀಪ್ ಶುಕ್ಲಾ (35) ನನ್ನು ಶುಕ್ರವಾರ (ನ 27) ದೆಹಲಿಯ ಓಕಾಲದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಸಂಜೆ ದೆಹಲಿಯ ಗೋವಿಂದಪುರಿಯಲ್ಲಿ 22.5 ಕೋಟಿ ರೂಪಾಯಿ ಹಣದೊಂದಿಗೆ ಶುಕ್ಲಾ ಪರಾರಿಯಾಗಿದ್ದ.
ಘಟನೆಯ ಬಗ್ಗೆ: ಎಟಿಎಂಗೆ ಹಣ ತುಂಬಿಸುವ ಗುತ್ತಿಗೆ ವಹಿಸಿಕೊಳ್ಳುವ ಕಂಪೆನಿಗಳ ಪೂರ್ವಾಪರ ಪರಿಶೀಲಿಸುವಂತೆ ಪೊಲೀಸ್ ಇಲಾಖೆ ಮಾಡುವ ಮನವಿಗೆ ಬ್ಯಾಂಕುಗಳು ಸೂಕ್ತವಾಗಿ ಸ್ಪಂದಿಸದೇ ಇರುವುದಕ್ಕೆ ಇದು ಮತ್ತೊಂದು ಜ್ವಲಂತ ಸಾಕ್ಷಿ.
ರಾಜಧಾನಿ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಎಟಿಎಂಗೆ ಹಣ ತುಂಬಿಸುವ ವ್ಯಾನ್ ಚಾಲಕ ಸುಮಾರು 22.5 ಕೋಟಿ ರೂಪಾಯಿ ಹಣದೊಂದಿಗೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ದೇಶದ ಮಂಚೂಣಿಯಲ್ಲಿರುವ ಖಾಸಗಿ ಎಕ್ಸಿಸ್ ಬ್ಯಾಂಕಿಗೆ ಸಂಬಂಧಿಸಿದ ಕಾಂಚಾಣ ಇದಾಗಿದ್ದು, ದಕ್ಷಿಣ ದೆಹಲಿಯ ಗೋವಿಂದಪುರಿಯಲ್ಲಿ ಈ ಘಟನೆ ವರದಿಯಾಗಿದೆ. ರಾಜಧಾನಿ ದೆಹಲಿಯಲ್ಲಿ ನಡೆದ ಭಾರೀ ಮೊತ್ತದ ಬ್ಯಾಂಕ್ ಹಣ ದರೋಡೆ ಇದಾಗಿದೆ. (ಈ ಊರಲ್ಲಿ ಇರೋರೆಲ್ಲಾ ಖತರ್ನಾಕ್ ಕಳ್ಳರು)
ಗುರುವಾರ (ನ 26) ಸಂಜೆ, ವ್ಯಾನಿನಲ್ಲಿದ್ದ ಭದ್ರತಾ ಸಿಬ್ಬಂದಿ ಬ್ಯಾಂಕಿನ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಚಾಲಕನನ್ನು ಪ್ರದೀಪ್ ಶುಕ್ಲಾ ಎಂದು ಗುರುತಿಸಲಾಗಿದ್ದು, ವಾಹನದ ಸಂಖ್ಯೆ DL-1LK- 9189.
ಶಸ್ತಸಜ್ಜಿತ ಭದ್ರತಾ ಸಿಬ್ಬಂದಿಯ (ವಿನಯ್ ಪಟೇಲ್) ಹೇಳಿಕೆ ಪ್ರಕಾರ, ಗೋವಿಂದಪುರಿಯ ಮೆಟ್ರೋ ಸ್ಟೇಷನ್ ಬಳಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದೆ. ನಾನು ವ್ಯಾನಿನಿಂದ ಇಳಿದ ನಂತರ ಗಾಡಿ ಟರ್ನ್ ಮಾಡಿ ನಿಲ್ಲಿಸುತ್ತೇನೆಂದು ವ್ಯಾನ್ ಚಾಲಕ ಹೇಳಿದ.
ನಾನು ಗಾಡಿಯಿಂದ ಇಳಿದ ತಕ್ಷಣ ಟರ್ನ್ ತೆಗೆದುಕೊಂಡು ಪರಾರಿಯಾಗಿದ್ದಾನೆ, ಎಲ್ಲಿ ನೋಡಿದರೂ ವ್ಯಾನಿನ ಸುಳಿವಿಲ್ಲ ಎಂದು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಬ್ಯಾಂಕ್ ಅಧಿಕಾರಿಗಳಿಗೆ ಸಂಶಯಾಸ್ಪದ ಹೇಳಿಕೆ ನೀಡಿದ್ದಾನೆ.
ವಿಕಾಸಪುರಿ ಶಾಖೆಯಿಂದ ನಾಲ್ಕು ಎಟಿಎಂ ವ್ಯಾನಿನಲ್ಲಿ 38 ಕೋಟಿ ರೂಪಾಯಿ ಹಣ ತುಂಬಿಸಿ ಕಳುಹಿಸಿದ್ದೆವು. ಅದರಲ್ಲಿ ಡಿಎಲ್-1ಎಲ್ಕೆ-9189 ವಾಹನದಲ್ಲಿ 22.5 ಕೋಟಿ ರೂಪಾಯಿ ತುಂಬಿಸಲಾಗಿತ್ತು ಎಂದು ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವಿಮೆ ಮಾಡಿಸಲಾಗಿರುವುದರಿಂದ ಹಣ, ಗ್ರಾಹಕರು ಮತ್ತು ಬ್ಯಾಂಕಿಗೆ ಇದರಿಂದ ತೊಂದರೆಯಿಲ್ಲ ಎನ್ನುವ ಹೇಳಿಕೆಯನ್ನು ಬ್ಯಾಂಕ್ ಅಧಿಕಾರಿಗಳು ನೀಡಿದ್ದಾರೆ.