ದೆಹಲಿಯಲ್ಲಿ ಬಿಜೆಪಿಗೆ ಹಿನ್ನಡೆ: ಅಖಾಡಕ್ಕಿಳಿದ ಟ್ರಬಲ್ ಶೂಟರ್
ಕೆಲವು ದಿನಗಳ ಹಿಂದೆ ಮಾಧ್ಯಮಗಳು ನಡೆಸಿದ ಚುನಾವಣಾಪೂರ್ವ ಸಮೀಕ್ಷೆಗಳು, ಬಿಜೆಪಿ ನಾಯಕರಿಗೆ ದೆಹಲಿಯ ಕೊರೆಯುವ ಚಳಿಯಲ್ಲೂ ಬಿಸಿ ಮುಟ್ಟಿಸಿದೆ. ನರೇಂದ್ರ ಮೋದಿ ವರ್ಚಸ್ಸು, ಚಾಣಾಕ್ಷ ಅಮಿತ್ ಶಾ ನಡೆಗಳು, ಕಿರಣ್ ಬೇಡಿಯನ್ನು ಸಿಎಂ ಎಂದು ಘೋಷಿಸಿದರೂ ಬಿಜೆಪಿಗೆ ಹಿನ್ನಡೆಯಾಗುತ್ತಿರುವ ಸಮೀಕ್ಷಾ ವರದಿಗಳು ಬಿಜೆಪಿಯನ್ನು ಚಿಂತೆಗೀಡುಮಾಡಿದೆ.
ಸಮೀಕ್ಷಾ ವರದಿಗಳು ಹೊರಬೀಳುತ್ತಿದ್ದಂತೇ ಎಚ್ಚೆತ್ತುಕೊಂಡಿರುವ ಬಿಜೆಪಿ, ಪಕ್ಷದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ನೇರವಾಗಿ ದೆಹಲಿಯ ಚುನಾವಣೆಯ ಜವಾಬ್ದಾರಿಯ ಅಖಾಡಕ್ಕಿಳಿಯಲು ಸೂಚಿಸಿದೆ. (ಎಲ್ಲಾ ಪಕ್ಷಕ್ಕಿಂತ ಆಪ್ ವಿಭಿನ್ನ)
ಬುಧವಾರ (ಜ 28) ತಡರಾತ್ರಿ ನಡೆದ ಪಕ್ಷದ ಸಭೆಯ ನಂತರ ಅರುಣ್ ಜೇಟ್ಲಿ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಾಗೆಯೇ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಫ್ರೀಹ್ಯಾಂಡ್ ನೀಡಿದ್ದಾರೆಂದು ವರದಿಯಾಗಿದೆ. ಇದಲ್ಲದೇ, ದೆಹಲಿ ಘಟಕದ ಪಕ್ಷದೊಳಗಿನ ಆಂತರಿಕ ಬೇಗುದಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಲು ಪಕ್ಷ ಜೇಟ್ಲಿಗೆ ಸೂಚಿಸಿದೆ.
ಕುಂದುತ್ತಿರುವ ಕಾರ್ಯಕರ್ತರ ಉತ್ಸಾಹವನ್ನು ಮತ್ತೆ ಸರಿದಾರಿಗೆ ತರಲು ಜೇಟ್ಲಿ ಕಾರ್ಯತಂತ್ರ ರೂಪಿಸಲಿದ್ದಾರೆ. ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ RSS ಕಾರ್ಯಕರ್ತರಿಗೂ ಬಿಜೆಪಿ ಮನವಿ ಮಾಡಿದೆ. ದೆಹಲಿಯಲ್ಲಿ ಶತಾಯುಗತಾಯು ಗೆಲ್ಲಲೇ ಬೇಕೆಂದು ಪಣತೊಟ್ಟಿರುವ ಬಿಜೆಪಿಗೆ, ಆಮ್ ಆದ್ಮಿ ಪಕ್ಷದ ಪ್ರಚಾರ, ದಿನದಿಂದ ದಿನಕ್ಕೆ ಏರುತ್ತಿರುವ ಅರವಿಂದ್ ಕೇಜ್ರಿವಾಲ್ ಜನಪ್ರಿಯತೆ ದುಸ್ವಪ್ನವಾಗಿ ಪರಿಣಮಿಸುತ್ತಿದೆ.
ಲೋಕಸಭಾ ಚುನಾವಣೆಯ ನಂತರ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕರುಗಳನ್ನು ಪ್ರಚಾರಕ್ಕೆ ನೆಚ್ಚಿಕೊಳ್ಳದ ಮೋದಿ - ಅಮಿತ್ ಶಾ ಜೋಡಿ, ಈಗ ಮತ್ತೆ ಹಿರಿಯ ನಾಯಕರಿಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿರುವುದು, ಮೋದಿ ಜನಪ್ರಿಯತೆ ಇಳಿಮುಖವಾಗುತ್ತಿರುವುದಕ್ಕೆ ಸಾಕ್ಷಿ. (ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ)
ರಾಮ್ ಲೀಲಾ ಮೈದಾನದಲ್ಲಿ ನಡೆದ ಮೋದಿ ಪ್ರಚಾರ ಸಭೆಯಲ್ಲಿ ಒಂದು ಲಕ್ಷ ಜನ ಸೇರುವ ಬದಲು ನಲವತ್ತು ಸಾವಿರ ಜನ ಮಾತ್ರ ಸೇರಿದ್ದು ಇದಕ್ಕೆ ಕೊಡಬಹುದಾದ ಇನ್ನೊಂದು ಉದಾಹರಣೆ. ಫೆಬ್ರವರಿ ಏಳರಂದು ದೆಹಲಿಯ ಎಲ್ಲಾ 70 ಕ್ಷೇತ್ರಗಳಿಗೆ ಏಕಕಾಲದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ ಹತ್ತರಂದು ಮತಎಣಿಕೆ ನಡೆಯಲಿದೆ.
ಜೇಟ್ಲಿ/ಅಮಿತ್ ಶಾ ಜೋಡಿ ದೆಹಲಿಯಲ್ಲಿ ಪಕ್ಷಕ್ಕೆ ಜಯತಂದು ಕೊಡಲು, ಯಾವ ಕಾರ್ಯತಂತ್ರ ರೂಪಿಸಲಿದ್ದಾರೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಜೇಟ್ಲಿ ಕಾರ್ಯತಂತ್ರ
ಚುನಾವಣಾ ಕಾರ್ಯತಂತ್ರ ರೂಪಿಸಲು ಮತ್ತು ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಪ್ರಚಾರ ಸಭೆಗಳನ್ನು ವ್ಯವಸ್ಥಿತಿತವಾಗಿ ಆಯೋಜಿಸಲು ಅರುಣ್ ಜೇಟ್ಲಿ ದಿನಾ ಮೂರು ಗಂಟೆ ಮೀಸಲಿಡಲು ನಿರ್ಧರಿಸಿದ್ದಾರೆಂದು ಎಕಾನಮಿಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಆಮ್ ಆದ್ಮಿ ಮತಬ್ಯಾಂಕ್
ಯುವ ಸಮುದಾಯ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಆಮ್ ಆದ್ಮಿ ಪಕ್ಷದ ಮೇಲೆ ತಮ್ಮ ಒಲವನ್ನು ಮುಂದುವರಿಸುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಆಮ್ ಆದ್ಮಿ ಪಕ್ಷ ಪ್ರಮುಖವಾಗಿ ನಂಬಿರುವ ಯುವ ಸಮುದಾಯದ ಮತ ಬ್ಯಾಂಕಿನ ಮೇಲೆ ಲಗ್ಗೆ ಇಡಲು ಜೇಟ್ಲಿ ಕಾರ್ಯತಂತ್ರ ರೂಪಿಸಲಿದ್ದಾರೆ.
ಸ್ಥಳೀಯ ಮುಖಂಡರು ವಿಶ್ವಾಸಕ್ಕೆ
ಟಿಕೆಟ್ ಹಂಚಿಕೆ ವಿಚಾರದಲ್ಲಿ ಮತ್ತು ಕಿರಣ್ ಬೇಡಿಯವರನ್ನು ಸಿಎಂ ಹುದ್ದೆ ಅಭ್ಯರ್ಥಿ ಎಂದು ಘೋಷಿಸಿದ ನಂತರ ಉಂಟಾದ ಭಿನ್ನಮತದ ಹಿನ್ನಲೆಯಲ್ಲಿ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಅಲ್ಲದೇ, ದೆಹಲಿಯ ಸ್ಥಳೀಯ ಬಿಜೆಪಿ ಮುಖಂಡರಿಗೆ ನೇರವಾಗಿ ವರದಿ ಒಪ್ಪಿಸುವಂತೆ ಅಮಿತ್ ಶಾ ಸೂಚಿಸಿದ್ದಾರೆ.
ಅಲ್ಪಸಂಖ್ಯಾತರ ಮತಬ್ಯಾಂಕ್
ಎಬಿಪಿ ನೀಲ್ಸನ್ ಸಮೀಕ್ಷೆ ಪ್ರಕಾರ ಬಿಜೆಪಿ, ಆಮ್ ಆದ್ಮಿ ಪಕ್ಷಕ್ಕಿಂತ ಶೇ.9ರಷ್ಟು ಹಿನ್ನಡೆ ಅನುಭವಿಸುತ್ತಿದೆ ಎನ್ನುವ ವರದಿಯ ನಂತರ ಪ್ರಮುಖವಾಗಿ ಅಲ್ಪಸಂಖ್ಯಾತರ ಮತಬ್ಯಾಂಕ್ ನತ್ತ ನಿಗಾ ವಹಿಸಲು ಪಕ್ಷದ ಮುಖಂಡ ಶಹನಾಜ್ ಹುಸೇನ್ ಅವರಿಗೆ ಜೇಟ್ಲಿ/ಅಮಿತ್ ಶಾ ಸೂಚಿಸಿದ್ದಾರೆ.
ಸುಷ್ಮಾ ಸ್ವರಾಜ್ ಕೂಡಾ ಪ್ರಚಾರಕ್ಕೆ
ಇತರ ರಾಜ್ಯಗಳಲ್ಲಿ ಜಯಭೇರಿ ಬಾರಿಸಿದಂತೆ ದೆಹಲಿಯಲ್ಲೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸ ಪಕ್ಷಕ್ಕೆ ಮುಳುವಾಗುತ್ತಿದೆ. ಹೀಗಾಗಿ ಅರುಣ್ ಜೇಟ್ಲಿ ನೇತೃತ್ವದಲ್ಲಿ ಹದಿನಾಲ್ಕು ಸಚಿವರಿಗೆ ಪ್ರಚಾರದ ಜವಾಬ್ದಾರಿಯನ್ನು ಅಮಿತ್ ಶಾ ನೀಡಿದ್ದಾರೆ. ಸುಷ್ಮಾ ಸ್ವರಾಜ್ ಸೇರಿದಂತೆ ಮೋದಿ ಸಂಪುಟದ ಹದಿನಾಲ್ಕು ಸಚಿವರನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಪಕ್ಷ ಸೂಚಿಸಿದೆ.
ಅನಂತ್ ಕುಮಾರ್ ಹೇಳಿದ್ದು
120 ಬಿಜೆಪಿ ಎಂಪಿಗಳು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. 250 ಚುನಾವಣಾ ಪ್ರಚಾರಸಭೆ ನಡೆಯಲಿದ್ದು, ಪ್ರತೀ ಕ್ಷೇತ್ರಕ್ಕೂ ಸಾವಿರಕ್ಕೂ ಹೆಚ್ಚು ಬ್ಯಾನರುಗಳನ್ನು ಮುದ್ರಿಸಲಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.