ಉ.ಪ್ರ ಹಾದಿಯಲ್ಲಿ ದೆಹಲಿ ಹೆಜ್ಜೆ, ರಜಾ ರದ್ದು ಮಾಡ್ತೀವಿ ಎಂದ ಮನೀಶ್ ಸಿಸೋಡಿಯಾ
ಮಹಾಪುರುಷರ ಜಯಂತಿ ಹಾಗೂ ಪುಣ್ಯಸ್ಮರಣೆಗೆ ಶೈಕ್ಷಣಿಕ ಸಂಸ್ಥೆಗಳಿಗೆ ರಜಾ ರದ್ದುಪಡಿಸಿದ ಉತ್ತರಪ್ರದೇಶ ಸರಕಾರದ ನಿರ್ಧಾರವನ್ನು ಈಗ ದೆಹಲಿ ಸರಕಾರ ಅನುಸರಿಸಲು ನಿರ್ಧರಿಸಿದೆ. ಈ ಬಗ್ಗೆ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಹೇಳಿಕೆ ನೀಡಿದ್ದಾರೆ
ನವದೆಹಲಿ, ಏಪ್ರಿಲ್ 28: ದೆಹಲಿ ಸರಕಾರವೂ ಇದೀಗ ಉತ್ತರಪ್ರದೇಶವನ್ನು ಅನುಕರಿಸುವ ಸೂಚನೆ ನೀಡಿದೆ. ಗಣ್ಯರ ಜನ್ಮದಿನ ಹಾಗೂ ಪುಣ್ಯಸ್ಮರಣೆಗೆ ಸಾರ್ವಜನಿಕ ರಜಾ ರದ್ದುಗೊಳಿಸಲು ತೀರ್ಮಾನಿಸಿದೆ. ಈ ಬಗ್ಗೆ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶುಕ್ರವಾರ ಮಾತನಾಡಿದ್ದಾರೆ.
दिल्ली सरकार भी महापुरुषों के जन्म अथवा निर्वाण दिवस पर होने वाली छुट्टियां रदद् करेगी। इस बारे में मैंने मुख्य सचिव को निर्देश दिए हैं।1/3
— Manish Sisodia (@msisodia) 28 April 2017
ಗಣ್ಯರ ಜನ್ಮದಿನ ಹಾಗೂ ಪುಣ್ಯಸ್ಮರಣೆಗೆ ಇರುವ ಸಾರ್ವಜನಿಕ ರಜಾವನ್ನು ದೆಹಲಿ ಸರಕಾರವು ರದ್ದುಪಡಿಸಲಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆಗೆದುಕೊಂಡು ರಜಾ ರದ್ದು ನಿರ್ಧಾರದ ಬಗ್ಗೆ ಸಿಸೋಡಿಯಾ ಮೆಚ್ಚುಗೆ ಸೂಚಿಸಿದ್ದಾರೆ.[ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್]
"ಉತ್ತರಪ್ರದೇಶ ಸರಕಾರ ಈ ವಿಚಾರದಲ್ಲಿ ಉತ್ತಮ ಕ್ರಮಕ್ಕೆ ಮುಂದಾಗಿದೆ. ಬೇರೆ ರಾಜ್ಯಗಳಿಂದ ಉತ್ತಮ ವಿಚಾರಗಲನ್ನು ತೆಗೆದುಕೊಳ್ಳುವುದಕ್ಕೆ ನಾವು ಸದಾ ಸಿದ್ಧ" ಎಂದು ಅವರು ಹೇಳಿದ್ದಾರೆ. ಏಪ್ರಿಲ್ 25ರಂದು ಉತ್ತರಪ್ರದೇಶ ಸಂಪುಟವು ಶೈಕ್ಷಣಿಕ ಸಂಸ್ಥೆಗಳ ಹದಿನೈದು ಸಾರ್ವಜನಿಕ ರಜಾವನ್ನು ರದ್ದುಗೊಳಿಸಿತು. ಈ ದಿನಗಳಲ್ಲಿ ಆ ಮಹನೀಯರ ಬಗ್ಗೆ ವಿಚಾರಗಳನ್ನು ಶಾಲೆ-ಕಾಲೇಜಿಗಳಲ್ಲಿ ತಿಳಿಸಿ ಎಂದು ತಿಳಿಸಿತು.