ದೆಹಲಿಯಲ್ಲಿ ಜಂಗ್, ಆಮ್ ಅದ್ಮಿ ಸರಕಾರದ ನಡುವೆ 'ಡೆಂಗ್ಯು' ರಾಜಕೀಯ
ನವದೆಹಲಿ, ಸೆ 18: ಮಾನವೀಯ ಮೌಲ್ಯಕ್ಕೆ ಬೆಲೆಯೇ ಇಲ್ಲದ ರಾಜಕೀಯ ವಿದ್ಯಮಾನಗಳು ನಮ್ಮ ದೇಶದಲ್ಲಿ ನಡೆಯುವುದು ಹೊಸದೇನಲ್ಲ. ಇಂತಹ ಕೀಳುಮಟ್ಟದ 'ರಾಜಕೀಯ' ಪ್ರಹಸನಕ್ಕೆ ದೆಹಲಿಯ ರಾಜಕಾರಣ ಸಾಕ್ಷಿಯಾಗಿರುವುದು ದುರಂತ.
ಡೆಂಗ್ಯು, ಚಿಕನ್ ಗುನ್ಯಾ ಕಾಯಿಲೆ ದೆಹಲಿಯಲ್ಲಿ ವ್ಯಾಪಕವಾಗಿ ಆವರಿಸಿರುವ ಈ ಹೊತ್ತಿನಲ್ಲಿ, ದೆಹಲಿಯ ಲೆ. ಗ. ನಜೀಬ್ ಜಂಗ್ ಮತ್ತು ಆಮ್ ಆದ್ಮಿ ಸರಕಾರದ ನಡುವೆ ನಡೆಯುತ್ತಿರುವ ರಾಜಕೀಯ ನಾಟಕಗಳಿಂದ ದೆಹಲಿಯ ಜನತೆ ತತ್ತರಿಸುವಂತಾಗಿದೆ. (ಕೇಜ್ರಿವಾಲ್ ಇದಕ್ಕೂ ಮೋದಿಯನ್ನು ದೂಷಿಸಬಹುದಾ)
ವಿದೇಶ ಪ್ರವಾಸದಲ್ಲಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಸ್ ಸಿಸೋಡಿಯಾರವರನ್ನು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ನಜೀಬ್ ಫ್ಯಾಕ್ಸ್ ಸಂದೇಶ ಕಳುಹಿಸಿರುವುದು ದೆಹಲಿ ಸರಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಮತ್ತೊಂದು ಸುತ್ತಿನ ಸಮರಕ್ಕೆ ನಾಂದಿ ಹಾಡಿದೆ.
ಡೆಂಗ್ಯು ಸಮಸ್ಯೆ ರಾಜಧಾನಿಯಲ್ಲಿ ತೀವ್ರವಾಗಿದ್ದರೂ, ಕೇಜ್ರಿವಾಲ್ ಆದಿಯಾಗಿ ದೆಹಲಿ ಸರಕಾರದ ಪ್ರಮುಖ ಸಚಿವರು ರಾಜಧಾನಿಯಿಂದ ಹೊರಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಕೇಜ್ರಿವಾಲ್ ಸರಕಾರ ಮತ್ತು ನಜೀಬ್ ಜಂಗ್ ನಡುವೆ ಮನಸ್ತಾಪ ಇಂದು ನಿನ್ನೆಯದಲ್ಲ. ಲೆ. ಗವರ್ನರ್ ವಿರುದ್ದವೇ ನ್ಯಾಯಾಲಾಯದ ಕಟೆಕಟೆ ಹತ್ತಿದ್ದ ಕೇಜ್ರಿವಾಲ್ ಸರಕಾರಕ್ಕೆ ಕೋರ್ಟ್ ಮಂಗಳಾರತಿ ಮಾಡಿ ಕಳುಹಿಸಿತ್ತು. ''ಡೆಂಗ್ಯು' ರಾಜಕೀಯದ ಪ್ರಮುಖಾಂಶ ಸ್ಲೈಡಿನಲ್ಲಿ..
ವಿದೇಶ ಪ್ರವಾಸದಲ್ಲಿರುವ ಸಿಸೋಡಿಯಾ
ಡೆಂಗ್ಯು, ಚಿಕನ್ ಗುನ್ಯಾ ಕಾಯಿಲೆ ವ್ಯಾಪಕವಾಗಿ ಹಬ್ಬಿರುವ ನಡುವೆ, ಸಿಸೋಡಿಯಾ ಫಿನ್ಲೆಂಡ್ ಪ್ರವಾಸದಲ್ಲಿದ್ದಾರೆ. ವಿದೇಶ ಪ್ರವಾಸದಿಂದ ತಕ್ಷಣವೇ ವಾಪಸ್ ಬರುವಂತೆ ನಜೀಬ್ ಜಂಗ್ ಶುಕ್ರವಾರ (ಸೆ 16) ದೂರವಾಣಿ ಮೂಲಕ ತಿಳಿಸಿದ್ದರು, ಇದಾದ ನಂತರ ಫ್ಯಾಕ್ಸ್ ಮೂಲಕ ಆದೇಶ ನೀಡಿದ್ದರು.
ನಜೀಬ್ ಭೇಟಿಗೆ ಸಚಿವರಿಗೆ ಅವಕಾಶ ಸಿಗಲಿಲ್ಲ
ಈ ಬೆಳವಣಿಗೆಯ ನಡುವೆ ಶನಿವಾರ (ಸೆ 17) ಇಬ್ಬರು ಸಚಿವರು ನಜೀಬ್ ಜಂಗ್ ಕಚೇರಿಗೆ ಭೇಟಿಗೆ ತೆರಳಿದ್ದರು. ಆದರೆ ಜಂಗ್ ಕಚೇರಿಯಲ್ಲಿ ಇರದಿದ್ದ ಹಿನ್ನಲೆಯಲ್ಲಿ ಸಚಿವರಿಬ್ಬರು ವಾಪಸ್ ಆಗಿದ್ದಾರೆ.
ಶನಿವಾರ ಜಂಗ್ ಕೆಲಸ ಮಾಡುವುದಿಲ್ಲ
ಶನಿವಾರ ನಜೀಬ್ ಜಂಗ್ ಕೆಲಸ ಮಾಡುವ ಮೂಡ್ ನಲ್ಲಿ ಇಲ್ಲ. ನಮ್ಮ ಭೇಟಿಗೆ ಅವಕಾಶ ನೀಡಲಿಲ್ಲ. ಶನಿವಾರ ಕಚೇರಿ ಕೆಲಸ ಮಾಡುವುದಿಲ್ಲ ಎನ್ನುವ ಉತ್ತರ ನಮಗೆ ಬಂದಿದೆ. ಇದು ಲೆ. ಗವರ್ನರ್ ಕಚೇರಿ ಇಂತಹ ಸಮಯದಲ್ಲಿ ಕೆಲಸ ಮಾಡುವ ಪರಿ ಇದು ಎಂದು ಆಮ್ ಆದ್ಮಿ ಸರಕಾರದ ಸಚಿವರಿಬ್ಬರು ಆರೋಪಿಸಿದ್ದಾರೆ.
ಲೆ. ಗವರ್ನರ್ ಕಚೇರಿ ಹೇಳಿಕೆ
ನಮ್ಮ ಕಚೇರಿ ವಾರದ ಏಳು ದಿನವೂ ಕೆಲಸ ಮಾಡುತ್ತದೆ. ಸಚಿವರಿಬ್ಬರು ಪೂರ್ವಾನುಮತಿಯಿಲ್ಲದೇ ಕಚೇರಿಗೆ ಬಂದಿದ್ದಾರೆ. ನಗರ ಡೆಂಗ್ಯು ನಿಂದ ತತ್ತರಿಸುತ್ತಿರುವಾಗ ಆಮ್ ಆದ್ಮಿ ಸರಕಾರ ಕ್ಷುಲ್ಲಕ ಕಾರಣಕ್ಕಾಗಿ ರಾಜಕೀಯ ಮಾಡುತ್ತಿದೆ ಎಂದು ಲೆ. ಗವರ್ನರ್ ಕಚೇರಿ ಹೇಳಿಕೆ ನೀಡಿದೆ.
ಕಾಂಗ್ರೆಸ್ ಆರೋಪ
ಒಂದು ಪೆನ್ನು ತೆಗೆದುಕೊಳ್ಳಲೂ ಜಂಗ್ ಅನುಮತಿ ಪಡೆಯಬೇಕು ಎಂದು ಹೇಳುವ ಕೇಜ್ರಿವಾಲ್, ಪಕ್ಷದಿಂದ ಜಾಹೀರಾತಿಗಾಗಿ 854 ಕೋಟಿ ರೂಪಾಯಿ ಖರ್ಚು ಮಾಡಿದೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಜಾಹೀರಾತು ನೀಡಲಾಗಿದೆ. ಕೇಜ್ರಿವಾಲ್ ಸರಕಾರದ ವಿರುದ್ದ ಸಿಬಿಐ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್ ಕಿಡಿಕಾರಿದ್ದಾರೆ.
|
ದೆಹಲಿಗೆ ವಾಪಸ್ ಹೊರಟ ಸಿಸೋಡಿಯಾ
ದೆಹಲಿಗೆ ಫಿನ್ಲೆಂಡ್ ನಿಂದ ವಾಪಸ್ ಆಗುತ್ತಿದ್ದೇನೆಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.