ಸೋನು ನಿಗಂಗೆ ಲಕ್ಷ..ಲಕ್ಷ: ಯಾಕ್ ಸ್ವಾಮಿ ದುಂದುವೆಚ್ಚ
ಕಳೆದ ಬಾರಿ ದಸರಾವನ್ನು ವೈಭವದಿಂದ ಸರಕಾರ ಆಚರಿಸಲಿಲ್ಲ. ಬರದ ಕಾರಣದಿಂದಾಗಿ ಯುವ ದಸರಾ ಕೈಬಿಡಲಾಗಿತ್ತು. ಆದರೆ ಈ ಬಾರಿ ಸಿದ್ದು ಸರಕಾರ ನಾಡಹಬ್ಬವನ್ನು ತನ್ನದೇ ಆದ ಸ್ಟೈಲಿನಲ್ಲಿ ಅಚರಿಸಲು ಠೊಂಕ ಕಟ್ಟಿ ನಿಂತಿದೆ/ಸಜ್ಜಾಗಿದೆ.
ಈ ಬಾರಿಯ ಯುವ ದಸರಾವನ್ನು ವಿಭಿನ್ನವಾಗಿ ಎನ್ನುವುದಕ್ಕಿಂತ lavish ಆಗಿ ಆಚರಿಸಲು ಯುವಜನ ಇಲಾಖೆ ದೂರದ ಮುಂಬೈನಿಂದ ದುಬಾರಿ ಗಾಯಕರನ್ನು ಕರೆಸಿ ಜನರಿಗೆ ಮನೋರಂಜನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸೋನು ನಿಗಮ್, ಸುನಿಧಿ ಚೌಹಾಣ್, ಶಾನ್, ಬೇಬಿ ಅಂಜನಾ ಅವರ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಆರು ದಿನಗಳ ಈ ಯುವ ದಸರಾ ಉತ್ಸವದಲ್ಲಿ ನಡೆಯಲಿದೆ. ಅಕ್ಟೋಬರ್ ಏಳರಂದು ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಸೋನು ನಿಗಂ ಅವರ ಎರಡು ತಾಸಿನ ಕಾರ್ಯಕ್ರಮಕ್ಕೆ ಇಲಾಖೆ ನೀಡುತ್ತಿರುವ ನಮ್ಮ ತೆರಿಗೆಯ ದುಡ್ಡು ಎಷ್ಟು ಗೊತ್ತೇ? ಬರೋಬ್ಬರಿ 28 ಲಕ್ಷ. ಅದೂ ಚೌಕಾಸಿ ಮಾಡಿ ಅಂತಿಮವಾಗಿರುವ ಹಣದ ಮೊತ್ತ. ಅವರು ಮೂವತ್ತು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರಂತೆ.
ಅತ್ಯಂತ ನೋವಿನ ಮತ್ತು ದುರಂತದ ವಿಚಾರವೆಂದರೆ ಕಲೆಯನ್ನೇ ನಂಬಿ ಬದುಕುತ್ತಿರುವ ನಮ್ಮ ರಾಜ್ಯದ ಜಾನಪದ ಕಲಾ ಕುಟುಂಗಳು ಸಂಭಾವನೆ ವಿಚಾರದಲ್ಲಿ ದಸರಾ ಬಹಿಷ್ಕಕರಿಸಲು ನಿರ್ಧರಿಸಿದ್ದು. ಅವರು ಕೇಳುತ್ತಿರುವ ಹೆಚ್ಚಿನ ಸಂಭಾವನೆ ಎಂದರೆ ತಲಾ ರೂಪಾಯಿ 250. ಎಲ್ಲಿಯ 250 ರೂಪಾಯಿ ಎಲ್ಲಿಯ 28 ಲಕ್ಷ.
ಮುಖ್ಯಮಂತ್ರಿಯವರಿಗೆ, ಪ್ರವಾಸೋದ್ಯಮ ಸಚಿವರಿಗೆ, ಯುವಜನ ಇಲಾಖೆಗೆ ಮತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾವು ಕೇಳ ಬಯಸುವ ಕೆಲವೊಂದು ಪ್ರಶ್ನೆಗಳು ಸ್ಲೈಡಿನಲ್ಲಿವೆ.
ಮುಂಬೈ ಗಾಯಕರು ಯಾಕೆ?
ಮುಂಬೈ ಗಾಯಕರನ್ನು ಲಕ್ಷ ಲಕ್ಷ ನೀಡಿ ಕರೆಸುವುದಾದರೂ ಏನಕ್ಕೆ? ಅವರು ಎರಡು ತಾಸಿನಲ್ಲಿ ಹಾಡುವ ನಾಲ್ಕೋ ಐದೋ ಕನ್ನಡ ಹಾಡುಗಳಿಗೆ ಅವರನ್ನು ಅಲ್ಲಿಂದ ಕರೆಸಬೇಕೇ? ಪ್ರೋತ್ಸಾಹದ ಕೊರತೆಯಿಂದ ಮೂಲೆಗುಂಪಾಗಿರುವ ನಮ್ಮ ಕನ್ನಡದ ಗಾಯಕರಿಗೆ ಮಣೆ ಹಾಕಿ, ಅವರ ಪ್ರತಿಭೆಯನ್ನು ಮುಂಬೈಗೂ ಪಸರಿಸಿ. ಹೊರ ರಾಜ್ಯಕ್ಕೂ ನಮ್ಮ ಗಾಯಕರ ಪರಿಚಯವಾಗಲಿ.
ನಮ್ಮ ಕಲಾವಿದರನ್ನು ಮರೆಯಬೇಡಿ
ಡೊಳ್ಳು ಕುಣೀತ, ವೀರಗಾಸೆ, ಯಕ್ಷಗಾನ, ಕೋಲ, ಕೀಲುಕುದುರೆ ಮುಂತಾದವು ನಮ್ಮ ರಾಜ್ಯದ ಹೆಮ್ಮಯ ಜನಪದ ಕಲೆಗಳು. ಎರಡು ಸಾವಿರ ಕಲಾವಿದರು ಭಾಗವಹಿಸುತ್ತಾರೆ. ಆ ಕಲೆಯನ್ನು ಮತ್ತು ಕಲಾವಿದರನ್ನು ಇನ್ನೂ ಹೆಚ್ಚು ಪ್ರೋತ್ಸಾಹಿಸುವ ಕೆಲಸ ನಿಮ್ಮ ಸರಕಾರದಿಂದಾರೂ ನಡೆಯಲಿ. ಅವರಿಗೆ ನೀಡುವ ಸಂಭಾವನೆಗೆ ಚೌಕಾಸಿ ಮಾಡಿ ಇಂತಹ ಬಡ ಕಲಾವಿದರ ಹೊಟ್ಟೆ ಯಾಕೆ ಉರಿಸುತ್ತೀರಾ? ಶ್ರೀಮಂತ ಕಲಾವಿದರಿಗೆ ಇನ್ನಷ್ಟು ದುಡ್ದು ಸುರಿಯುವುದು ಯಾವ ನ್ಯಾಯ?
ದಸರಾ ನಮ್ಮ ನಾಡ ಹಬ್ಬ
ದಸರಾ ನಮ್ಮ ನಾಡ ಹಬ್ಬ. ಅಧಿದೇವತೆ ಚಾಮುಂಡೇಶ್ವರಿಯನ್ನು ಪೂಜಿಸಿ ರಾಜ್ಯವನ್ನು ಕಾಪಾಡು ತಾಯಿ ಎಂದು ಪೂಜಿಸುವ ಹಬ್ಬ. ಇಲ್ಲಿನ ಕಾರ್ಯಕ್ರಮಗಳಿಗೆ ಪ್ರಮುಖವಾಗಿ ಸ್ಥಳೀಯ ಸೊಗಡಿರಲಿ. ಬೇರೆ ರಾಜ್ಯದಿಂದ ಬರುವ ಪ್ರವಾಸಿಗರಿಗೆ, ಇಲ್ಲೇ ಇರುವ ಹೊರ ರಾಜ್ಯದವರಿಗೆ ನಮ್ಮ ಕಲೆ, ಸಂಸ್ಕ್ರುತಿಯ ಪರಿಚಯವಾಗಲಿ. ದಸರಾ ನೋಡಲು ಬರುವ ಪ್ರವಾಸಿಗರು ನಮ್ಮ ಕಲೆಯನ್ನು ಆನಂದಿಸಿ ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನಲಿ..
ಪ್ರವಾಸೋದ್ಯಮ
ಮುಂಬೈ ಗಾಯಕರನ್ನು ಕರೆಸಿ ದಸರಾ ಅಚರಿಸಿದರೆ ಪ್ರವಾಸೋದ್ಯಮ ಇಲಾಖೆಗೆ ಹಣ ಹರಿದುಬರುತ್ತದೆ ಎನ್ನುವುದು ತಪ್ಪಲ್ಲವೇ? ಪ್ರವಾಸಿಗರು ಸೋನು ನಿಗಂ ಗಾನಸುಧೆ ಕೇಳಲು ಬೇರೆ ಊರಿನಿಂದ ಬರುತ್ತಾರೆಯೇ? ಅವರು ಬರುವುದು ದಸರಾ ಮೆರವಣಿಗೆ, ಅರಮನೆ, ವಸ್ತು ಪ್ರದರ್ಶನ ಇತ್ಯಾದಿ ಕಣ್ತುಂಬಿಸಲಲ್ಲವೇ? ಮುಂಬೈ ಕಲಾವಿದರು ಇಲ್ಲದಿದ್ದರೆ ದಸರಾ ಯಶಸ್ವಿಯಾಗುದಿಲ್ಲವೇ?
ಕನ್ನಡತನ ಇರಲಿ
ದಸರಾ ನಮ್ಮ ನಾಡ ಹಬ್ಬ. ನಮ್ಮ ಸಂಸ್ಕ್ರುತಿ, ಪರಂಪರೆಯನ್ನು ದಸರಾ ನೋಡಲು ಬರುವ ಲಕ್ಷಾಂತರ ಪ್ರವಾಸಿಗರಿಗೆ ತಿಳಿಸಲು ಒಳ್ಳೆ ಅವಕಾಶ. ನಮ್ಮ ನಾಡಿನಲ್ಲಿದ್ದು ನಾವು ಬೇರೆ ಭಾಷೆ ಕಲಿಯುವುದರಲ್ಲಿ ನಿಸ್ಸೀಮರಾದರೂ ನಾಡಹಬ್ಬದಲಿ ಕನ್ನಡತನವಿರಲಿ.