ಮೈಸೂರು ಒಡೆಯರ್ ಪಟ್ಟಾಭಿಷೇಕ ಕಾರ್ಯಕ್ರಮ ಪಟ್ಟಿ
ಮೈಸೂರು, ಮೇ 25: ಮೈಸೂರು ಯದುವಂಶದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕ ಕಾರ್ಯಕ್ರಮ ಅರಮನೆಯ ಕಲ್ಯಾಣ ಮಂಟಪದಲ್ಲಿ ಮೇ 27 ಮತ್ತು 28 ಎರಡು ದಿನ ಕಾಲ ನಡೆಯಲಿದೆ ಎಂದು ರಾಣಿ ಪ್ರಮೋದಾದೇವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಅರಮನೆಯ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಜರುಗಲಿದೆ. ಇಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಗಣ್ಯರು ಮತ್ತು ರಾಜ್ಯದ ರಾಜವಂಶದ ಸ್ನೇಹಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.[ಮೇ 26ರಿಂದ ಮೈಸೂರು ಅರಮನೆಗೆ ಪ್ರವೇಶ ನಿರ್ಬಂಧ]
ಸುದ್ದಿಗೋಷ್ಠಿಯ ಆರಂಭದಿಂದಲೂ ರಾಣಿ ಪ್ರಮೋದಾದೇವಿ ಗದ್ಗದಿತರಾಗಿತಯೇ ಮಾತನಾಡಿದರು. ಪಟ್ಟಾಭಿಷೇಕದ ಬಳಿಕ ಯದುವೀರ್ ದೇವಾಲಯಕ್ಕೆ ಭೇಟಿ ನೀಡಿ ಅರಮನೆ ಪ್ರವೇಶ ಮಾಡಲಿದ್ದಾರೆ ಎಂದು ತಿಳಿಸಿದರು.[ಯುವರಾಜ ಯದುವೀರ್ ಪರಿಚಯ]
ಮೇ 27 ದೇವರು ತರುವ ಕಾರ್ಯ, ಗುರು ಪೂಜೆ ನಡೆಯಲಿದೆ. ಮೇ 28 ರಂದು ಪಟ್ಟಾಭಿಷೇಕ ನಡೆಯಲಿದೆ. ಬೆಳಗ್ಗೆ 9.30 ರಿಂದ 10.30 ರ ನಡುವಿನ ಮುಹೂರ್ತದಲ್ಲಿ ಪಟ್ಟಾಭಿಷೇಕ ನಡೆಯಲಿದೆ. ಅಂದು ಸಂಜೆ ಆರು ಗಂಟೆ ನಂತರ ದರ್ಬಾರ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರಮೋದಾದೇವಿ ತಿಳಿಸಿದರು.