ತ್ರಿಷಿಕಾ ಗರ್ಭಿಣಿ ವಿಚಾರ ಸುದ್ದಿ ಮಾಡಿದ್ದಕ್ಕೆ ಯದುವೀರ್ ಅರಸ್ ಕಿಡಿ
ಮೈಸೂರು, ಜೂನ್ 22: ಸಾರ್ವಜನಿಕರು ಹಾಗೂ ನನ್ನ ಕುಟುಂಬದ ಮಧ್ಯೆ ಒಂದು ಗೆರೆ ಇದೆ. ನನ್ನ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ಮೈಸೂರಿನ ರಾಜವಂಶಸ್ಥ ಯದುವೀರ್ ಅರಸ್ ಮಾಧ್ಯಮಗಳ ವಿರುದ್ಧ ಸಿಡಿಮಿಡಿ ಆಗಿದ್ದಾರೆ.
ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಗುರುವಾರ ಭಾಗವಹಿಸಿದ್ದ ಅವರು, ತ್ರಿಷಿಕಾ ಕುಮಾರಿ ಅವರು ಗರ್ಭವತಿ ಆಗಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಮೈಸೂರು ಅರಸರಿಗೆ ಅಲಮೇಲಮ್ಮನ ಶಾಪ ವಿಮೋಚನೆ ಆಗಿದೆಯಾ, ಇಲ್ಲಿದೆ ಉತ್ತರ
ಇನ್ನು ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ರಾಜಕೀಯ ಸೇರುವುದಿಲ್ಲ. ಆ ಬಗ್ಗೆ ಆಸಕ್ತಿ ಇಲ್ಲ. ಸಮಾಜಸೇವೆಯಲ್ಲಿ ತೊಡಗಿರುವುದು ಖುಷಿ ಕೊಟ್ಟಿದೆ. ಮುಂದೆ ಕೂಡ ಸಮಾಜ ಸೇವಾ ಕಾರ್ಯ ಮುಂದುವರಿಸುತ್ತೇನೆ ಎಂದು ಹೇಳಿದರು.
ನಾನೀಗ ಸ್ವಯಂ ಸೇವಾ ಸಂಸ್ಥೆಯ ರಾಯಭಾರಿ ಆಗಿದ್ದೇನೆ. ಆ ಮೂಲಕ ಸರಕಾರಿ ಶಾಲೆಯ ಮಕ್ಕಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಇದರಿಂದ ನನಗೆ ಹೆಚ್ಚು ಸಂತೋಷ ಇದೆ ಎಂದು ಹೇಳಿದರು.
ಯದುವೀರ ಅವರ ಪತ್ನಿ ತ್ರಿಷಿಕಾ ಗರ್ಭ ಧರಿಸಿರುವುದು ಈಗಾಗಲೇ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಸುದ್ದಿ ಪ್ರಕಾರ, ತ್ರಿಷಿಕಾ ಕುಮಾರಿ ಈಗ 4 ತಿಂಗಳ ಗರ್ಭಿಣಿಯಾಗಿದ್ದು, ದಸರೆ ವೇಳೆಗೆ ಮಗು ಜನಿಸುವ ಸಾಧ್ಯತೆ ಇದೆ ಎಂಬುದಾಗಿ ಅರಮನೆ ಮೂಲಗಳನ್ನು ಉಲ್ಲೇಖಿಸಲಾಗಿತ್ತು.
ಅಲಮೇಲಮ್ಮನ ಶಾಪ ವಿಮುಕ್ತಿ, ಮೈಸೂರು ರಾಜ ಮನೆತನದಲ್ಲಿ ಸಂತಾನ ಭಾಗ್ಯ
ಈ ಕಾರಣದಿಂದಾಗಿಯೇ ಈಗ ಯದುವೀರ್, ಮಡದಿ ತ್ರಿಷಿಕಾ ಕುಮಾರಿಗೆ ಸಂಪೂರ್ಣ ವಿಶ್ರಾಂತಿ ನೀಡಲು ಬಯಸಿದ್ದು, ಯಾವುದೇ ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಜತೆಯಲ್ಲಿ ಕರೆದುಕೊಂಡು ಹೋಗುತ್ತಿಲ್ಲ. ಪರಿಣಾಮ ಸಾರ್ವಜನಿಕ ಸ್ಥಳಗಳಲ್ಲಿ ಯದುವೀರ್ ಜತೆ ತ್ರಿಷಿಕಾ ಕಾಣಿಸಿಕೊಳ್ಳುತ್ತಿಲ್ಲ.