ಯದುವೀರರಿಗೆ ಪಟ್ಟಾಭಿಷೇಕ ಹೀಗೆ ನಡೆಯುತ್ತದೆ
ಮೇ 27ರಂದು ಮುಂಜಾವಿನಿಂದಲೇ ಯದುವೀರ ಒಡೆಯರ್ ಅವರ ಪಟ್ಟಾಭಿಷೇಕ ಸಮಾರಂಭದ ಸಾಂಪ್ರದಾಯಿಕ ಆಚರಣೆಗಳು, ವಿಘ್ನೇಶ್ವರನ ಪೂಜೆ ಹಾಗೂ ಸ್ತಂಭ ಮುಹೂರ್ತದೊಂದಿಗೆ ಆರಂಭಗೊಳ್ಳಲಿದೆ. ನಂತರ ಗಂಗೆ ಪೂಜೆ ನೆರವೇರಿಸಿ ರಾಜವಂಶಸ್ಥ ಮಹಿಳೆಯರು ಪೂರ್ಣಕುಂಭದಲ್ಲಿ ಪಟ್ಟಾಭಿಷೇಕ ನಡೆಯಲಿರುವ ಕಲ್ಯಾಣ ಮಂಟಪಕ್ಕೆ ದೇವರನ್ನು ತರಲಿದ್ದಾರೆ.
ಹೀಗೆ ತಂದ ಪೂರ್ಣಕುಂಭಗಳನ್ನು ಯದುವಂಶದ ಮನೆ ದೇವರ ಸ್ಥಳದಲ್ಲಿರಿಸಿ, ಯದುವೀರ ಒಡೆಯರ್ ಅವರಿಗೆ ಅರಿಶಿನ ಹಚ್ಚಿ, ಅಭ್ಯಂಜನ ಸ್ನಾನ ಮಾಡಿಸಿದ ನಂತರ ಕಂಕಣ ಧಾರಣೆ ನಡೆಯುತ್ತದೆ. ಕಂಕಣಧಾರಿಯಾದ ಯದುವೀರ ಒಡೆಯರ್ ಅವರು ಅರಮನೆಯ ರಾಜಗುರುಗಳಾದ ಬ್ರಹ್ಮತಂತ್ರ ಪರಕಾಲ ಮಠದ ಸ್ವಾಮೀಜಿಗಳವರ ಗುರುಪಾದ ಪೂಜೆ ನೆರವೇರಿಸಲಿದ್ದು, ರಾಜ ಪರಂಪರೆಯಂತೆ ಬೆಳಗಿನಿಂದ ರಾತ್ರಿಯವರೆಗೆ ಹೋಮ ಹವನಾದಿಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 28ರಂದು ಪಟ್ಟಾಭಿಷೇಕ ನಡೆಯುವ ದಿನ ಸೂರ್ಯಾಸ್ತಕ್ಕೂ ಮುನ್ನವೇ ರಾಜವಂಶಸ್ಥರು ಯದುವೀರರೊಂದಿಗೆ ಅವರ ಖಾಸಗಿ ನಿವಾಸದಲ್ಲಿರುವ ವಿಘ್ನೇಶ್ವರನಿಗೆ ಪ್ರಥಮ ಪೂಜೆ ನಡೆಸಿ, ನಂತರ ಅರಮನೆ ಆವರಣದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಯದುವಂಶದ ಸಂಪ್ರದಾಯದಂತೆ ಶ್ರೀ ಲಕ್ಷ್ಮೀನಾರಾಯಣ, ಶ್ರೀ ಉಮಾಮಹೇಶ್ವರ, ಶ್ರೀ ವಾಣಿಬ್ರಹ್ಮ ಹಾಗೂ ಶ್ರೀ ರಾಮತಾರಕ ಹೋಮಗಳನ್ನು ನಡೆಸಲಾಗುತ್ತದೆ. [ಮೈಸೂರಿನಲ್ಲಿ ಮರುಕಳಿಸಲಿದೆ ಗತಕಾಲದ ರಾಜವೈಭವ]
ಇದೇ ಸಂದರ್ಭ ದೇವತಾ ಮೂರ್ತಿಗಳಿಗೂ ಅಭಿಷೇಕ ಪೂಜೆಗಳು ನಡೆಯಲಿದ್ದು, ಬೆಳಗ್ಗೆ 9.30ರಿಂದ 10.30ರ ಒಳಗೆ ಸಲ್ಲುವ ಶುಭ ಕರ್ಕಾಟಕ ಲಗ್ನದಲ್ಲಿ ರಾಜಗುರುಗಳು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬೆಳ್ಳಿಯ ಪೀಠದಲ್ಲಿ ಆಸೀನರನ್ನಾಗಿಸಿ, ರಾಜಪರಂಪರೆಯ ಮೈಸೂರು ಪೇಟ ಧರಿಸಿ ಪಟ್ಟಾಧಿಕಾರದ ಮಾಹಿತಿ ಹಾಗೂ ಮಂತ್ರಾಕ್ಷರಗಳನ್ನೊಳಗೊಂಡ ಸ್ವರ್ಣದ ತಗಡಿನ ಬಾಸಿಂಗ ಕಟ್ಟುವ ಮೂಲಕ ಪಟ್ಟಾಧಿಕಾರ ನೆರವೇರಿಸುತ್ತಾರೆ. [ಯದುವಂಶದ ಮಹಾರಾಜರ ಭವ್ಯ ಇತಿಹಾಸ]
ಯದುವಂಶದ ರಾಜಗುರುಗಳಿಂದ ಪಟ್ಟಾಧಿಕಾರ ಸ್ವೀಕರಿಸಿದ ನಂತರ ಮೈಸೂರು ಸಂಸ್ಥಾನದ ಅಧಿಕೃತ ಸಿಂಹಾಸನಾಧಿಪತಿಯಾದ ಯದುವೀರರು ಗುರು ಹಿರಿಯರು, ಮಾತಾಪಿತರು, ಬಂಧು-ಬಾಂಧವರ ಆಶೀರ್ವಾದ ಪಡೆದು ಯದು ಪರಂಪರೆಯಂತೆ ನಾಡಿನ ಹಾಗೂ ರಾಜಮನೆತನದ ಅದಿ ದೇವತೆ ಶ್ರೀ ಚಾಮುಂಡೇಶ್ವರಿ ಸೇರಿದಂತೆ ನಗರದಲ್ಲಿರುವ ಸುಮಾರು 16 ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ರಾತ್ರಿ 7 ಗಂಟೆಯಿಂದ ಸಾರ್ವಜನಿಕರ ವೀಕ್ಷಣೆಗಾಗಿ ಸಾಂಕೇತಿಕವಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದ್ದು, ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತದೆ. ಪಟ್ಟಾಭಿಷೇಕದ ಸಂದರ್ಭ ಗಜರಾಜನಿಗೆ ತೀರ್ಥ ಪ್ರೋಕ್ಷಣೆ ಮಾಡಿ, ಪೂಜೆ ಸಲ್ಲಿಸುವ ಸಂಪ್ರದಾಯವಿರುವುದರಿಂದ ಪಟ್ಟದ ಆನೆಯ ಅವಶ್ಯಕತೆಯಿದ್ದು, ಪಟ್ಟಾಭಿಷೇಕಕ್ಕೆ ಗಂಡಾನೆ ಕೋರಿ ಅರಣ್ಯ ಇಲಾಖೆಗೆ ರಾಣಿ ಪ್ರಮೋದಾದೇವಿ ಅವರು ಮನವಿ ಸಲ್ಲಿಸಿದ್ದಾರೆ. [ಬೆಟ್ಟದ ಕೋಟೆ ಮನೆತನ ರಾಜ ಯದುವೀರ್ ಪರಿಚಯ]