ಮೈಸೂರು: ಕೂಲಿ ಕೇಳಿದ್ದಕ್ಕೆ ಕೊಲೆಗೈದ ದುಷ್ಕರ್ಮಿಗಳು
ತಾನು ದುಡಿದ ಕೆಲಸಕ್ಕೆ ಕೂಲಿ ಕೇಳಿದ್ದಕ್ಕೆ ಕಾರ್ಮಿಕರೊಬ್ಬರನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯಲ್ಲಿ ಟಿ ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಮೈಸೂರು, ಜನವರಿ 25 : ತಾನು ದುಡಿದ ಕೆಲಸಕ್ಕೆ ಕೂಲಿ ಕೇಳಿದ್ದಕ್ಕೆ ಕಾರ್ಮಿಕರೊಬ್ಬರನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯಲ್ಲಿ ಟಿ ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಕೊಲೆಯಾದಾತನನ್ನು ಟಿ.ನರಸೀಪುರ ತಾಲೂಕು ವಾಟಾಳು ಗ್ರಾಮದ ನಿವಾಸಿ ನಿಂಗರಾಜು(32) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಅಭಿಷೇಕ್, ಚೇತನ್ ಹಾಗೂ ಕೊಲೆಯಾದ ನಿಂಗರಾಜು ಸ್ನೇಹಿತರಾದ ನವಿಲೂರಿನ ದೊರೆಸ್ವಾಮಿ ಹಾಗೂ ಕಾಮನಹಳ್ಳಿಯ ಮಹೇಶ್ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಒಂದು ತಿಂಗಳ ಹಿಂದೆ ನಿಂಗರಾಜು, ಅಭಿಷೇಕ್ ಮನೆಗೆ ಕೆಲಸಕ್ಕೆ ತೆರಳಿದ್ದ. ಕೂಲಿ ಮಾಡಿದರೂ ಕೂಲಿ ಹಣ ಕೊಟ್ಟಿರಲಿಲ್ಲ. ತಾನು ದುಡಿದ ಕೂಲಿಯ ಹಣ ಕೇಳಿದ್ದಕ್ಕೆ ಜಗಳ ತೆಗೆದು ನಿಂಗರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆಯಾದ ನಿಂಗರಾಜುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಿಂಗರಾಜು ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಇದೀಗ ನಿಂಗರಾಜು ಪೋಷಕರು ಹಂತಕರ ಮನೆ ಮುಂದೆ ಶವ ಇರಿಸಿ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಕುರಿತು ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.