ರಾಜ್ಯದಲ್ಲಿ ವರ್ಷಕ್ಕೆ ಐದು ಲಕ್ಷ ಲೀ. ವೈನ್ ಮಾರಾಟ
ಮೈಸೂರು, ಡಿ. 26: ಮದ್ಯಪಾನಕ್ಕೆ ಎಷ್ಟೇ ವಿರೋಧ ವ್ಯಕ್ತವಾಗಬಹುದು. ಆದರೆ, ಅತ್ತ ಮದ್ಯವೂ ಅಲ್ಲ, ಇತ್ತ ಪಕ್ಕಾ ಹಣ್ಣಿನ ರಸವೂ ಅಲ್ಲದ ಸ್ಥಿತಿಯಲ್ಲಿರುವ ವೈನ್ ಮಾರಾಟಕ್ಕೆ ಸರ್ಕಾರವೇ ಪ್ರೋತ್ಸಾಹಿಸುತ್ತಿದೆ. ಆದ್ದರಿಂದಲೇ ಕರ್ನಾಟಕದಲ್ಲಿ ಜಾರಿಗೆ ತಂದಿರುವ ಹೊಸ ವೈನ್ ನೀತಿ ಮತ್ತು ಕರ್ನಾಟಕ ವೈನ್ ಮಂಡಳಿ ಸ್ಥಾಪನೆಯ ನಂತರ ರಾಜ್ಯದಲ್ಲಿ ವೈನ್ ಮಾರಾಟ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.
ಮದ್ಯಪಾನ ನಿಯಂತ್ರಿಸಲು 'ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ' ರಚಿಸಿದ್ದ ಸರ್ಕಾರ ವೈನ್ಗೆ ಉತ್ತೇಜನ ನೀಡಲು ಕರ್ನಾಟಕ ವೈನ್ ಬೋರ್ಡ್ ಸ್ಥಾಪಿಸಿದೆ. ಅಲ್ಲದೆ, ಕರ್ನಾಟಕ ದ್ರಾಕ್ಷಾರಸ ಸಂಸ್ಕರಣೆ ಮತ್ತು ವೈನ್ ನೀತಿ ಜಾರಿಗೆ ತಂದಿದೆ ಇದು ವೈನ್ ಉತ್ಪಾದನೆ ಹಾಗೂ ಮಾರಾಟ ಹೆಚ್ಚಾಗಲು ಕಾರಣ. [ಹೆದರಿಕೆ ಬಿಡಿ, ಕ್ರಿಸ್ ಮಸ್ ನಲ್ಲಿ ವೈನ್ ಜೊತೆ ಚಿಯರ್ಸ್ ಹೇಳಿ]
ಕರ್ನಾಟಕ ವೈನ್ ಮಂಡಳಿ ಅಧ್ಯಕ್ಷ ಬಿ. ಕೃಷ್ಣ ಅವರು ಮೈಸೂರಿನಲ್ಲಿ ವೈನ್ ಮೇಳ ಆರಂಭಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ನೀಡಿದ ಮಾಹಿತಿಯಿಂದ ವೈನ್ ಪ್ರಿಯರು ಹೆಚ್ಚಾಗಿರುವುದನ್ನು ದೃಢಪಡಿಸಿದೆ. ಅವರು ನೀಡಿರುವ ಅಂಕಿ ಅಂಶಗಳು ಈ ಕೆಳಗಿನಂತಿವೆ.
ಸುಮಾರು ಏಳು ವರ್ಷಗಳ ಮೊದಲು ರಾಜ್ಯದಲ್ಲಿ ವೈನ್ ಮಾರಾಟ ಪ್ರತಿ ವರ್ಷ ಸುಮಾರು 13.1 ಲಕ್ಷ ಲೀ. ಇತ್ತು. ಆದರೆ, ಸ್ಥಾಪನೆಯ ನಂತರ ವೈನ್ ಮಾರಾಟ 5 ಲಕ್ಷ ಲೀ.ಗೆ ಏರಿದೆ. ಮೊದಲು 500 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಈಗ ಸುಮಾರು 2,000 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದೆ.
ರಾಜ್ಯದಲ್ಲಿ ಮೊದಲು ಎರಡು ವೈನ್ ತಯಾರಿಕೆ ಘಟಕಗಳಿದ್ದರೆ, ಈಗ 17 ಘಟಕಗಳಿವೆ. ಇನ್ನೂ ಕೆಲವು ಘಟಕಗಳು ಆರಂಭವಾಗುವ ನಿರೀಕ್ಷೆಯಲ್ಲಿವೆ. ಇಲ್ಲಿಯವರೆಗೆ ಮೂರು ಅಂತಾರಾಷ್ಟ್ರೀಯ ವೈನ್ ಮೇಳ ನಡೆಸಲಾಗಿದ್ದು, ಇನ್ನಷ್ಟು ಮೇಳಗಳಿಗೆ ರೂಪುರೇಷೆ ಸಿದ್ಧವಾಗಿದೆ.
ಮೈಸೂರಲ್ಲಿ ವೈನ್ ಮೇಳ ಆರಂಭ : ಈ ಕುರಿತು ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ. ಮೈಸೂರಿನಲ್ಲೇ ವೈನ್ ಮಾರಾಟ ಶೇ. 30ರಷ್ಟು ಹೆಚ್ಚಾಗಿದ್ದು, ವಾರ್ಷಿಕ 1,43,000 ಲೀ. ಖರ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ನಂತರ ಡಿ. 26ರಿಂದ ಮೈಸೂರಿನಲ್ಲಿ ವೈನ್ ಮೇಳ ಆಯೋಜಿಸಲಾಗುತ್ತಿದೆ. ಈ ನಂತರ ಬೆಳಗಾವಿ ಹಾಗೂ ಬೀದರ್ನಲ್ಲಿಯೂ ಆಯೋಜಿಸಲಾಗುವುದು. ವೈನ್ ತಯಾರಿಕೆ ಹಾಗೂ ಮಾರಾಟ ಕುರಿತು ಜಾಗೃತಿ ಮೂಡಿಸಲು ಮೇಳ ಆಯೋಜಿಸಲಾಗುತ್ತಿದೆ ಎಂದು ಕೃಷ್ಣ ತಿಳಿಸಿದರು.
ವೈನ್ ಮಾರಾಟಕ್ಕಾಗಿ ಮಾರುಕಟ್ಟೆ ನಿರ್ಮಿಸುವ ಕುರಿತು ಪ್ರಸ್ತಾವನೆಯೊಂದನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು. ಈ ಮೂಲಕ ದ್ರಾಕ್ಷಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ನಿವಾರಿಸಲು ಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.