ಕೆಆರ್ ನಗರದ ನಿವಾಸಿಗಳ ನಿದ್ದೆಕೆಡಿಸಿದ ಕಾಡುಬೆಕ್ಕು
ಮೈಸೂರು, ಏಪ್ರಿಲ್ 15 : ಇತ್ತೀಚೆಗೆ ಕಾಡಿನಿಂದ ಆಹಾರ ಅರಸಿ ನಾಡಿನತ್ತ ಬರುವ ಚಿರತೆಗಳು ಅಲ್ಲಲ್ಲಿ ಕಾಣಿಸಿಕೊಂಡು, ಜಾನುವಾರು, ಮೇಕೆಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಬೆಕ್ಕನ್ನು ನೋಡಿದರೂ ಚಿರತೆ ಎಂಬ ಭ್ರಮೆಯಲ್ಲಿ ಜನ ಬೆಚ್ಚಿ ಬೀಳುವಂತಾಗಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಕೆ.ಆರ್.ನಗರದಲ್ಲಿ ಕಾಣಿಸಿಕೊಂಡ ಕಾಡುಬೆಕ್ಕೊಂದು ಜನರ ನಿದ್ದೆಗೆಡಿಸುವಂತೆ ಮಾಡಿದೆ. ಅಲ್ಲಿನ ಹುಣಸೂರು ರಸ್ತೆಯ ತೋಟದ ಬಳಿ ರಾತ್ರಿ ವೇಳೆಯಲ್ಲಿ ಕಾಡುಬೆಕ್ಕೊಂದು ಹಾದು ಹೋಗಿದೆ.
ಅದನ್ನು ನೋಡಿದವರ್ಯಾರೋ ಭಯದಿಂದ ಚಿರತೆ ನೋಡಿದೆ ಎಂದು ಗಾಳಿ ಸುದ್ದಿ ಹಬ್ಬಿಸಿದ್ದಾರೆ. ಈ ವಿಚಾರ ಜನರ ಬಾಯಿಂದ ಬಾಯಿಗೆ ಹರಡಿ ಪಟ್ಟಣದಲ್ಲಿ ಚಿರತೆಯದೇ ದೊಡ್ಡ ಸುದ್ದಿಯಾಗಿದೆ. ಜನರು ಕೂಡ ತಮಗೆ ತೋಚಿದಂತೆ ಮಾತನಾಡಿದ್ದರಿಂದ ಈ ವ್ಯಾಪ್ತಿಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. [ಕಾಡು ಬಿಟ್ಟು ನಾಡಿಗೆ ಚಿರತೆ ನುಗ್ಗಲು ಕಾರಣವೇನು?]
ಬೆಳಿಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹೆಜ್ಜೆ ಗುರುತನ್ನು ವೀಕ್ಷಿಸಿ ಇದು ಚಿರತೆ ಅಲ್ಲ ಕಾಡುಬೆಕ್ಕು ಎಂದು ಮನದಟ್ಟು ಮಾಡಿದ್ದಾರೆ. ಇದರಿಂದ ಇಲ್ಲಿನ ನಿವಾಸಿಗಳು ನಿರಾಳರಾಗಿದ್ದಾರೆ. ಆದರೂ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೊನೆಗೂ ದೊಡ್ಡದಾದ ಕಾಡು ಬೆಕ್ಕು ಹುಡುಕುವಲ್ಲಿ ಸಫಲರಾದರು. ಇದರಿಂದ ಜನರ ಆತಂಕವೂ ದೂರವಾಯಿತು.
ಈ ಕುರಿತು ಮಾಹಿತಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿ ಕುಮಾರ್ ಅವರು ಎಚ್ಚರದಿಂದ ಇರುವಂತೆಯೂ, ಮನೆಯ ಹೊರಗೆ ಮಲಗದಂತೆಯೂ, ರಾತ್ರಿ ಜಾನುವಾರು, ಕುರಿಮೇಕೆಗಳನ್ನು ಹೊರಗೆ ಬಿಡದಂತೆ ಹೇಳಿದ್ದಾರೆ. [ವಿಬ್ ಗಯಾರ್ ಶಾಲೆಗೆ ನುಗ್ಗಿದ್ದ ಚಿರತೆ ಸೆರೆ ಸಿಕ್ಕಿದ್ದು ಹೇಗೆ?]