ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ: ವಾಟಾಳ್ ನಾಗರಾಜ್
ಹಲವು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಜೂ. 12 ರಂದು ಕರ್ನಾಟಕ ಬಂದ್ ಆಚರಿಸಲಾಗುವುದು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಮೈಸೂರು, ಜೂನ್ 2: ಕಳಸಾ ಬಂಡೂರಿ, ಬೆಮಲ್ ಖಾಸಗೀಕರಣ ವಿರೋಧ, ಮಹಾದಾಯಿ ಯೋಜನೆ ಸೇರಿಂದತೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರಕಾರ ವಿಫಲವಾಗಿರುವುದನ್ನು ಖಂಡಿಸಿ ಜೂ. 12 ರಂದು ಕರ್ನಾಟಕ ಬಂದ್ ಆಚರಿಸಲಾಗುವುದು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.
ಮೈಸೂರಿನಲ್ಲಿ ಪಾದಯಾತ್ರೆ ಮೂಲಕ ಬಂದ್ ಕುರಿತು ವಿನೂತನ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ವಾಟಾಳ್, ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಈ ವಿಚಾರವಾಗಿ ಒತ್ತಾಯ ಮಾಡಿದ್ದೇವೆ. ಆದರೆ, ಈವರೆಗೂ ಕೂಡ ಸರ್ಕಾರ ನಮ್ಮ ಯಾವ ಬೇಡಿಕೆಗಳಿಗೂ ಮಣೆ ಹಾಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತಂತೆ ಸಾವಿರಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಒಗ್ಗೂಡಿ ಜೂನ್ 12 ರಂದು ಕರ್ನಾಟಕ ಬಂದ್ ಮಾಡಲಿದ್ದೇವೆ ಎಂದು ವಾಟಾಳ್ ಸ್ಪಷ್ಟಪಡಿಸಿದರು.[ಮೈಸೂರು: ಉದ್ಘಾಟನೆಗೆ ಮುನ್ನವೇ ಸೋರುತಿಹುದು ಶಾಲೆಯ ಮಾಳಿಗೆ!]
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದರೂ ಯಾವ ಪಕ್ಷವೂ ಸಹ ಪ್ರಾಮಾಣಿಕವಾದ ಹೋರಾಟ ಮಾಡುತ್ತಿಲ್ಲ. ಮುಂದಿನ ವರ್ಷ ಬರಲಿರುವ ಚುನಾವಣೆಗೆ ಸಿದ್ಥತೆ ಮಾಡಿಕೊಳ್ಳುವ ಭರದಲ್ಲಿದ್ದಾರೆಯೇ ಹೊರತು ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಯಚೂರಿನಲ್ಲಿ ಮಹಾದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ನಡೆಯುತ್ತಿದೆ. ಇದೊಂದು ಪ್ರಬುದ್ಧವಾದ ಚಳುವಳಿ.[ಜೂನ್ 3 ರಂದು 'ಕೊಟ್ಟ ಮಾತು ದಿಟ್ಟ ಸಾಧನೆ' ಸಮಾವೇಶ]
ಸತತ 2 ವರ್ಷಗಳಿಂದ ಚಳುವಳಿ ನಡೆಸುತ್ತಿದ್ದಾರೆ. ಬಿಜೆಪಿ ಲೋಕ ಸಭಾ ಸದಸ್ಯರು ಮನಸ್ಸು ಮಾಡಿದ್ದರೆ ಬಹಳ ಬೇಗ ಕಳಸಾ ಬಂಡೂರಿ ಮತ್ತು ಮಹಾದಾಯಿ ಹೋರಾಟಕ್ಕೆ ಜಯ ಸಿಗುತ್ತಿತ್ತು. ಆದರೆ ಇವರು ಕೈ ಚೆಲ್ಲಿ ಕುಳಿತಿದ್ದಾರೆ. ಹೀಗಾಗಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ವಿಶೇಷವಾಗಿ ಅಂತರಾಜ್ಯ ಬಸ್ ಗಳನ್ನು ತಡೆದು ಬಂದ್ ಗೆ ಸಹಕರಿಸುವಂತೆ ಒತ್ತಾಯ ಮಾಡಲಾಯಿತು.