ಬರ ಪರಿಶೀಲನಾ ಸಭೆ: ಟ್ಯಾಂಕರ್ ನೀರಿಗೆ ಕಾಗೋಡು ಸಲಹೆ
ಮೈಸೂರು, ಡಿಸೆಂಬರ್ 17 : ಕುಡಿಯುವ ನೀರು ಅತ್ಯಂತ ಪ್ರಮುಖವಾಗಿದ್ದು, ಎಷ್ಟೇ ಖರ್ಚಾದರೂ ನೀರುಬೇಕು. ಟ್ಯಾಂಕರ್ ಮೂಲಕ ತಾತ್ಕಾಲಿಕವಾಗಿ ನೀರು ಒದಗಿಸಲು ವ್ಯವಸ್ಥೆ ಮಾಡಬೇಕೆಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಹೇಳಿದರು.
ಬರ ಅಧ್ಯಯನಕ್ಕಾಗಿ ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿಯ ನೇತೃತ್ವ ವಹಿಸಿರುವ ಕಂದಾಯ ಸಚಿವರು ಶುಕ್ರವಾರ ಮೈಸೂರು ಜಿಲ್ಲೆಯ ಬರ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು. ಬರಪರಿಸ್ಥಿತಿ ನಿಭಾಯಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 60 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಕೆಲವು ಗುತ್ತಿಗೆದಾರರು ಬೇಗ ಕೆಲಸ ಮಾಡುತ್ತಾರೆ. ಕೆಲವರು ವಿಳಂಬ ಮಾಡುತ್ತಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಎಲ್ಲ ಕ್ಷೇತ್ರಗಳಲ್ಲೂ ತ್ವರಿತವಾಗಿ ಕೆಲಸವಾಗುವಂತೆ ನಿಗಾ ವಹಿಸಬೇಕು ಎಂದರು.[ಸಚಿವರಿಂದ ರಾಜ್ಯ ಬರ ಅಧ್ಯಯನ ಪ್ರವಾಸ]
ಟಾಸ್ಕಪೋರ್ಸ್ ಸಮಿತಿ ವತಿಯಿಂದ ಬರ ಕಾಮಗಾರಿ ಕೆಲಸ ತೆಗೆದುಕೊಳ್ಳಲು ಹಣ ಬಿಡುಗಡೆ ಮಾಡಿದೆ ಯಾವ ಉದ್ದೇಶಕ್ಕಾಗಿ ಹಣ ಬಿಡುಗಡೆ ಮಾಡಿದೆ ಅದೇ ಉದ್ದೇಶಕ್ಕೆ ಬಳಕೆಯಾಗಿರಬೇಕು. ಈ ಬಗ್ಗೆ ಸರ್ಕಾರಕ್ಕೆ ಒಂದು ವಾರದೊಳಗೆ ವರದಿ ನೀಡಬೇಕು ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಪರಿಶೀಲಿಸಿದ ಅವರು ಕಾಮಗಾರಿ ಪೂರ್ಣಗೊಂಡಿರುವ ಆರ್ಒ ಘಟಕಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದೆಯೇ ಎಂದು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದರು.[ಹಾವೇರಿಯಲ್ಲಿ ಬರ, ಉದ್ಯೋಗ ಸೃಷ್ಟಿಗೆ ದೇಶಪಾಂಡೆ ಭರವಸೆ]
ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ಮಾತನಾಡಿ ಮೈಸೂರು ತಾಲ್ಲೂಕಿನ ಜಯಪುರ, ಇಲವಾಲ ಹಾಗೂ ಕಸಬಾ ಹೋಬಳಿಗಳ ಜಟ್ಟಿಹುಂಡಿ, ಕೆ.ಹೆಮ್ಮನಹಳ್ಳಿ, ಹಿನಕಲ್, ಕೆ. ಮಾದಹಳ್ಳಿ, ಮದ್ದೂರ ಹುಂಡಿ, ಕೇರ್ಗಹಳ್ಳಿ, ಕೂರ್ಗಹಳ್ಳಿ ಗ್ರಾಮಗಳಿಗೆ ಪ್ರತಿ ದಿನ ನೀರು ಸರಬರಾಜು ಮಾಡಲು 12 ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿದ್ದು, ಈ ಟ್ಯಾಂಕರ್ ಗಳು ಪ್ರತಿ ದಿನ 3 ರಿಂದ 5 ಟ್ರಿಪ್ ನೀರು ಸರಬರಾಜು ಮಾಡುತ್ತಿದೆ. ನಂಜನಗೂಡು ತಾಲ್ಲೂಕಿನ ಕಸಬಾ ಹೋಬಳಿಯ ಕಸುವಿನಹಳ್ಳಿ ಗ್ರಾಮಕ್ಕೆ ಪ್ರತಿ ದಿನ ನೀರು ಸರಬರಾಜು ಮಾಡಲು 2 ಟ್ಯಾಂಕರ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.